ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ಪ್ರವೀಣ್ ಕುಮಾರ್ ಅವರು 2008ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಚೊಚ್ಚಲ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವನ್ನು ಪ್ರತಿನಿಧಿಸಲು ಏಕೆ ಬಯಸಲಿಲ್ಲ ಎಂಬುದರ ಕುರಿತು ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.
37 ವರ್ಷದ ಪ್ರವೀಣ್ ಕುಮಾರ್ಗೆ ಆರ್ಸಿಬಿ ತಂಡಕ್ಕೆ ಸೇರಲು ಇಷ್ಟವಿರಲಿಲ್ಲ, ಏಕೆಂದರೆ ಬೆಂಗಳೂರು ಅವರ ಹುಟ್ಟೂರಿಂದ ಸಾಕಷ್ಟು ದೂರವಿತ್ತು. ಆದರೆ ದೆಹಲಿ ತನ್ನ ಹುಟ್ಟೂರಾದ ಮೀರತ್ಗೆ ತುಂಬಾ ಹತ್ತಿರದಲ್ಲಿದ್ದರಿಂದ, ಡೆಲ್ಲಿ ಡೇರ್ಡೆವಿಲ್ಸ್ ತಂಡ ತನ್ನ ಆದ್ಯತೆಯಾಗಿತ್ತು ಎಂದು ಅವರು ಅಭಿಪ್ರಾಯಪಟ್ಟರು.

ತಮ್ಮ ಮೊದಲ ಐಪಿಎಲ್ ಆವೃತ್ತಿಗೆ ಮುನ್ನ ನಡೆದ ಘಟನೆಯೊಂದರ ಕುರಿತು ಮಾತನಾಡಿದ ಮಾಜಿ ವೇಗಿ ಪ್ರವೀಣ್ ಕುಮಾರ್, ಒಳಗೆ ಬಂದು ಕೆಲವು ಪೇಪರ್ಗಳಿಗೆ ಸಹಿ ಹಾಕುವಂತೆ ಕೇಳಿಕೊಂಡರು. ಆದರೆ ತನಗೆ ಆರ್ಸಿಬಿ ತಂಡಕ್ಕಾಗಿ ಒಪ್ಪಂದಕ್ಕೆ ಸಹಿ ಹಾಕುತ್ತಿರುವುದು ತಿಳಿದಿರಲಿಲ್ಲ ಎಂದು ಬಹಿರಂಗಪಡಿಸಿದರು.
ಪೇಪರ್ಗಳಿಗೆ ಸಹಿ ಮಾಡದೆ ನನ್ನ ಪ್ರತಿರೋಧವನ್ನು ತೋರಿಸಿದೆ ಎಂದು ಪ್ರವೀಣ್ ಕುಮಾರ್ ಹೇಳಿದ್ದಾರೆ. ಇದೇ ವೇಳೆ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ಅವರು ಸಹಿ ಮಾಡದಿದ್ದರೆ ನನ್ನ ವೃತ್ತಿಜೀವನವನ್ನು ಕೊನೆಗೊಳಿಸುವುದಾಗಿ ಬೆದರಿಕೆ ಹಾಕಿದರು ಎಂಬ ಆಘಾತಕಾರಿ ಮಾಹಿತಿಯನ್ನು ಪ್ರವೀಣ್ ಕುಮಾರ್ ತಿಳಿಸಿದರು.

"ಬೆಂಗಳೂರು ನನ್ನ ಹುಟ್ಟೂರಿನಿಂದ ಸಾಕಷ್ಟು ದೂರವಿದ್ದು, ನನಗೆ ಇಂಗ್ಲಿಷ್ ತಿಳಿದಿರಲಿಲ್ಲ ಮತ್ತು ಅಲ್ಲಿನ ಆಹಾರ ನನಗೆ ಇಷ್ಟವಾಗದ ಕಾರಣ ನಾನು ಆರ್ಸಿಬಿ ತಂಡಕ್ಕಾಗಿ ಆಡಲು ಬಯಸಲಿಲ್ಲ".
"ದೆಹಲಿಯು ಮೀರತ್ಗೆ ಸಾಕಷ್ಟು ಹತ್ತಿರದಲ್ಲಿದೆ, ಡೆಲ್ಲಿ ಡೇರ್ ಡೆವಿಲ್ಸ್ ನನಗೆ ನನ್ನ ಮನೆಗೆ ಪ್ರಯಾಣಿಸಲು ಅವಕಾಶ ನೀಡುತ್ತಿತ್ತು. ಆದರೆ, ಒಬ್ಬ ವ್ಯಕ್ತಿ ನನ್ನನ್ನು ಪೇಪರ್ಗೆ ಸಹಿ ಮಾಡುವಂತೆ ಮಾಡಿದನು. ಇದು ಒಪ್ಪಂದ ಎಂದು ನನಗೆ ತಿಳಿದಿರಲಿಲ್ಲ".

"ನಾನು ದೆಹಲಿ ತಂಡಕ್ಕೆ ಆಡಲು ಬಯಸುತ್ತೇನೆ ಮತ್ತು ಆರ್ಸಿಬಿ ಅಲ್ಲ ಎಂದು ನಾನು ಅವರಿಗೆ ಹೇಳಿದೆ. ಆಗ ಲಲಿತ್ ಮೋದಿ ನನಗೆ ಕರೆ ಮಾಡಿ ನನ್ನ ವೃತ್ತಿಜೀವನವನ್ನು ಕೊನೆಗೊಳಿಸುವುದಾಗಿ ಬೆದರಿಕೆ ಹಾಕಿದ್ದರು," ಎಂದು ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ದಿ ಲಾಲನ್ಟಾಪ್ ಯೂಟ್ಯೂಬ್ ಚಾನೆಲ್ನ ವಿಡಿಯೋದಲ್ಲಿ ತಿಳಿಸಿದ್ದಾರೆ.
ಇನ್ನು ಮಾಜಿ ವೇಗಿ ಪ್ರವೀಣ್ ಕುಮಾರ್ ಅವರು ದಿ ಲಾಲನ್ಟಾಪ್ಗೆ ನೀಡಿದ ಸಂದರ್ಶನದಲ್ಲಿ ಹಲವಾರು ವಿಷಯಗಳ ಕುರಿತು ಮಾತನಾಡಿದರು. ಅವುಗಳಲ್ಲಿ ಒಂದು ಅನುಭವಿ ಅಂಪೈರ್ ಮಾರೈಸ್ ಎರಾಸ್ಮಸ್ ಅವರ ತೀರ್ಪಿನ ಬಗ್ಗೆ.
ಮಾರೈಸ್ ಎರಾಸ್ಮಸ್ ವಿಶ್ವ ಕ್ರಿಕೆಟ್ನ ಅತ್ಯಂತ ಕೆಟ್ಟ ಅಂಪೈರ್ಗಳಲ್ಲಿ ಒಬ್ಬರು ಎಂದು ಅಭಿಪ್ರಾಯಪಟ್ಟ ಭಾರತದ ಮಾಜಿ ವೇಗಿ ಪ್ರವೀಣ್ ಕುಮಾರ್, ಅವರು ಯಾವಾಗಲೂ ತಪ್ಪು ತೀರ್ಪು ನೀಡುತ್ತಾರೆ ಎಂದು ಹೇಳಿದ್ದಾರೆ.
"ಅವರೊಬ್ಬ ಕರುಣಾಜನಕ ಅಂಪೈರ್. ಅವರ ನಿರ್ಧಾರಗಳು ಭಯಾನಕವಾಗಿವೆ. ಆಟಗಾರರು ಔಟಾಗದಿದ್ದಾಗಲೂ ಔಟ್ ನೀಡುತ್ತಾರೆ ಮತ್ತು ಔಟಾದಾಗ ನಾಟೌಟ್ ನೀಡುತ್ತಾರೆ. ನಾವು ನಾಟಿಂಗ್ಹ್ಯಾಮ್ನಲ್ಲಿ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದೆವು. ನಾನು ಸಾಕಷ್ಟು ಓವರ್ಗಳನ್ನು ಬೌಲ್ ಮಾಡಿದ್ದೆ. ನನ್ನ ಬೌಲಿಂಗ್ನಲ್ಲಿ ಕೆವಿನ್ ಪೀಟರ್ಸನ್ ಪ್ಯಾಡ್ಗೆ ಬಾಲ್ ಬಡಿಯಿತು ಮತ್ತು ಅದು ಮುಂದೆ ಪ್ಲಂಬ್ ಆಗಿತ್ತು. ಮಾರೈಸ್ ಎರಾಸ್ಮಸ್ ನಾಟೌಟ್ ಎಂದು ತೀರ್ಪು ನೀಡಿದರು. ನಾನು ಅವನಿಗೆ, ನೀವು ಕುರುಡರೇ ಅಥವಾ ಏನು?," ಹೇಳಿದ್ದೆ ಎಂದು ಪ್ರವೀಣ್ ಕುಮಾರ್ ಸ್ವಾರಸ್ಯಕರ ಘಟನೆಯೊಂದನ್ನು ಮೆಲುಕು ಹಾಕಿದರು.