ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮತ್ತು ಬಿಸಿಸಿಐ ಜಂಟಿಯಾಗಿ ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಇದೇ ಮೊದಲ ಬಾರಿಗೆ ಭಾರತ ಏಕದಿನ ವಿಶ್ವಕೊಪ್ ಟೂರ್ನಿಯನ್ನು ಏಕಾಂಗಿಯಾಗಿ ಆಯೋಜನೆ ಮಾಡುತ್ತಿದ್ದು ಅದಕ್ಕೆ ಸಂಬಂಧಿಸಿದ ಸಿದ್ಧತೆಗಳನ್ನು ಭರದಿಂದ ನಡೆಸುತ್ತಿದೆ. 2011ರಲ್ಲಿ ಭಾರತ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡಗಳು ಜಂಟಿಯಾಗಿ ವಿಶ್ವಕಪ್ ಆಯೋಜಿಸಿದ್ದಾಗ ಎಂಎಸ್ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟಕ್ಕೇರಿತ್ತು. ಇದೀಗ ಸಂಪೂರ್ಣವಾಗಿ ವಿಶ್ವಕಪ್ ಟೂರ್ನಿ ಭಾರತದಲ್ಲಿಯೇ ನಡೆಯಲಿದ್ದು ಈ ಬಾರಿಯೂ ಅಂಥಾದ್ದೇ ಸಾಧನೆಯ ನಿರೀಕ್ಷೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿದೆ.
ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ಕ್ರಿಸ್ ಶ್ರೀಕಾಂತ್ ಟೀಮ್ ಇಂಡಿಯಾ ಬಗ್ಗೆ ಭಾರೀ ಭರವಸೆ ವ್ಯಕ್ತಪಡಿಸಿದ್ದು ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು ಎಂದಿದ್ದಾರೆ. ಈ ಬಾರಿಯೂ ಭಾರತ 2011ರಲ್ಲಿ ಮಾಡಿದ ಸಾಧನೆಯನ್ನು ಮರುಕಳಿಸುವ ವಿಶ್ವಾಸವನ್ನು ಕ್ರಿಸ್ ಶ್ರೀಕಾಂತ್ ವ್ಯಕ್ತಪಡಿಸಿದ್ದು ಅಂದಿನ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಪರವಾಗಿ ಆಲ್ರೌಂಡರ್ ಯುವರಾಜ್ ಸಿಂಗ್ ಮಾಡಿದ್ದ ಸಾಧನೆಯನ್ನು ಈ ಬಾರಿ ರವೀಂದ್ರ ಜಡೇಜಾ ಮಾಡಲಿದ್ದಾರೆ ಎಂಬ ಭವಿಷ್ಯ ನುಡಿದಿದ್ದಾರೆ.

2011ರ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಲು ಪ್ರಮುಖ ಕಾರಣವಾಗಿದ್ದು ಯುವರಾಜ್ ಸಿಂಗ್. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಅಮೋಘ ಪ್ರದರ್ಶನ ನೀಡಿದ್ದ ಯುವಿ ಆ ಟೂರ್ನಿಯಲ್ಲಿ 362 ರನ್ ಗಳಿಸಿದ್ದಲ್ಲದೆ 15 ವಿಕೆಟ್ಗಳನ್ನು ಪಡೆದುಕೊಂಡಿದ್ದರು. ಈ ಅದ್ಭುತ ಸಾಧನೆಯ ಕಾರಣದಿಂದಾಗಿ ಅವರು ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡಿದ್ದರು. ಮುಂಬರುವ ಏಕದಿನ ವಿಶ್ವಕಪ್ನಲ್ಲಿ ಭಾರತದ ಪರವಾಗಿ ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ಅವರಿಂದ ಇಂಥಾದ್ದೇ ಪ್ರದರ್ಶನವನ್ನು ನಿರೀಕ್ಷಿಸಬಹುದು ಎಂದಿದ್ದಾರೆ ಕ್ರಿಸ್ ಶ್ರೀಕಾಂತ್.
