ಏಷ್ಯಾಕಪ್ ಸೂಪರ್ 4 ಹಂತದಲ್ಲಿ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧವೂ ಗೆಲುವು ಸಾಧಿಸುವ ಮೂಲಕ ಸತತ ಭರ್ಜರಿ ಯಶಸ್ಸು ಸಾಧಿಸಿದೆ. ಈ ಮೂಲಕ ಏಷ್ಯಾಕಪ್ನ ಫೈನಲ್ ಹಂತಕ್ಕೂ ಭಾರ ಪ್ರವೇಶ ಪಡೆದುಕೊಂಡಿದೆ. ಶ್ರೀಲೊಂಕಾ ವಿರುದ್ಧದ ಪಂದ್ಯದಲ್ಲಿಯೂ ಟೀಮ್ ಇಂಡಿಯಾ ಪರವಾಗಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದು ಕುಲ್ದೀಪ್ ಯಾದವ್. ಪಾಕ್ ವಿರುದ್ಧದ ಪಂದ್ಯದಲ್ಲಿ ಐದು ವಿಕೆಟ್ ಕಬಳಿಸಿದ್ದ ಕುಲ್ದೀಪ್ ಲಂಕಾ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್ಗಳ ಗೊಂಚಲು ಪಡೆದುಕೊಂಡಿದ್ದಾರೆ.
ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಕುಲ್ದೀಪ್ 9.3 ಓವರ್ಗಳ ಬೌಲಿಂಗ್ ನಡೆಸಿದ್ದು 43 ರನ್ಗಳನ್ನು ನೀಡಿ 4 ವಿಕೆಟ್ ಪಡೆದುಕೊಂಡಿದ್ದಾರೆ. ಈ ಮೂಲಕ ಕಳೆದ ಎರಡು ಪಂದ್ಯಗಳಲ್ಲಿ ಸ್ಪಿನ್ನರ್ 9 ವಿಕೆಟ್ಗಳನ್ನು ಪಡೆದುಕೊಂಡಂತಾಗಿದೆ. ಈ ಅದ್ಭುತ ಯಶಸ್ಸಿನ ಬಳಿಕ ಮಾತನಾಡಿದ ಸ್ಪಿನ್ನರ್ ಕುಲ್ದೀಪ್ ಯಾದವ್ ಕುತೂಹಲಕಾರಿ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.

ಬಿಸಿಸಿಐ ಟಿವಿಗೆ ಸೂರ್ಯಕುಮಾರ್ ಯಾದವ್ ಜೊತೆಗೆ ಸಂದರ್ಶನದಲ್ಲಿ ಕಾಣಿಸಿಕೊಂಡಿರುವ ಕುಲ್ದೀಪ್ ಪಂದ್ಯಕ್ಕೂ ಮುನ್ನ ಸೂರ್ಯಕುಮಾರ್ ಯಾದವ್ ನೀಡಿದ ಸಲಹೆಯನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೆ ಆ ಸಲಹೆ ಈ ಪಂದ್ಯದಲ್ಲಿ ತನಗೆ ಸಹಾಯವಾಯಿತು ಎನ್ನುವ ವಿಚಾರವನ್ನು ಕೂಡ ಹೇಳಿಕೊಂಡರು.
ಸೂರ್ಯಕುಮಾರ್ ಯಾದವ್ ಅವರನ್ನು ಉದ್ದೇಶಿಸಿ ಮಾತನಾಡಿದ ಕುಲ್ದೀಪ್ "ಪಂದ್ಯಕ್ಕೂ ಮುನ್ನ ನೀವು ನನಗೆ ಚುಟುಕು ಸಲಹೆಯನ್ನು ನೀಡಿದ್ದಿರಿ. ಪಂದ್ಯದ ಹಿಡಿತವನ್ನು ಕಳೆದುಕೊಳ್ಳಬೇಡ ಎಂದು ತಿಳಿಸಿದ್ದಿರಿ. ಐದು ವಿಕೆಟ್ಗಳ ಗೊಂಚಲು ಪಡೆದ ನಂತರ ಬೌಲರ್ನ ಬಾಡಿ ಲಾಂಗ್ವೇಜ್ ಬದಲಾಗುತ್ತದೆ. ಹಾಗಾಗಿ ರಿಲ್ಯಾಕ್ಸ್ ಆಗಬಹುದು. ಆದರೂ ಆತ್ಮವಿಶ್ವಾಸ ಉಳಿಸಿಕೊಳ್ಳಬೇಕಾಗುತ್ತದೆ. ಅದು ಬೌಲರ್ಗಳಿಗೆ ಸಹಜವಾಗಿಯೇ ಆಗುತ್ತದೆ. ಆ ಸಂದರ್ಭದಲ್ಲಿ ಆ ಎರಡು ನಿಮಿಷಗಳ ಚುಟುಕು ಸಲಹೆ ನನಗೆ ಬಹಳ ಸಹಾಯ ಮಾಡಿದೆ" ಎಂದಿದ್ದಾರೆ ಕುಲ್ದೀಪ್ ಯಾದವ್.
"ಸತತ ಮೂರನೇ ದಿನ ನಾವು ಮೈದಾನಕ್ಕೆ ಇಳಿದಾಗಲೂ ನಾನು ನನ್ನ ಅತ್ಯುತ್ತಮ ಪ್ರದರ್ಶನ ನೀಡಲು ಸಜ್ಜಾಗಿದ್ದೆ. ಹಾಗಾಗಿ ನಿಮಗೆ ನಾನು ಧನ್ಯವಾದ ಹೇಳುತ್ತೇನೆ ಸೂರ್ಯ ಭಾಯಿ" ಎಂದು ಕುಲ್ದೀಪ್ ಯಾದವ್ ಈ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ. ಟೀಮ್ ಇಂಡಿಯಾ ಸ್ಕ್ವಾಡ್ನಲ್ಲಿ ಸ್ಥಾನವನ್ನು ಪಡೆದುಕೊಂಡಿರುವ ಸೂರ್ಯಕುಮಾರ್ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಳ್ಳಲು ವಿಫಲವಾಗಿದ್ದಾರೆ.