ಕುಂಬ್ಳೆ- ಕೊಹ್ಲಿ ನಡುವೆ ಮಾತು ನಿಂತು ಹೋಗಿ ಆರು ತಿಂಗಳಾಗಿತ್ತು!!
ಮುಂಬೈ, ಜೂನ್ 21: ಭಾರತೀಯ ಕ್ರಿಕೆಟ್ ವಲಯದಲ್ಲಿ ಈವರೆಗೆ ಕಂಡೂ ಕಾಣದಂತಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ಅನಿಲ್ ಕುಂಬ್ಳೆ ನಡುವಿನ ಭಿನ್ನಾಭಿಪ್ರಾಯಗಳ ಒಳಪದರಗಳು ಇದೀಗ ಕುಂಬ್ಳೆಯವರು ಕೋಚ್ ಹುದ್ದೆ ತೊರೆದ ಮೇಲೆ ಒಂದರ ನಂತರ ಮತ್ತೊಂದು ಅನಾವರಣಗೊಳ್ಳುತ್ತಿವೆ.
ಇದೀಗ ಬಂದಿರುವ ಹೊಸ ವಿಚಾರವೆಂದರೆ, ಈ ಇಬ್ಬರ ನಡುವೆ ಮಾತು ನಿಂತು ಹೋಗಿ ಸುಮಾರು ಆರು ತಿಂಗಳುಗಳೇ ಕಳೆದಿತ್ತು ಎಂಬುದು. ಇದಕ್ಕಿಂತಲೂ ಮತ್ತೊಂದು ಕುತೂಹಲಕಾರಿ ವಿಚಾರವೇನೆಂದರೆ, ಕೊಹ್ಲಿ-ಕುಂಬ್ಳೆ ನಡುವಿನ ಈ ಮುನಿಸು, ಕೋಚ್ ಆಯ್ಕೆಯ ಜವಾಬ್ದಾರಿ ಹೊತ್ತಿರುವ ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಹಾಗೂ ಸೌರವ್ ಗಂಗೂಲಿ ಅವರುಳ್ಳ ಬಿಸಿಸಿಐ ಸಲಹಾ ಸಮಿತಿಗೂ (ಸಿಎಸಿ) ಗೊತ್ತಿತ್ತು.
ಹಾಗಾಗಿ, ಕುಂಬ್ಳೆಯವರನ್ನು ಮತ್ತೊಂದು ಅವಧಿಗೆ ಕೋಚ್ ಆಗಿ ಮುಂದುವರಿಸುವ ಬಗ್ಗೆ ಇದೇ ಸಮಿತಿ ಅಸಮ್ಮತಿ ಸೂಚಿಸಿತ್ತು. ಸಲಹಾ ಸಮಿತಿಯಲ್ಲಿರುವ ಆ ಮೂವರಿಗೂ ಕುಂಬ್ಳೆ ಹತ್ತಿರದವರು. ಕುಂಬ್ಳೆಯ ತಾಕತ್ತೇನು ಎಂಬುದು ಆ ಸಮಿತಿಗೂ ಗೊತ್ತು. ಆದರೂ, ಕೊಹ್ಲಿ ಮುಖ ನೋಡಿಕೊಂಡು ಹಾಗೂ ಕೊಹ್ಲಿ ಬಗ್ಗೆ ಬಿಸಿಸಿಐ ಆಡಳಿತ ಮಂಡಳಿಗೆ ಇರುವ ಅನುಕಂಪವನ್ನು ಗಮನದಲ್ಲಿಟ್ಟುಕೊಂಡು ಕುಂಬ್ಳೆಯವರನ್ನು ಮುಂದುವರಿಸಲು ಅದು ಹಿಂದೇಟು ಹಾಕಿತ್ತಂತೆ.

ಹಿರಿಯ ಅಧಿಕಾರಿಯೊಬ್ಬರ ಮಾಹಿತಿ
ಕಳೆದ ವರ್ಷ ಡಿಸೆಂಬರ್ ತಿಂಗಳಿನಿಂದಲೇ ಕೊಹ್ಲಿ- ಕುಂಬ್ಳೆ ಮಾತುಬಿಟ್ಟಿದ್ದರು ಎಂದು ಬಿಸಿಸಿಐನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಗಲೇ ಸಿಎಸಿಯು ಒಂದು ಸಭೆ ನಡೆಸಿ, ಇಬ್ಬರ ಮನವೊಲಿಸುವ ಕಸರತ್ತು ನಡೆಸಿತ್ತು.

ತೀವ್ರಗೊಂಡಿದ್ದ ಭಿನ್ನಾಭಿಪ್ರಾಯ
ಕಳೆದ ವರ್ಷ ಡಿಸೆಂಬರ್ ನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಸಂದರ್ಭದಲ್ಲೇ ಕೊಹ್ಲಿ ಹಾಗೂ ಕುಂಬ್ಳೆ ನಡುವೆ ತೀವ್ರ ಭಿನ್ನಾಭಿಪ್ರಾಯ ಬಂದಿದ್ದು. ಆಗಿನಿಂದಲೇ ಈ ಇಬ್ಬರೂ ಮಾತು ಬಿಟ್ಟಿದ್ದರು.
ಕೊಹ್ಲಿ ವಿರುದ್ಧ ಕಿಡಿಕಾರಿ, ಕುಂಬ್ಳೆಗೆ ಜೈಕಾರ ಹಾಕಿದ ಟ್ವಿಟ್ಟಿಗರು

