ಟೀಮ್ ಇಂಡಿಯಾ ಈಗ ಬ್ಯಾಕ್ ಟು ಬ್ಯಾಕ್ ಟೆಸ್ಟ್ ಪಂದ್ಯಗಳನ್ನು ಆಡುತ್ತಿದೆ. ಕೆಲವು ದಿನಗಳ ಹಿಂದೆ ಭಾರತದಲ್ಲಿ, ಬಾಂಗ್ಲಾ ವಿರುದ್ಧ ಘರ್ಜಿಸಿದ್ದ ರೋಹಿತ್ ಪಡೆ, ನ್ಯೂಜಿಲೆಂಡ್ ಸವಾಲಿಗೆ ಸನ್ನದ್ಧವಾಗಲಿದೆ. ಈ ಟೂರ್ನಿ ಮುಗಿದ ಬಳಿಕ ಆರಂಭವಾಗುವುದೆ ಬಾರ್ಡರ್ ಗವಾಸ್ಕರ್ ಟ್ರೋಫಿ. ಬಹು ನಿರೀಕ್ಷಿತ ಈ ಟೂರ್ನಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಟೂರ್ನಿಯ ಬಗ್ಗೆ ಈಗಾಗಲೇ ಮಾತುಗಳು ಆರಂಭವಾಗಿವೆ. ಈಗ ಮಾತಿನ ಅಂಗಳಕ್ಕೆ ವೆಸ್ಟ್ ಇಂಡೀಸ್ನ ಖ್ಯಾತ ಆಟಗಾರ ಬ್ರಿಯಾನ್ ಲಾರಾ ಎಂಟ್ರಿ ನೀಡಿದ್ದಾರೆ.
ನವೆಂಬರ್ನಲ್ಲಿ ಭಾರತ, ಆಸ್ಟ್ರೇಲಿಯಾ ಪ್ರವಾಸ ಬೆಳೆಸಲಿದೆ. ಈ ವೇಳೆ 5 ಟೆಸ್ಟ್ ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ನಡೆಯಲಿದೆ. ಈ ಟೂರ್ನಿಯಲ್ಲಿ ಜಯ ಸಾಧಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ಗೆ ಹತ್ತಿರವಾಗುವ ಕನಸು ಭಾರತ ತಂಡದ್ದಾಗಿದೆ. ಇನ್ನು ಈಗಾಗಲೇ ಕಳೆದ ಎರಡು ಪ್ರವಾಸದಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆದ್ದಿರುವ ಭಾರತ, ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿದೆ.

ಈಗಾಗಲೇ ಟೀಮ್ ಇಂಡಿಯಾ ಪರ ಆಡಿ ವಿಶ್ವದ ಗಮನ ಸೆಳೆದಿರುವ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅವರ ಆಟವನ್ನು ಬ್ರಿಯಾನ್ ಲಾರಾ ಗುಣಗಾನ ಮಾಡಿದ್ದಾರೆ. ಇವರಿಗೆ ಯಾವುದೇ ಪರಿಸ್ಥಿತಿಯಲ್ಲಿ ಆಡುವ ಸಾಮರ್ಥ್ಯ ಇದೆ. ಆಸ್ಟ್ರೇಲಿಯಾ ಪ್ರವಾಸದ ವೇಳೆ ಯಶಸ್ವಿ ಜೈಸ್ವಾಲ್ ಕೆಲವು ಮಾನಸಿಕ ಹೊಂದಾಣಿಕೆ ಮಾಡಬೇಕಾಗುತ್ತದೆ ಎಂದು ಬ್ರಿಯಾನ್ ಲಾರಾ ತಿಳಿಸಿದ್ದಾರೆ.
ಇಂಟರ್ನ್ಯಾಶನಲ್ ಮಾಸ್ಟರ್ಸ್ ಲೀಗ್ನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಲಾರಾ, 'ಯಶಸ್ವಿ ಜೈಸ್ವಾಲ್ ಒಬ್ಬ ಉತ್ತಮ ಆಟಗಾರ. ಅವರು ಯಾವುದೇ ಪರಿಸ್ಥಿತಿಗೆ ಹೊಂದಿಕೊಂಡು ಆಡುವ ಸಾಮರ್ಥ್ಯ ಹೊಂದಿದ್ದಾರೆ. ಅವರ ಬ್ಯಾಟಿಂಗ್ನ್ನು ವಿಂಡೀಸ್ ನೆಲದಲ್ಲಿ ನೋಡಿದ್ದೇನೆ. ಕಾಂಗರೂ ನಾಡಿನಲ್ಲಿ ಕೊಂಚ ಭಿನ್ನ ಪಿಚ್ಗಳು ಇರಲಿವೆ. ಆದರೆ ನಿಮ್ಮ ಬಳಿ ಸಾಮರ್ಥ್ಯ ಇದ್ದರೆ ಸಾಕು ಎಂದಿದ್ದಾರೆ.

ಯಾವುದೇ ಪರಿಸ್ಥಿತಿಯಲ್ಲಿ ಉತ್ತಮವಾಗಿ ಆಡವ ಆತ್ಮವಿಶ್ವಾಸ ನಿಮ್ಮಲ್ಲಿರಬೇಕು. ಈಗ ಭಾರತದಲ್ಲಿ ಪರಿಸ್ಥಿತಿ ಬದಲಾಗಿದೆ. ಐಪಿಎಲ್ನಿಂದ ಅಂತಾರಾಷ್ಟ್ರೀಯ ಆಟಗಾರರು ಸಹ ನಿಮ್ಮ ಜೊತೆ ಆಡುತ್ತಾರೆ. ಆಟಗಾರರಿಗೆ ಈಗ ವಿಭಿನ್ನ ಸವಾಲುಗಳಿವೆ. ಇದು ಒಳ್ಳೆಯದು ಎಂದು ಲಾರಾ ಹೇಳಿದ್ದಾರೆ.
'ತವರಿನಿಂದ ಹೊರಗೆ ಆಡುವುದು ಮತ್ತು ಆಸ್ಟ್ರೇಲಿಯಾದಲ್ಲಿ ಆಡುವುದು ಬೇರೆ ಅನುಭವ. ಆದರೆ ಭಾರತ ತಂಡವು, ಸರಣಿ ಗೆಲ್ಲಲು ಸಮರ್ಥವಾಗಿದೆ ಎಂದು ನಾನು ನಂಬುತ್ತೇನೆ ಎಂದಿದ್ದಾರೆ. ಇನ್ನು ಕಾನ್ಪುರ್ದಲ್ಲಿ ನಡೆದ ಎರಡನೇ ಟೆಸ್ಟ್ನಲ್ಲಿ ಭಾರತ ತಂಡದ ಅಟ್ಯಾಕಿಂಗ್ ಆಟವನ್ನು ಲಾರಾ ಶ್ಲಾಘಿಸಿದ್ದಾರೆ.
ಯಶಸ್ವಿ ಜೈಸ್ವಾಲ್ ಟೀಮ ಇಂಡಿಯಾದ ಭರವಸೆಯ ಓಪನರ್. ಇವರು 11 ಟೆಸ್ಟ್ ಪಂದ್ಯಗಳಲ್ಲಿ ಬ್ಯಾಟ್ ಮಾಡಿದ್ದು 71.67 ಸರಾಸರಿಯಲ್ಲಿ 1217 ರನ್ ಸಿಡಿಸಿದ್ದಾರೆ. ಇದರಲ್ಲಿ ಮೂರು ಶತಕಗಳು ಮತ್ತು 7 ಅರ್ಧ ಶತಕಗಳು ಸೇರಿವೆ.