ಕೆಪಿಎಲ್ 2016 : ಪಂದ್ಯಗಳಿಗೆ ವರುಣನ ಕಾಟ
ಹುಬ್ಬಳ್ಳಿ, ಸೆ. 29: ನಗರದಲ್ಲಿ ಸೆ.17 ರಿಂದ ಆರಂಭವಾಗಿರುವ ಕರ್ನಾಟಕ ಪ್ರೀಮಿಯರ್ ಲೀಗ್ 5ನೇ ಆವೃತ್ತಿಯ ಕ್ರಿಕೆಟ್ ಪಂದ್ಯಾವಳಿಗೆ ಪದೇ ಪದೇ ಮಳೆ ಅಡ್ಡಿಪಡಿಸುತ್ತಿರುವುದರಿಂದ ಕ್ರಿಕೆಟ್ ಪ್ರೇಮಿಗಳಿಗೆ ನಿರಾಶೆ ಮೂಡಿಸಿದೆ.
ನಗರದ ರಾಜನಗರದ ಕೆಎಸ್ ಎ ಮೈದಾನದಲ್ಲಿ ನಡೆಯುತ್ತಿರುವ ಕೆಪಿಎಲ್ ಪಂದ್ಯಾವಳಿಯಲ್ಲಿ ಇದುವರೆಗೆ(ಸೆ. 28) 23 ಪಂದ್ಯಗಳು ನಡೆದಿವೆ. ಈ ಪೈಕಿ ಐದು ಪಂದ್ಯಗಳಿಗೆ ಮಳೆ ಅಡ್ಡಿಯಾಗಿದ್ದು, ಒಂದು ಪಂದ್ಯ ರದ್ದುಗೊಂಡಿದೆ.

ಸೆ. 19 ರಂದು ಶಿವಮೊಗ್ಗ ಹಾಗೂ ಬಳ್ಳಾರಿ ತಂಡಗಳ ನಡುವೆ ನಡೆದ ಪಂದ್ಯದ ವೇಳೆ ಶಿವಮೊಗ್ಗ ತಂಡ ಜಯದ ಗುರಿ ಬೆನ್ನು ಹತ್ತಿದ ಸಂದರ್ಭದಲ್ಲಿ ಮಳೆ ಬಿದ್ದ ಕಾರಣ 16 ಓವರ್ ಗಳಿಗೆ ಸೀಮಿತಗೊಳಿಸಿದ ಪಂದ್ಯದಲ್ಲಿ ನಮ್ಮ ಶಿವಮೊಗ್ಗ ತಂಡ ಜಯ ದಾಖಲಿಸಿತು.
ಸೆ.21 ರಂದು ನಡೆದ ಹುಬ್ಬಳ್ಳಿ ಮತ್ತು ಬಳ್ಳಾರಿ ನಡುವಿನ ಪಂದ್ಯಕ್ಕೆ ವರುಣನ ಅಡ್ಡಿಯಾಯಿತು. ಇದರಿಂದ ಪಂದ್ಯ ಕೆಲ ಹೊತ್ತು ವಿಳಂಬವಾಯಿತು. ನಂತರ ಪಂದ್ಯವನ್ನು 16 ಓವರ್ ಗಳಿಗೆ ಸೀಮಿತಗೊಳಿಸಲಾಯಿತು. ಈ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ಜಯ ದಾಖಲಿಸಿತು. ಮಂಗಳೂರು ಹಾಗೂ ಬಿಜಾಪುರ ತಂಡಗಳ ನಡುವೆ ನಡೆದ ಪಂದ್ಯ ಮಳೆಗೆ ಆಹುತಿಯಾಗಿದ್ದರಿಂದ ಉಭಯ ತಂಡಗಳಿಗೆ ತಲಾ ಒಂದು ಅಂಕ ನೀಡಲಾಯಿತು.
ಸೆ.26 ರಂದು ಬೆಳಗಾವಿ ಮತ್ತು ಬಳ್ಳಾರಿ ತಂಡಗಳ ನಡುವೆ ನಡೆದ ಪಂದ್ಯಕ್ಕೂ ಕೂಡ ಮಳೆಯಿಂದ ವ್ಯತ್ಯಯ ಉಂಟಾಯಿತು. ಹೀಗಾಗಿ ಪಂದ್ಯವನ್ನು ತಲಾ 13 ಓವರ್ ಗಳಿಗೆ ಸೀಮಿತಗೊಳಿಸಲಾಯಿತು. ಈ ಪಂದ್ಯದಲ್ಲಿ ಬಳ್ಳಾರಿ ತಂಡವು ಗೆಲುವಿನ ನಗೆ ಬೀರಿತು.
ಸೆ.28ರ ಬುಧವಾರ ನಡೆದ ರಾಕ್ ಸ್ಟಾರ್ಸ್ ಹಾಗೂ ಬೆಳಗಾವಿ ತಂಡಗಳ ಪಂದ್ಯಕ್ಕೂ ಕೂಡ ವರುಣ ಅಡ್ಡಿಯಾಯಿತು. ಹೀಗಾಗಿ ಪಂದ್ಯವನ್ನು 18 ಓವರ್ ಗಳಿಗೆ ಇಳಿಸಲಾಯಿತು. ಈ ಪಂದ್ಯದಲ್ಲಿ ಬೆಳಗಾವಿ ಪ್ಯಾಂಥರ್ಸ್ ಸುಲಭ ಜಯ ಗಳಿಸಿತು. ಅ.2 ರವರೆಗೆ ಕೆಪಿಎಲ್ ಪಂದ್ಯಗಳು ಹುಬ್ಬಳ್ಳಿಯಲ್ಲಿ ನಡೆಯಲಿದ್ದು, ಅಲ್ಲಿಯವರೆಗೂ ಪಂದ್ಯಗಳಿಗೆ ವರುಣ ಅಡ್ಡಿ ಪಡಿಸದಿರಲಿ ಎಂಬುವುದು ಕ್ರಿಕೆಟ್ ಅಭಿಮಾನಿಗಳ ಆಸೆಯವಾಗಿದೆ.
ಅಂಕಗಳು : ಮೈಸೂರು ವಾರಿಯರ್ಸ್ 10, ಹುಬ್ಬಳ್ಳಿ ಟೈಗರ್ಸ್ 8, ಬಿಜಾಪುರ ಬುಲ್ಸ್ 7, ಬಳ್ಳಾರಿ ಟಸ್ಕರ್ಸ್ , ಬೆಳಗಾವಿ ಪ್ಯಾಂಥರ್ಸ್ ಹಾಗೂ ನಮ್ಮ ಶಿವಮೊಗ್ಗ ತಲಾ 6 ಅಂಕ ಪಡೆದಿವೆ. ಮಂಗಳೂರು ಯುನೈಟೆಡ್ಸ್ ಕೇವಲ 3 ಅಂಕಗಳನ್ನು ಗಳಿಸಿದ್ದು 7 ನೇ ಸ್ಥಾನದಲ್ಲಿದೆ. ಆಡಿದ 6 ಲೀಗ್ ಪಂದ್ಯಗಳನ್ನು ಸೋತಿರುವ ರಾಕಸ್ಟಾರ್ಸ್ ತಂಡ ಅಂಕಗಳ ಖಾತೆ ತೆರೆಯದೆ ಕೊನೆಯ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications