ಆರ್ಸಿಬಿ ಅಭಿಮಾನಿಗಳಿಗೆ ಕೆಎಸ್ಸಿಎ ಗುಡ್ನ್ಯೂಸ್ ನೀಡಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೆ ಬೇಕಾದ ತಯಾರಿಗಳನ್ನು ತಾನು ಮಾಡಿಕೊಳ್ಳುತ್ತಿರುವುದಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ತಿಳಿಸಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ವೆಂಕಟೇಶ್ ಪ್ರಸಾದ್ ನಾವು, ಬೆಂಗಳೂರಿನಲ್ಲಿ ಪಂದ್ಯಗಳನ್ನು ಆಡಿಸಲು ಹಗಲಿರುಳು ಶ್ರಮಿಸಿದ್ದೆವೆ ಎಂದು ತಿಳಿಸಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಅಲ್ಲದೆ ಅಹಿತಕರ ಘಟನೆಗಳು ನಡೆಯ ಬಾರಿದಿತ್ತು. ಈ ಘಟನೆ ಕೆಎಸ್ಸಿಎ ಆಡಳಿತ ಮಂಡಳಿಗೆ ನೋವು ತಂದಿದೆ. ಇಂತಹ ಘಟನೆಗಳ ನಡೆಯದಂತೆ ತಡೆಯಲು ಬೇಕಾದ ವ್ಯವಸ್ಥೆಗಳನ್ನು ನಾವು ಮಾಡಿಕೊಳ್ಳುತ್ತಿದ್ದೇವೆ. ನಾವು ಕೈಗೊಳ್ಳಬಹುದಾದ ಸುರಕ್ಷತೆಯ 3ಡಿ ಡ್ರಾಯೊಂಗ್ ಸಹ ನಾವು ನೀಡಿದ್ದೇವೆ ಎಂದು ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ತಿಳಿಸಿದ್ದಾರೆ.

ಆರ್ಸಿಬಿ ಸಂಭ್ರಮಾಚರಣೆಯ ವೇಳೆ ನಡೆದ ದುರಂತದ ತನಿಖಾ ವರದಿ ನೀಡಿರುವ ಕುನ್ಹಾ ಸಮಿತಿಯ ಶಿಫಾರಸ್ಸುಗಳನ್ನು ನಾವು ಪಾಲಿಸಲು ಬದ್ಧರಾಗಿದ್ದೇವೆ. ಈ ಕಾರ್ಯಗಳು ಈಗ ಭರದಿಂದ ಸಾಗಿವೆ. ಎಲ್ಲ ಮಾನದಂಡಗಳನ್ನು ಫೆಬ್ರವತಿ ಅಂತ್ಯದೊಳಗೆ ಮುಗಿಸುವ ವಿಶ್ವಾಸ ನಮ್ಮದಾಗಿದೆ ಎಂದು ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ. ಇನ್ನು ಐತಿಹಾಸಿಕ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯಗಳನ್ನು ಆಡಿಸಲು ಅನುವು ಮಾಡಿಕೊಟ್ಟ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆಶಿವಕುಮಾರ್, ಗೃಹ ಸಚಿವ ಪರಮೇಶ್ವರ್ ಅವರಿಗೆ ಇದೇ ವೇಳೆ ವೆಂಕಟೇಶ್ ಪ್ರಸಾದ್ ಧನ್ಯವಾದ ತಿಳಿಸಿದ್ದಾರೆ.
ತನಿಖಾ ಸಮಿತಿ ಸೂಚಿಸಿದಂತೆ ಗೇಟ್ಗಳ ಅಗಲಿಕರಣ ಕಾರ್ಯ ನಡೆದಿದೆ. ಇನ್ನು ಹಲವು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೆಲಸವನ್ನು ಮಾಡಲಾಗುತ್ತಿದೆ. ಇಲಾಖೆಗಳು ಹಾಕಿರುವ ಷರತ್ತುಗಳನ್ನು ನಾವು ಪೂರ್ಣಗೊಳಿಸಲಿದ್ದೇವೆ. ಸರ್ಕಾರ ನಮ್ಮ ಜತೆ ಸಾಕಷ್ಟು ಶ್ರಮಿಸುತ್ತಿದೆ ಎಂದು ಕೆಎಸ್ಸಿಎ ಅಧ್ಯಕ್ಷರು ತಿಳಿಸಿದ್ದಾರೆ.
