
ಶ್ರೀಲಂಕಾದ ದಿಗ್ಗಜ ಕ್ರಿಕೆಟಿಗ ಕುಮಾರ್ ಸಂಗಕ್ಕರ ಭಾರತ ಟಿ20 ತಂಡದ ಉತ್ತಮ ನಾಯಕ ಎನಿಸಿಕೊಳ್ಳುವ ಎಲ್ಲಾ ಗುಣಗಳು ಕೂಡ ಹಾರ್ದಿಕ್ ಪಾಂಡ್ಯ ಅವರಲ್ಲಿದೆ ಎಂದು ಮಾಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಐಪಿಎಲ್ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಮೊದಲ ಪ್ರಯತ್ನದಲ್ಲಿಯೇ ಅದ್ಭುತವಾಗಿ ಮುನ್ನಡೆಸಿ ಚಾಂಪಿಯನ್ ಪಟ್ಟಕ್ಕೇರಿಸಿದ ಹಾರ್ದಿಕ್ ಪಾಂಡ್ಯ ಅವರನ್ನು ಸಂಗಕ್ಕರ ಮೆಚ್ಚಿದ್ದು ಭಾರತದ ಪರವಾಗಿಯೂ ಅಂಥಾದ್ದೇ ಯಶಸ್ಸು ತಂದುಕೊಡುವ ಸಾಮರ್ಥ್ಯ ಹಾರ್ದಿಕ್ ಪಾಂಡ್ಯ ಅವರಲ್ಲಿದೆ ಎಂದಿದ್ದಾರೆ ಸಂಗಕ್ಕರ.
ಟೀಮ್ ಇಂಡಿಯಾ ಟಿ20 ಮಾದರಿಗೆ ಪೂರ್ಣ ಪ್ರಮಾಣದ ಪ್ರತ್ಯೇಕ ನಾಯಕನನ್ನು ನೇಮಕ ಮಾಡಲು ಬಿಸಿಸಿಐ ಉತ್ಸಾಹ ತೋರಿದ್ದು ಹಾರ್ದಿಕ್ ಪಾಂಡ್ಯಗೆ ಈ ಜವಾಬ್ಧಾರಿ ಹೆಗಲೇರುವ ಸಾಧ್ಯತೆ ದಟ್ಟವಾಗಿದೆ. ಸದ್ಯ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯ ಅವರನ್ನೇ ನಾಯಕನನ್ನಾಗಿ ನೇಮಕಗೊಳಿಸಲಾಗಿದ್ದು ಈ ಸರಣಿಗೆ ಅನುಭವಿ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಹಾಗೂ ಭುವನೇಶ್ವರ್ ಕುಮಾರ್ಗೆ ವಿಶ್ರಾಂತಿ ನೀಡಲಾಗಿದೆ. ಇನ್ನು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಹಾರ್ದಿಕ್ ಪಾಂಡ್ಯ ಅವರನ್ನು ಉಪ ನಾಯಕನನ್ನಾಗಿ ಹೆಸರಿಸಲಾಗಿದೆ.
"ಅನುಮಾನವೇ ಬೇಡ ಆತನ ನಾಯಕತ್ವ ಅದ್ಭುತವಾಗಿದೆ. ಅದನ್ನು ನಾವು ಐಪಿಎಲ್ನಲ್ಲಿ ನೋಡಿದ್ದೇವೆ. ಈಗ ಅವರು ಅದನ್ನೇ ರಾಷ್ಟ್ರೀಯ ತಂಡದ ಪರವಾಗಿಯೂ ಮಾಡಬೇಕಿದೆ. ಆತನಲ್ಲಿ ನಾಯಕತ್ವದ ಎಲ್ಲಾ ಗುಣಗಳು ಕೂಡ ಇದೆ" ಎಂದಿದ್ದಾರೆ ಕುಮಾರ್ ಸಂಗಕ್ಕರ.
"ಈಗ ಮೈದಾನದಲ್ಲಿ ನಾಯಕನಾಗಿರುವುದು ಕೂಡ ವಿಶೇಷವಾದ ಅಂಶವಾಗಿದೆ. ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಂಡು ರಣತಂತ್ರಗಳನ್ನು ಹೆಣೆಯುವ ಮೂಲಕ ಪ್ರತಿ ಹಂತದಲ್ಲಿಯೂ ಮೇಲುಗೈ ಸಾಧಿಸಬೇಕು. ಹೀಗಾಗಿ ನೀವು ಸಾಕಷ್ಟು ತೀಕ್ಷ್ಣವಾಗಿ ಯೋಚಿಸಬೇಕಿದೆ. ನನ್ನ ಪ್ರಕಾರ ಉತ್ತಮ ನಾಯಕನಾಗುವ ಎಲ್ಲಾ ಲಕ್ಷಣಗಳು ಕೂಡ ಹಾರ್ದಿಕ್ ಪಾಂಡ್ಯ ಅವರಲ್ಲಿದೆ" ಎಂದಿದ್ದಾರೆ ಕುಮಾರ್ ಸಂಗಕ್ಕರ.