ಯಾವುದೇ ಸಲಹೆ ಒಪ್ಪದಿದ್ದ ಕೊಹ್ಲಿ
ಕೊಹ್ಲಿಗೂ, ಕುಂಬ್ಳೆಗೂ ಕೆಲವಾರು ತಿಳಿ ಹೇಳಿದ್ದ ಸಿಇಸಿ, ಇವರಿಬ್ಬರ ನಡುವಿನ ಭಿನ್ನಾಭಿಪ್ರಾಯ ದೂರ ಮಾಡಲು ಪ್ರಯತ್ನಿಸಿತ್ತು. ಸಮಿತಿ ಹೇಳಿದ್ದ ಕೆಲ ವಿಚಾರಗಳನ್ನು ಕುಂಬ್ಳೆ ಒಪ್ಪಿಕೊಂಡರೂ, ಕೊಹ್ಲಿ ಮಾತ್ರ ಸುತರಾಂ ಒಪ್ಪಿಕೊಂಡಿರಲಿಲ್ಲ.

ಆದರೂ, ಸಂಧಾನ ಸಾಕಾರವಾಗಲಿಲ್ಲ
ಅಷ್ಟೇ ಅಲ್ಲ, ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ನಲ್ಲಿ ಭಾರತ ತಂಡವು, ಬಾಂಗ್ಲಾದೇಶದ ವಿರುದ್ಧ ಗೆದ್ದ ನಂತರವೂ ಇಬ್ಬರ ನಡುವೆ ಕಾಂಪ್ರೊಮೈಸ್ ಮಾಡಲು ಸಿಎಸಿ ನಿರ್ಧರಿಸಿ, ಆ ನಿಟ್ಟಿನಲ್ಲಿ ಪ್ರಯತ್ನಿಸಿತ್ತು. ಆಗ, ಕೊಹ್ಲಿ ಜತೆಗೆ ಮೊದಲು ಪ್ರತ್ಯೇಕವಾಗಿ ಮಾತುಕತೆ ನಡೆಸಲಾಗಿತ್ತು. ಆದರೆ, ಸಮಿತಿಯ ಯಾವುದೇ ಸಲಹೆಗಳನ್ನು ಕೊಹ್ಲಿ ಕೇಳುವ ಸ್ಥಿತಿಯಲ್ಲಿರಲಿಲ್ಲ. ಹಾಗಾಗಿ, ಚಾಂಪಿಯನ್ಸ್ ಟ್ರೋಫಿ ಫೈನಲ್ ಮುಗಿದ ಬಳಿಕ ಅಂದು ಸಂಜೆ ಲಂಡನ್ ನಲ್ಲಿ ಇಬ್ಬರನ್ನೂ ಕೂರಿಸಿ ಮಾತುಕತೆ ನಡೆಸಲಾಯಿತು. ಆದರೂ ಅದು ಸರಿಬರಲಿಲ್ಲ.
ವೆಸ್ಟ್ ಇಂಡೀಸ್ ತಲುಪಿದ ಟೀಂ ಇಂಡಿಯಾ, ಜೂ.23ರಂದು ಮೊದಲ ಪಂದ್ಯ

ಕುಂಬ್ಳೆಯ ಚಿಂತನೆಯೇ ಬೇರೆ
ಅನಿಲ್ ಕುಂಬ್ಳೆ ಕೋಚ್ ಆಗಿದ್ದರೂ, ತಂಡದ ಕೆಲವಾರು ನಿರ್ಧಾರಗಳನ್ನು ಕೊಹ್ಲಿ ತಾವೇ ಖುದ್ದಾಗಿ ತೆಗೆದುಕೊಳ್ಳ ಬಯಸುತ್ತಿದ್ದರು. ತಾವು ಆಸಕ್ತಿ ವಹಿಸಿರುವ ಕೆಲ ವಲಯಗಳಲ್ಲಿ ಕುಂಬ್ಳೆ ಮೂಗು ತೂರಿಸಬಾರದೆಂಬುದು ಕೊಹ್ಲಿಯ ಹಠವಾಗಿತ್ತು. ಆದರೆ, ಕುಂಬ್ಳೆಯವರ ಚಿಂತನೆಯೇ ಬೇರೆ. ಅವರು ಕೋಚ್ ಆದವನು ತಂಡದ ಎಲ್ಲಾ ವಿಭಾಗಗಳ ಬಗ್ಗೆ ನಾಯಕನ ಜತೆ ಸಮಾಲೋಚಿಸಬೇಕು. ಒಂದು ವೇಳೆ ನಾಯಕನ ಚಿಂತನೆ ಸರಿಯಿಲ್ಲವೆಂದಾರೆ ಅದನ್ನು ತಿದ್ದುವ ಹಕ್ಕು ಹಾಗೂ ಜವಾಬ್ದಾರಿ ಕೋಚ್ ಗೆ ಇರುತ್ತದೆ ಎನ್ನುವಂಥವರು. ಇದೇ ಈ ಇಬ್ಬರ ನಡುವಿನ ಒಡಕಿಗೆ ಮೂಲ ಕಾರಣ ಎಂದು ಕ್ರಿಕೆಟ್ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications