
ಬೆಂಗಳೂರು, ಡಿಸೆಂಬರ್ 3: ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿ ಬೆಳಗಾವಿ ಪ್ಯಾಂಥರ್ಸ್ ಕೋಚ್ ಸುಧೀಂದ್ರ ಶಿಂಧೆ ಅವರನ್ನು ಸೆಂಟ್ರಲ್ ಕ್ರೈಮ್ ಬ್ರ್ಯಾಂಚ್ (ಸಿಸಿಬಿ) ಪೊಲೀಸರು, ಶಿಂಧೆ ನಿವಾಸವಾದ ಬೆಂಗಳೂರಿನ ಇಂದಿರಾನಗರದಲ್ಲಿ ಮಂಗಳವಾರ (ಡಿಸೆಂಬರ್ 3) ಬಂಧಿಸಿದ್ದಾರೆ.
ಕೆಪಿಎಲ್ 2019ರ ಮ್ಯಾಚ್ ಫಿಕ್ಸಿಂಗ್ಗಾಗಿ ಸುಧೀಂದ್ರ ಶಿಂಧೆ, ಆಟಗಾರರನ್ನು ಸಂಪರ್ಕಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ಗೆ ಶಿಂಧೆಯೇ ಕಿಂಗ್ಪಿನ್ ಎನ್ನಲಾಗುತ್ತಿದೆ. ಶಿಂಧೆ ಕರ್ನಾಟಕ ರಣಜಿ ತಂಡದ ಮಾಜಿ ಆಟಗಾರರೂ ಹೌದು.
ಫಿಕ್ಸಿಂಗ್ಗೆ ಸಂಬಂಧಿಸಿ ಶಿಂಧೆ ಮೇಲೆ ಆರೋಪ ಕೇಳಿಬಂದ ಬೆನ್ನಲ್ಲಿ ಕೋರ್ಟ್ ಮೂಲಕ ಸರ್ಚ್ ವಾರೆಂಟ್ ಪಡೆದ ಸಿಸಿಬಿ ಪೊಲೀಸರು, ಬೆಂಗಳೂರಿನಲ್ಲಿರುವ ಅವರ ನಿವಾಸದ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆ. ಕರ್ನಾಟಕ ಅಂಡರ್ 19 ತಂಡದ ಕೋಚ್ ಜವಾಬ್ದಾರಿಯಲ್ಲೂ ಇರುವ ಶಿಂಧೆ ಕೆಎಸ್ಸಿಎ ಸ್ಥಾಪಕ ಸದಸ್ಯರೂ ಕೂಡ.
ಮೈಸೂರಿನಲ್ಲಿ ನಡೆದಿದ್ದ ಕೆಪಿಎಲ್ ಫೈನಲ್ ನಲ್ಲಿ ಫಿಕ್ಸಿಂಗ್ ನಡೆದಿದೆ ಎಂಬ ಆರೋಪದ ಮೇರೆಗೆ ನಮ್ಮ ಶಿವಮೊಗ್ಗ ತಂಡದ ಆಟಗಾರ ನಿಶಾಂತ್ ಸಿಂಗ್ ಶೇಖಾವತ್ (29), ಬಳ್ಳಾರಿ ಟಸ್ಕರ್ಸ್ ತಂಡದ ನಾಯಕ ಸಿಎಂ ಗೌತಮ್, ಅಬ್ರಾರ್ ಕಾಜಿ ಸೇರಿದಂತೆ ಇನ್ನೊಂದಿಷ್ಟು ಆಟಗಾರರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದರು.