ಬೆಂಗಳೂರು, ಜನವರಿ 03: ಸುಪ್ರೀಂಕೋರ್ಟ್ ನಿರ್ದೇಶನದಂತೆ ನ್ಯಾ.ಆರ್ ಎಂ ಲೋಧಾ ಸಮಿತಿ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಕರ್ನಾಟಕ ಕ್ರಿಕೆಟ್ ನಿಯಂತ್ರಣ ಮಂಡಳಿ (ಕೆಎಸ್ ಸಿಎ) ಮಂಗಳವಾರ ನಿರ್ಧರಿಸಿದೆ. ಇದರ ಬೆನ್ನಲ್ಲೇ ಕೆಎಸ್ ಸಿಎನ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಖಜಾಂಚಿಗಳು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಕೆಎಸ್ ಸಿಎ ಅಧ್ಯಕ್ಷ ಪಿಆರ್ ಅಶೋಕ್ ಆನಂದ್, ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಹಾಗೂ ಖಜಾಂಚಿ ದಯಾನಂದ್ ಪೈ ಅವರು ತಮ್ಮ ಹುದ್ದೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಕೆಎಸ್ ಸಿಎ ವಕ್ತಾರ ವಿನಯ್ ಮೃತ್ಯುಂಜಯ ಅವರು ಹೇಳಿದ್ದಾರೆ.
ಟೀಂ ಇಂಡಿಯಾದ ಮಾಜಿ ಆಟಗಾರ ಬ್ರಿಜೇಶ್ ಪಟೇಲ್(64) ಅವರು ಕೆಎಸ್ ಸಿಎ ಕಾಯದರ್ಶಿಯಾಗಿ ಐದು ಬಾರಿ ಮೂರು ವರ್ಷ ಅವಧಿಯ ಆಡಳಿತ ನಡೆಸಿದ್ದಾರೆ. ನ್ಯಾ. ಲೋಧಾ ಸಮಿತಿ ಶಿಫಾರಸಿನಂತೆ 9 ವರ್ಷಕ್ಕಿಂತ ಮೇಲ್ಪಟ್ಟು ಒಂದೇ ಹುದ್ದೆಯಲ್ಲಿ ಮುಂದುವರೆಯುವಂತಿಲ್ಲ.
ನ್ಯಾ. ಲೋಧಾ ಸಮಿತಿ ಶಿಫಾರಸುಗಳನ್ನು ಅನುಷ್ಠಾನಗಳನ್ನು ವಿಫಲವಾದ ಹಿನ್ನಲೆಯಲ್ಲಿ ಅನುರಾಗ್ ಠಾಕೂರ್ ಹಾಗೂ ಅಜಯ್ ಶಿರ್ಕೆ ಅವರನ್ನು ಅವರ ಸ್ಥಾನದಿಂದ ಕೆಳಗಿಳಿಸಲಾಗಿದ್ದು, ಇಬ್ಬರಿಗೂ ನೋಟಿಸ್ ಜಾರಿಗೊಳಿಸಲಾಗಿದೆ. ಹಾಲಿ ಉಪಾಧ್ಯಕ್ಷ ಸ್ಥಾನದಲ್ಲಿರುವ ಹಿರಿಯರೊಬ್ಬರು ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂಬ ಸುದ್ದಿ ಕ್ರೀಡಾಪ್ರೇಮಿಗಳಿಗೆ ಹೊಸತೇನಲ್ಲ.
ಮಂಗಳವಾರದ ಬೆಳವಣಿಗೆಯಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೇಲೆ ನಿಗಾ ವಹಿಸಲು ರಚಿಸಲಾಗುವ ಸಮಿತಿಯಿಂದ ಹಿರಿಯ ವಕೀಲ ಫಾಲಿ ಎಸ್ ನಾರಿಮನ್ ಹಿಂದೆ ಸರಿದಿದ್ದು, ಆ ಜಾಗಕ್ಕೆ ಹಿರಿಯ ವಕೀಲ ಅನಿಲ್ ದಿವಾನ್ ಅವರ ನೇಮಕವಾಗಿದೆ.(ಒನ್ ಇಂಡಿಯಾ ಸುದ್ದಿ)