ನವದೆಹಲಿ, ಜುಲೈ 17 : ಹಿರಿಯ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಮತ್ತು ಜಹೀರ್ ಖಾನ್ ಅವರನ್ನು ಸಾರ್ವಜನಿಕವಾಗಿ ಅವಮಾನಿಸಲಾಗುತ್ತಿದೆ ಎಂದು ಬಿಸಿಸಿಐನ ಆಡಳಿತ ಸಮಿತಿ ಮಾಜಿ ಸದಸ್ಯ ರಾಮಚಂದ್ರ ಗುಹಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ರವಿಶಾಸ್ತ್ರಿ ಅವರನ್ನು ನೇಮಕ ಮಾಡಿದಾಗ ಜಹೀರ್ ಅವರನ್ನು ಬೌಲಿಂಗ್ ಕೋಚ್ ಮತ್ತು ದ್ರಾವಿಡ್ ಅವರನ್ನು ವಿದೇಶದ ಸರಣಿಗಳಲ್ಲಿ ಆಡುವ ಭಾರತ ತಂಡದ ಬ್ಯಾಟಿಂಗ್ ಸಲಹೆಗಾರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ, ಶನಿವಾರ ನಡೆದಿದ್ದ ಸಭೆಯಲ್ಲಿ ಕ್ರಿಕೆಟ್ ಆಡಳಿತಾಧಿಕಾರಿಗಳ ಸಮಿತಿ (ಸಿಒಎ)ಯು ಶಾಸ್ತ್ರಿ ನೇಮಕವನ್ನು ಮಾನ್ಯ ಮಾಡಿತ್ತು. ಆದರೆ, ಜಹೀರ್ ಮತ್ತು ದ್ರಾವಿಡ್ ನೇಮಕ ಕುರಿತು ಯಾವುದೇ ನಿರ್ಧಾರ ಕೈಗೊಳ್ಳದೆ ಸಾರ್ವಜನಿಕವಾಗಿ ಅವಮಾನಿಸಿದೆ ಎಂದು ಗುಹಾ ಟ್ವೀಟ್ ಮಾಡಿದ್ದಾರೆ.
'ಮುಖ್ಯ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಅವರನ್ನು ಹೀನಾಯವಾಗಿ ನಡೆಸಿಕೊಳ್ಳಲಾಯಿತು. ಈಗ ಜಹೀರ್ ಮತ್ತು ದ್ರಾವಿಡ್ ವಿಷಯದಲ್ಲಿಯೂ ಅದೇ ರೀತಿಯ ಧೋರಣೆ ಅನುಸರಿಸಲಾಗುತ್ತಿದೆ' ಎಂದು ಹೇಳಿದ್ದಾರೆ.

'ಕುಂಬ್ಳೆ, ದ್ರಾವಿಡ್ ಮತ್ತು ಜಹೀರ್ ಅವರು ಕ್ರಿಕೆಟ್ ಆಟದ ನಿಜವಾದ ದಿಗ್ಗಜರು. ಕ್ರೀಡೆಗೆ ಅವರು ನೀಡಿರುವ ಕಾಣಿಕೆ ಬಹಳ ದೊಡ್ಡದು. ಅವರನ್ನು ಅವಮಾನಿಸುವುದು ಸರಿಯಲ್ಲ' ಎಂದಿದ್ದಾರೆ.
ಸಿಒಎ ಸದಸ್ಯರಾಗಿದ್ದ ಗುಹಾ ಅವರು ಕೆಲವು ದಿನಗಳ ಹಿಂದೆ ರಾಜೀನಾಮೆ ನೀಡಿದ್ದರು. ಭಾರತದ ಕ್ರಿಕೆಟ್ನಲ್ಲಿ 'ತಾರಾ ಸಂಸ್ಕೃತಿ'ಯಿಂದಾಗಿ ಹಿತಾಸಕ್ತಿ ಸಂಘರ್ಷ ನಡೆಯುತ್ತಿದೆ ಎಂದು ಖಂಡಿಸಿದ್ದರು.