
ಮೈಸೂರು, ಸೆಪ್ಟೆಂಬರ್ 2: ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ನಡೆದ ಕೆಪಿಎಲ್ 19ನೇ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ ವಿರುದ್ಧ ಬಿಜಾಪುರ್ ಬುಲ್ಸ್ 2 ವಿಕೆಟ್ ಜಯ ಸಾಧಿಸಿದೆ. ಈ ಪಂದ್ಯದೊಂದಿಗೆ ಬಿಜಾಪುರ್ ಪಾಯಿಂಟ್ ಟೇಬಲ್ ನಲ್ಲಿ ಮೂರನೇ ಸ್ಥಾನದಲ್ಲಿದೆ.
ಆಡಿರುವ 5 ಪಂದ್ಯಗಳಲ್ಲಿ 5ರಲ್ಲೂ ಸೋಲುವ ಮೂಲಕ ಶಿವಮೊಗ್ಗ ಲಯನ್ಸ್ ದುರ್ಬಲ ತಂಡವಾಗಿ ಗೋಚರಿಸಿತು. ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಶಿವಮೊಗ್ಗ ತಂಡ 20 ಓವರ್ ಗಳಲ್ಲಿ 9 ವಿಕೆಟ್ ಕಳೆದು 140 ರನ್ ಪೇರಿಸಿತು. ಸಾಧಾರಣ ರನ್ ಗುರಿ ಬೆನ್ನತ್ತಿದ ಬಿಜಾಪುರ್ 19.5 ಓವರ್ ನಲ್ಲಿ 8 ವಿಕೆಟ್ ಕಳೆದು 143 ರನ್ ಪೇರಿಸುವುದರೊಂದಿಗೆ ಗೆಲುವನ್ನಾಚರಿಸಿತು.
ಲಯನ್ಸ್ ಪರ ಅಧೋಕ್ಷ್ ಹೆಗ್ಡೆ 42, ಆದಿತ್ಯ ಸೋಮಣ್ಣ 37, ಶರತ್ ಬಿಆರ್ 23, ರೋಹಿತ್ ಕೆ 22 ರನ್ ಬಾರಿಸಿ ಮೊತ್ತ ಏರಿಸುವಲ್ಲಿ ಶ್ರಮಿಸಿದರಾದರೂ ಪ್ರಯೋಜನಕ್ಕೆ ಬರಲಿಲ್ಲ. ಬುಲ್ಸ್ ಪರ ನಾಯಕ ಭರತ್ ಚಿಪ್ಲಿ 43, ಮೀರ್ ಅಬ್ಬಾಸ್ 51 ರನ್ ಪೇರಿಸಿ ತಂಡದ ಗೆಲುವಿಗೆ ಕಾರಣರಾದರು.
ಈ ಪಂದ್ಯದೊಂದಿಗೆ ಬಿಜಾಪುರ್ 8 ಪಾಯಿಂಟ್ ನೊಂದಿಗೆ ಪಾಯಿಂಟ್ ಟೇಬಲ್ ನ 3ನೇ ಸ್ಥಾನದಲ್ಲಿದ್ದರೆ ಬೆಂಗಳೂರು ಮತ್ತು ಹುಬ್ಳಿ ತಲಾ 9 ಅಂಕಗಳೊಂದಿಗೆ ಪ್ರಥಮ ಮತ್ತು ದ್ವಿತೀಯ ಸ್ಥಾನದಲ್ಲಿದೆ. 21 ರನ್ ಗೆ ಲಯನ್ಸ್ ನ 4 ವಿಕೆಟ್ ಉರುಳಿಸಿದ ಬುಲ್ಸ್ ತಂಡದ ಕೆಪಿ ಅಪ್ಪಣ್ಣ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.