
ಕೊಲಂಬೋ: ಕನ್ನಡಿಗ ಕೃಪ್ಣಪ್ಪ ಗೌತಮ್ ಶ್ರೀಲಂಕಾ-ಭಾರತ ತೃತೀಯ ಏಕದಿನ ಪಂದ್ಯದೊಂದಿಗೆ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. ಕೊಲಂಬೋದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆದಿತ್ತು. ಈ ವೇಳೆ ಗೌತಮ್ ಅದ್ಭುತ ಕ್ಯಾಚ್ಗಾಗಿ ಗಮನ ಸೆಳೆದಿದ್ದಾರೆ.
ಪಂದ್ಯದಲ್ಲಿ ಕೆ ಗೌತಮ್ ಅದ್ಭುತ ರೀತಿಯಲ್ಲಿ ಕ್ಯಾಚ್ ಪಡೆದು ಲಂಕಾ ಬ್ಯಾಟ್ಸ್ಮನ್ ಭಾನುಕಾ ರಾಜಪಕ್ಸ ಅವರನ್ನು ಪೆವಿಲಿಯನ್ಗೆ ಅಟ್ಟಿದ್ದಾರೆ. ಅಷ್ಟೇ ಅಲ್ಲ, ಗೌತಮ್ ಪ್ರಯತ್ನದಿಂದ ಭಾರತದ ಯುವ ಬೌಲರ್ ಚೇತನ್ ಸಕಾರಿಯಾಗೆ ಏಕದಿನ ಚೊಚ್ಚಲ ವಿಕೆಟ್ ಕೂಡ ಲಭಿಸಲು ಸಾಧ್ಯವಾಯ್ತು.
ಭಾರತ ನೀಡಿದ್ದ 226 ರನ್ ಗುರಿಯನ್ನು ಬೆನ್ನಟ್ಟಿದ್ದ ಶ್ರೀಲಂಕಾ ಪರ ಭಾನುಕ ರಾಜಪಕ್ಸ ಅರ್ಧ ಶತಕ ಬಾರಿಸಿದ್ದರು. ಆರಂಭದಲ್ಲಿ ಚೇತನ್ ಸಕಾರಿಯಾ ಓವರ್ನಲ್ಲಿ ರಾಜಪಕ್ಸ ಅವರ ಕ್ಯಾಚನ್ನು ನಿತೀಶ್ ರಾಣಾ ಕೈ ಚೆಲ್ಲಿದ್ದರು. ಆದರೆ ಎರಡನೇ ಬಾರಿಗೆ ಕೆ ಗೌತಮ್ ರಾಜಪಕ್ಸ ಅವರ ಕ್ಯಾಚನ್ನೇ ಅದ್ಭುತ ರೀತಿಯಲ್ಲಿ ಪೂರ್ಣಗೊಳಿಸಿದ್ದರು.
ಸಕಾರಿಯಾ ಅವರ 22.6ನೇ ಓವರ್ನಲ್ಲಿ ರಾಜಪಕ್ಸ ಬೌಂಡರಿ ಗೆರೆಯಾಚೆ ಚೆಂಡು ಅಟ್ಟಿದ್ದರು. ಕ್ಯಾಚ್ ಸಾಧ್ಯತೆ ಅರಿತು ಓಡಿ ಬಂದ ಗೌತಮ್ ಕ್ಯಾಚನ್ನು ಜಾರಿಕೊಂಡೇ ಹೋಗಿ ಹಿಡಿದುಕೊಂಡಿದ್ದರು. ಹೀಗಾಗಿ ರಾಜಪಕ್ಸ 65 ರನ್ಗೆ ಪೆವಿಲಿಯನ್ ಕಡೆಗೆ ನಡೆಯಬೇಕಾಗಿ ಬಂತು. ಇತ್ತ ಸಕಾರಿಯಾಗೆ ಚೊಚ್ಚಲ ಏಕದಿನ ವಿಕೆಟ್ ಕೂಡ ಲಭಿಸಿತು.