"2011ರ ವಿಶ್ವಕಪ್ನಲ್ಲಿ ಸಾಕಷ್ಟು ಆಲ್ರೌಂಡರ್ಗಳು ತಂಡದಲ್ಲಿದ್ದು ಅದ್ಭುತ ಪ್ರದರ್ಶನವನ್ನು ನೀಡಿರುವುದನ್ನು ನೋಡಿದ್ದೇವೆ. ಎಂಎಸ್ ಧೋನಿ ಅದ್ಭುತವಾಗಿ ತಂಡವನ್ನು ಮು್ನನಡೆಸಿದ್ದರೆ ಯುವರಾಜ್ ಸಿಂಗ್ ಶ್ರೇಷ್ಠ ಪ್ರದರ್ಶನ ನೀಡಿದ್ದರು. 2011ರ ವಿಶ್ವಕಪ್ನಲ್ಲಿ ಯುವರಾಜ್ ಸಿಂಗ್ ಮಾಡಿದ್ದನ್ನು ರವೀಂದ್ರ ಜಡೇಜಾ ಈ ಬಾರಿ ಮಾಡಲಿದ್ದಾರೆ ಎಂಬುದು ನನ್ನ ಭಾವನೆ. ಭಾರತವು ಈ ಬಾರಿಯ ವಿಶ್ವಕಪ್ ಗೆಲ್ಲಬೇಕಾದರೆ ಜಡೇಜಾ, ಅಕ್ಸರ್ ಪಟೇಲ್ ಅವರು ಬಹಳ ನಿರ್ಣಾಯಕ ಪಾತ್ರವನ್ನು ವಹಿಸಬೇಕಿದೆ" ಎಂದು ಕ್ರಿಸ್ ಶ್ರೀಕಾಂತ್ ಹಿಂದುಸ್ತಾನ್ ಟೈಮ್ಸ್ಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಅಂದಹಾಗೆ 1983ರ ವಿಶ್ವಕಪ್ ವಿಜೇತ ತಂಡದ ಬ್ಯಾಟಿಂಗ್ ಸ್ಟಾರ್ ಕ್ರಿಸ್ ಶ್ರೀಕಾಂತ್ ಈ ಬಾರಿಯ ವಿಶ್ವಕಪ್ ಗೆಲ್ಲುವ ಸಾಮರ್ಥ್ಯವಿರುವ ಮೂರು ತಂಡಗಳನ್ನು ಹೆಸರಿಸಿದ್ದಾರೆ. ಆತಿಥೇಯ ಭಾರತ ತಂಡ, ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ಹಾಲಿ ಚಾಂಪಿಯನ್ ಇಂಗ್ಲೆಂಡ್ ಈ ಮೂರು ತಂಡಗಳ ಪೈಕಿ ಯಾವುದಾದರೂ ಒಂದು ತಂಡ ಈ ಬಾರಿಯ ವಿಶ್ವಕಪ್ ಗೆಲ್ಲುವುದು ನಿಶ್ಚಿತ ಎಂದಿದ್ದಾರೆ ಕ್ರಿಸ್ ಶ್ರೀಕಾಂತ್.
ತಮ್ಮ ಈ ಅಭಿಪ್ರಾಯಕ್ಕೆ ಶ್ರೀಕಾಂತ್ ಕಾರಣವನ್ನು ಕೂಡ ವಿವರಿಸಿದ್ದಾರೆ. ಭಾರತ ತಂಡಕ್ಕೆ ತವರಿನ ವಾತಾವರಣದ ಲಾಭ ದೊರೆಯಲಿದ್ದು ಇದರಿಂದಾಗಿ ಭಾರ ವಿಶ್ವಕಪ್ ಗೆಲ್ಲುವ ಅವಕಾಶ ಹೆಚ್ಚಿದೆ ಎಂದಿದ್ದಾರೆ. ಇನ್ನು ಐಪಿಎಲ್ನಿಂದಾಗಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ನ ಆಟಗಾರರು ಕೂಡ ಹೆಚ್ಚಿನ ಪ್ರಮಾಣದಲ್ಲಿ ಭಾರತ ಕಳೆಯುವ ಕಾರಣ ಇಲ್ಲಿನ ವಾತಾವರಣ ಅವರಿಗೂ ಪರಿಚಿತವಾಗಿದ್ದು ಅದು ಈ ತಂಡಗಳಿಗೂ ನೆರವಾಗಲಿದೆ ಎಂದಿದ್ದಾರೆ.
"ಭಾರತ ತಂಡ ಈ ಬಾರಿಯ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಆಸ್ಟ್ರೇಲಿಯಾ ಕೂಡ ಬಹಳ ಉತ್ತಮ ತಂಡವನ್ನು ಹೊಂದಿದ್ದು ಅದು ಕೂಡ ಫೇವರೀಟ್. ಇನ್ನು ಇಂಗ್ಲೆಂಡ್ ಕೂಡ ಬಹಳ ಉತ್ತಮವಾದ ಆಟಗಾರರ ಪಡೆಯನ್ನು ಹೊಂದಿದೆ" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಕ್ರಿಸ್ ಶ್ರೀಕಾಂತ್.