ಬೆಂಗಳೂರು, ಆಗಸ್ಟ್ 11: ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಮಾನ್ಯತೆ ಪಡೆದ ವಿಶ್ವ ಕ್ರಿಕೆಟ್ ಆಡಳಿತ ಮಂಡಳಿಯನ್ನು ಸ್ಥಾಪಿಸುವುದಾಗಿ ಘೋಷಿಸಿದ ಬಳಿಕೆ ಐಪಿಎಲ್ ನ ಮಾಜಿ ಆಯುಕ್ತ ಲಲಿತ್ ಮೋದಿ ಅವರು ಕ್ರಿಕೆಟ್ ಜಗತ್ತಿನ ಮೂರು 'ವಿಷಸರ್ಪ' ಗಳ ಬಗ್ಗೆ ಆಸ್ಟ್ರೇಲಿಯಾದ ಟಿವಿಗೆ ಹೇಳಲಿದ್ದಾರಂತೆ.
ತೆರಿಗೆ ವಂಚನೆ ಮತ್ತು ಐಪಿಎಲ್ನ ಹಣಕಾಸಿನ ಅವ್ಯವಹಾರದ ಹಿನ್ನೆಲೆಯಲ್ಲಿ ಪೊಲೀಸರಿಂದ ಬಂಧನದ ಭೀತಿ ಎದುರಿಸುತ್ತಿರುವ ಮೋದಿ ಪ್ರಸ್ತುತ ಲಂಡನ್ನಲ್ಲಿ ನೆಲೆಸಿದ್ದಾರೆ.
ಆಸ್ಟ್ರೇಲಿಯಾ ಪ್ರೊಡೆಕ್ಷನ್ ಹೌಸ್ ನ ಎಬಿಸಿ ನೆಟ್ವರ್ಕ್ ನ ಹೊಸ ಡಾಕ್ಯುಮೆಂಟರಿ 'ದಿ ಗ್ರೇಟ್ ಕ್ರಿಕೆಟ್ ಕೌಪ್' ನಲ್ಲಿ ಮಾತನಾಡಿರುವ ಲಲಿತ್ ಮೋದಿ ಅವರು ಭಾರತೀಯ ಕ್ರಿಕೆಟ್ ಜಗತ್ತಿನ ಕಹಿಸತ್ಯಗಳನ್ನು ಬಹಿರಂಗ ಪಡಿಸಿದ್ದಾರೆ ಎಂದು ವರದಿಯಾಗಿದೆ.

ಹಿರಿಯ ಪತ್ರಕರ್ತ ಕೆರಿ ಓಬ್ರಿಯಾನ್ ಅವರು ನಿರೂಪಣೆ ಇರುವ ಈ ಡಾಕ್ಯುಮೆಂಟರಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಆಗಿರುವ ಬದಲಾವಣೆಗಳು ಹಾಗೂ ಭಾರತದ ಕೊಡುಗೆ ಬಗ್ಗೆ ವಿವರಣೆ ಸಿಗಲಿದೆ.
ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜರಾದ ಇಯಾನ್ ಚಾಪೆಲ್ , ಬಿಸಿಸಿಐ ಮಾಜಿ ಅಧ್ಯಕ್ಷ ಎನ್ ಶ್ರೀನಿವಾಸನ್ ಅವರು ಕೂಡಾ ಮಾತನಾಡಿದ್ದಾರೆ. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನೆರವಿನಿಂದ ಭಾರತೀಯ ಕ್ರಿಕೆಟ್ ಬೆಳದು ಬಂದ ಬಗ್ಗೆ ಸವಿವರವಾಗಿ ಹೇಳಲಾಗಿದೆ.
ಹೊಸ ಕ್ರಿಕೆಟ್ ಮಂಡಳಿಯ ಸ್ಥಾಪನೆ ಬಗ್ಗೆ ಚಿಂತನೆ ನಡೆದಿದ್ದು, ಈಗಾಗಲೇ ನೀಲ ನಕಾಶೆ ತಯಾರಾಗಿದೆ. ಇದರಲ್ಲಿ ತಾನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದಾಗಿ ಮೋದಿ ಹೇಳಿದ್ದಾರೆ. ಕ್ರಿಕೆಟ್ ಜಗತ್ತಿನಲ್ಲಿ ಮೂರು ಸರ್ಪಗಳಿವೆ. ಅವುಗಳ ತಲೆ ತೆಗೆಯದಿದ್ದರೆ ಕ್ರಿಕೆಟ್ ಗೆ ಉಳಿಗಾಲವಿಲ್ಲ ಎಂದು ಮೋದಿ ಹೇಳಿದ್ದಾರೆ.
ಮೋದಿ ಅವರು 2010ರ ತನಕ ಐಪಿಎಲ್ ಆಯುಕ್ತರಾಗಿದ್ದರು. 2013ರಲ್ಲಿ ಅವರಿಗೆ ಬಿಸಿಸಿಐಯು ಕ್ರಿಕೆಟ್ ಆಡಳಿತದಲ್ಲಿ ಭಾಗಿಯಾಗುವುದಕ್ಕೆ ಆಜೀವ ನಿಷೇಧ ವಿಧಿಸಿತ್ತು.
ಮೋದಿ ವಿರುದ್ಧದ ಆರೋಪಕ್ಕೆ ಸಂಬಂಧಿಸಿ ಕಳೆದ ತಿಂಗಳು ಮುಂಬೈ ಪೊಲೀಸರು ಬಂಧನ ವಾರೆಂಟ್ ಹೊರಡಿಸಿದ್ದಾರೆ, ಆರ್ಥಿಕ ಅವ್ಯವಾಹ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ನೋಟಿಸ್ ಕೂಡಾ ಜಾರಿಅಯಗಿರುವುದನ್ನು ಇಲ್ಲಿ ಸ್ಮರಿಸಬಹುದು