
ಬೆಂಗಳೂರು, ಆಗಸ್ಟ್ 20: ನಿಹಾಲ್ ಉಳ್ಳಾಲ್ ಮತ್ತು ನಾಯಕ ಅಭಿಮನ್ಯು ಮಿಥುನ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಶಿವಮೊಗ್ಗ ಲಯನ್ಸ್ ತಂಡ ಸೋಲಿಲ್ಲದ ಸರದಾರನಾಗಿ ಸತತ 3ನೇ ಗೆಲುವು ದಾಖಲಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಂಗಳವಾರ (ಆಗಸ್ಟ್ 20) ನಡೆದ ಕೆಪಿಲ್ 2019ರ 9ನೇ ಪಂದ್ಯದಲ್ಲಿ ಶಿವಮೊಗ್ಗ ತಂಡ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 7 ವಿಕೆಟ್ ಜಯ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಬೆಂಗಳೂರು ಬ್ಲಾಸ್ಟರ್ಸ್ಗೆ ಶರತ್ ಬಿಆರ್ ಮತ್ತು ರೋಹನ್ ಕದಮ್ ಉತ್ತಮ ಆರಂಭ ನೀಡಿದರು. ಶರತ್ 42 (23), ಕದಮ್ 25, ನಿಕಿನ್ ಜೋಸ್ ಅಜೇಯ 23, ಕೆಎನ್ ಭರತ್ ಅಜೇಯ 16 ರನ್ ಸೇರಿಸಿದರು. ಮಳೆ ಶುರುವಾಗಿದ್ದರಿಂದ ಇನ್ನಿಂಗ್ಸ್ ಅನ್ನು 16 ಓವರ್ಗೆ ನಿಲ್ಲಿಸಲಾಯ್ತು.
ಈ ವೇಳೆ ಬೆಂಗಳೂರು 3 ವಿಕೆಟ್ ಕಳೆದು 114 ರನ್ ಬಾರಿಸಿತ್ತು. ವಿಜೆಡಿ ನಿಯಮದ ಪ್ರಕಾರ ಶಿವಮೊಗ್ಗ ಲಯನ್ಸ್ಗೆ 12 ಓವರ್ಗೆ 106 ರನ್ ಗುರಿ ನೀಡಲಾಯ್ತು. ಲಯನ್ಸ್ನ ಪವನ್ ದೇಶಪಾಂಡೆ 12 ರನ್ಗೆ 2, ಪೃಥ್ವಿರಾಜ್ ಶೆಖಾವತ್ 1 ವಿಕೆಟ್ ಪಡೆದರು.
ಗುರಿ ಬೆಂಬತ್ತಿದ ಶಿವಮೊಗ್ಗ ಲಯನ್ಸ್ ಆರಂಭದಲ್ಲೇ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭಿಕ ಬ್ಯಾಟ್ಸ್ಮನ್ಗಳಾದ ಅರ್ಜುನ್ ಹೊಯ್ಸಳ 16, ನಿಹಾಲ್ ಉಳ್ಳಾಲ್ 33 (17), ಎಂ ನಿಧೀಶ್ ಅಜೇಯ 17, ನಾಯಕ ಅಭಿಮನ್ಯು ಮಿಥುನ್ ಅಜೇಯ 34 ರನ್ (13 ಎಸೆತ) ಸೇರಿಸಿದ್ದರಿಂದ ಲಯನ್ಸ್ 10.1 ಓವರ್ಗೆ 3 ವಿಕೆಟ್ ಕಳೆದು 107 ರನ್ ಮಾಡಿತು.
ಲಯನ್ಸ್ ಇನ್ನಿಂಗ್ಸ್ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್ನ ಆನಂದ್ ದೊಡ್ಡಮನಿ 20 ರನ್ಗೆ 2, ಭರತ್ ದೇವರಾಜ್ 1 ವಿಕೆಟ್ ಪಡೆದರು. ಪಂದ್ಯಶ್ರೇಷ್ಠ ಪ್ರಶಸ್ತಿ ಅಭಿಮನ್ಯು ಮಿಥುನ್ಗೆ ಒಲಿಯಿತು. ಈ ಪಂದ್ಯದೊಂದಿಗೆ ಶಿವಮೊಗ್ಗ ಲಯನ್ಸ್ 3 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.