ಹುಬ್ಬಳ್ಳಿ, ಸೆ. 18: ಮಳೆಯಿಂದ ಪದೆ ಪದೇ ಪಂದ್ಯಕ್ಕೆ ಅಡ್ಡಿ ಉಂಟಾದರೂ ಕೆಪಿಎಲ್ 5ನೇ ಆವೃತ್ತಿಯ ಐದನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಳ್ಳಾರಿ ಟಸ್ಕರ್ಸ್ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ನಂತರ ನಮ್ಮ ಶಿವಮೊಗ್ಗ ತಂಡದ ರನ್ ಚೇಸಿಂಗ್ ಗೆ ಮಳೆ ಅಡ್ಡಿಪಡಿಸಿದರೂ ಜಯಕ್ಕೆ ಅಡ್ಡಿಯಾಗಲಿಲ್ಲ.
ಶಿವಮೊಗ್ಗದ ರನ್ ಚೇಸ್ : 170 ರನ್ ಗಳ ಗುರಿ ಪಡೆದಿದ್ದ ನಮ್ಮ ಶಿವಮೊಗ್ಗಕ್ಕೆ ನಂತರ 16 ಓವರ್ ಗಳಲ್ಲಿ 143ರನ್ ಗುರಿ ನೀಡಲಾಯಿತು. 10 ಓವರ್ ಗಳಲ್ಲಿ 86/4 ಸ್ಕೋರ್ ಮಾಡಿ 36 ಎಸೆತಗಳಲ್ಲಿ 57 ರನ್ ಗಳಿಸುವ ಟಾರ್ಗೆಟ್ ಪಡೆಯಿತು. ಉತ್ತಮ ಆಟವಾಡಿದ ಶ್ರೇಯಸ್ ಗೋಪಾಲ್ 42 ರನ್ ಗಳಿಸಿದ್ದಾಗ ಭಾರಿ ಹೊಡೆತಕ್ಕೆ ಯತ್ನಿಸಿ ಬೌಂಡರಿ ಗೆರೆ ಬಳಿ ಕ್ಯಾಚಿತ್ತು ಔಟಾದರು.

ಅಬ್ರಾಬ್ ಖಾಜಿ 37 ರನ್ ಗಳಿಸಿ ಪೆವಿಲಿಯನ್ ಸೇರಿದರು. ಆದರೆ, ಶಿವಮೊಗ್ಗ ತಂಡ ಕೊನೆ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿ ಬಳ್ಳಾರಿ ವಿರುದ್ಧ ರೋಚಕ ಜಯ ದಾಖಲಿಸಿತು.
ಬಳ್ಳಾರಿ ಇನ್ನಿಂಗ್ಸ್ : ಮೊದಲು ಬ್ಯಾಟಿಂಗ್ ಮಾಡಿದ ಬಳ್ಳಾರಿ ಉತ್ತಮ ಆರಂಭವನ್ನು ಪಡೆಯಲಿಲ್ಲ. ಕದಂ ಶೂನ್ಯಕ್ಕೆ ಔಟಾದರು. ಕೆ ಪವನ್ 36 ಎಸೆತಗಳಲ್ಲಿ 42 ರನ್ ಹಾಗೂ ಅಮಿತ್ ವರ್ಮಾ 27 ರನ್ ಗಳಿಸಿ ಉತ್ತಮ ಜೊತೆಯಾಟ ಪ್ರದರ್ಶಿಸಿದರು.
ಕೊನೆ ಹಂತದಲ್ಲಿ ರಾಜು 28, ಆಲ್ ರೌಂಡರ್ ಬಿ ಅಖಿಲ್ ಅಜೇಯ 20 ರನ್ (12 ಎಸೆತಗಳು), ಮಂಜುನಾಥ್ 28 ರನ್ ಗಳಿಸಿ ತಂಡದ ಮೊತ್ತವನ್ನು 20 ಓವರ್ ಗಳಲ್ಲಿ 169/6 ಕ್ಕೇರಿಸಿದರು.
ನಮ್ಮ ಶಿವಮೊಗ್ಗ ಪರ ಅಪ್ಪಣ್ಣ 2, ಶ್ರೇಯಸ್ ಗೋಪಾಲ್ ಹಾಗೂ ಸ್ಟುವರ್ಟ್ ಬಿನ್ನಿ ತಲಾ 1 ವಿಕೆಟ್ ಪಡೆದರು. 13 ರನ್ ಇತರೆ ರನ್ ಗಳ ಕೊಡುಗೆ ಬೇರೆ ನೀಡಿದರು. ಡೇವಿಡ್ ಮಥಾಯಿಸ್ 4 ಓವರ್ ಗಳಲ್ಲಿ 43 ರನ್ನಿತ್ತು ದುಬಾರಿ ಎನಿಸಿದರು.