ಆರ್ಸಿಬಿ ಪಂದ್ಯಗಳನ್ನು ಚಿನ್ನಸ್ವಾಮಿ ಮೈದಾನದಲ್ಲೇ ಆಡಿಸಲು ನಾವು ಕಷ್ಟ ಪಟ್ಟಿದ್ದೇವೆ. ಅಧಿಕಾರಕ್ಕೆ ಬಂದಾಗಿನಿಂದ ನಾವು ಇದೇ ಕಾರ್ಯದಲ್ಲಿ ನಿರತರಾಗಿದ್ದೇವೆ. ಆರ್ಸಿಬಿ ಎಲ್ಲಾ ಪಂದ್ಯಗಳನ್ನು ಚಿನ್ನಸ್ವಾಮಿಯಲ್ಲಿ ಆಡಲು ಬೇಕಾದ ಸಿದ್ಧತೆಗಳನ್ನು ನೀಡಲು ನಾವು ಬದ್ಧ ಎಂದು ವೆಂಕಟೇಶ್ ಪ್ರಸಾದ್ ತಿಳಿಸಿದ್ದಾರೆ.
ಆರ್ಸಿಬಿ ತನ್ನ ತವರಿನ ಪಂದ್ಯಗಳನ್ನು ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಆಡುತ್ತದೋ ಇಲ್ಲವೋ ಎಂಬ ಬಗ್ಗೆ ಅಂತಿಮ ನಿರ್ಧಾರವನ್ನು ಆರ್ಸಿಬಿ ಮ್ಯಾನೇಜ್ಮೆಂಟ್ ಮಾಡಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಆರ್ಸಿಬಿ ಒಟ್ಟು 7 ಪಂದ್ಯಗಳನ್ನು ತವರಿನಲ್ಲಿ ಆಡಲಿದೆ. ಆರ್ಸಿಬಿ ಯಾವ ಪಂದ್ಯದಲ್ಲಿ ಆಡಲಿದೆ ಎಂಬ ತೀರ್ಮಾನವನ್ನು ಈಗ ಮ್ಯಾನೇಜ್ಮೆಂಟ್ ಮಾಡಬೇಕಿದೆ. ಆರ್ಸಿಬಿ ಆಡಳಿತ ಮಂಡಳಿ ಮನಸ್ಸು ಮಾಡಿದಲ್ಲಿ ಪಂದ್ಯಗಳು ಚಿನ್ನಸ್ವಾಮಿಯಲ್ಲಿ ನಡೆಯಲಿವೆ. ಈ ಬಗ್ಗೆ ಆರ್ಸಿಬಿ ಮ್ಯಾನೇಜ್ಮೆಂಟ್ ಅಂತಿಮ ತೀರ್ಮಾನವನ್ನು ಕೈಗೊಳ್ಳಲಿದೆ.
ಇತ್ತೀಚಿಗೆ ಐಪಿಎಲ್ ಗೌರ್ನಿಂಗ್ ಕೌನ್ಸಿಲ್ ಸಭೆ ಇತ್ತು. ಸಭೆಯಲ್ಲಿ ಕೆಎಸ್ಸಿಎ ಹಾಗೂ ಆರ್ಸಿಬಿ ಆಡಳಿ ಮಂಡಳಿಯವರು ಇದ್ದರು. ಈ ವಿಷಯಕ್ಕೆ ಸಬಂಧಿಸಿದಂತೆ ಐಪಿಎಲ್ ಆಡಳಿತ ಮಂಡಳಿ ಕೆಎಸ್ಸಿಎ ಹಾಗೂ ಆರ್ಸಿಬಿ ಮಾತುಕತೆ ನಡೆಸುವಂತೆ ಸೂಚಿಸಿದೆ. ಅಲ್ಲದೆ ಈ ಬಗ್ಗೆ ನೀವಿಬ್ಬರ ಅಂತಿಮ ನಿರ್ಧಾರ ತೆಗೆದುಕೊಳ್ಳುವಂತೆ ಐಪಿಎಲ್ ಆಡಳಿತ ಮಂಡಳಿ ಸೂಚಿಸಿದೆ ಎಂದು ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ತಿಳಿಸಿದ್ದಾರೆ. ಇನ್ನು ಆರ್ಸಿಬಿ ತಾನು ಚಿನ್ನಸ್ವಾಮಿ ಮೈದಾನದಲ್ಲಿ ಆಡುತ್ತದೋ ಇಲ್ಲವೋ ಎಂಬ ಬಗ್ಗೆ ತನ್ನ ನಿಲುವನ್ನು 10 ದಿನಗಳೊಳಗೆ ತೆಗೆದುಕೊಳ್ಳುವ ಅನಿವಾರ್ಯತೆ ಇದೆ.
ಇನ್ನು ಟಿಕೆಟ್ಗಳನ್ನು ಪೇಪರ್ ಲೆಸ್ ಮಾಡಿಕೊಳ್ಳಲಾಗಿದೆ. ಡಿಜಿಟಲ್ ಟಿಕೆಟ್ಗಳನ್ನ ನೀಡಲು ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಕೆಎಸ್ಸಿಎ ಮಾಧ್ಯಮ ಸಂಯೋಜಕ ವಿನಯ್ ಮೃತ್ಯುಂಜಯ್ ಹೇಳಿಕೆ ನೀಡಿದ್ದಾರೆ.