ಭಾರತದ ಮಾಜಿ ಲೆಗ್ ಸ್ಪಿನ್ನರ್ ಮತ್ತು ವೀಕ್ಷಕ ವಿವರಣೆಗಾರ ಲಕ್ಷ್ಮಣ್ ಶಿವರಾಮಕೃಷ್ಣನ್ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ನಡೆದ ಕಹಿ ಘಟನೆಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಮಾಜಿ ಭಾರತೀಯ ಕ್ರಿಕೆಟಿಗ ತಂಡದೊಳಗೆ ಜನಾಂಗೀಯತೆಯನ್ನು ಎದುರಿಸಿದ ಬಗ್ಗೆ ಅನುಭವ ಹಂಚಿಕೊಂಡಿದ್ದಾರೆ. ಒಮ್ಮೆ ಕೇಕ್ ತರಿಸಿದಾಗ ಸಹ ಆಟಗಾರ, ತಮಾಷೆಯಲ್ಲಿ ಅವರಿಗಾಗಿ ಸರಿಯಾದ ಕೇಕ್ ತರಿಸಿದ್ದೀರಿ ಎಂದು ಹೇಳಿದ್ದರಂತೆ. ಆ ದಿನ ಡಾರ್ಕ್ ಚಾಕಲೆಟ್ ಕೇಕ್ ತರಿಸಿದ್ದಾಗಿ ಲಕ್ಷ್ಮಣ್ ಶಿವರಾಮಕೃಷ್ಣನ್ ತಮ್ಮ ನೆನಪನ್ನು ಬಿಚ್ಚಿಟ್ಟಿದ್ದಾರೆ.
ಲಕ್ಷ್ಮಣ್ ಶಿವರಾಮಕೃಷ್ಣನ್ ಇಂಡಿಯನ್ ಎಕ್ಸ್ಪ್ರೇಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹತ್ತು ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಶಿವರಾಮಕೃಷ್ಣನ್ ಅವರು ಜನಾಂಗೀಯ ನಿಂದನೆಯ ಘಟನೆಗಳನ್ನು ಪದೇ ಪದೇ ಅನುಭವಿಸಿದ್ದಾಗಿ ತಿಳಿಸಿದ್ದಾರೆ. ಲಕ್ಷ್ಮಣ್ ಶಿವರಾಮಕೃಷ್ಣನ್ ಖ್ಯಾತ ಲೆಗ್ ಸ್ಪಿನ್ ಬೌಲರ್ ಆಗಿದ್ದರು. ಅವರು 17 ವರ್ಷದವರಿದ್ದಾಗ ರಣಜಿಯಲ್ಲಿ ಛಾಪು ಮೂಡಿಸಿದ್ದರು. ಫಲವಾಗಿ ಇವರನ್ನು 1982-83 ರಲ್ಲಿ ಪಾಕಿಸ್ತಾನ ಪ್ರವಾಸಕ್ಕೂ ತಂಡವನ್ನು ಆಯ್ಕೆ ಮಾಡಲಾಯಿತು. ಇದೇ ಸಮಯದಲ್ಲಿ ಲಕ್ಷ್ಮಣ್ ಶಿವರಾಮಕೃಷ್ಣನ್ ಅವರ ಹುಟ್ಟು ಹಬ್ಬ ಸಹ ಇತ್ತು. ಆಗಲೇ ಕಹಿ ಘಟನೆಯೊಂದು ನಡೆಯಿತು.

ಹುಟ್ಟು ಹಬ್ಬದ ನಿಮಿತ್ತ ತರಿಸಲಾದ ಕೇಕ್ ಡಾರ್ಕ್ ಚಾಕೊಲೇಟ್ ಕೇಕ್ ಆಗಿತ್ತು. ಆಗ ಇನ್ನೊಬ್ಬ ಆಟಗಾರ ನೀವು ಸರಿಯಾದ ಬಣ್ಣದ ಕೇಕ್ ಆರ್ಡರ್ ಮಾಡಿದ್ದೀರಿ. ಕಪ್ಪು ಬಣ್ಣದ ಹುಡುಗನಿಗೆ ಸರಿಯಾದ ಬಣ್ಣದ ಕೇಕ್ ತರಿಸಲಾಗಿದೆ ಎಂದು ತಿಳಿಸಿದರು. ಆಗ ನೋವು ತಡೆಯಲು ಆಗದೇ ಬಳಬಳನೇ ಅತ್ತು ಬಿಟ್ಟಿದ್ದೇನೆ. ಅಲ್ಲದೆ ಕೇಕ್ ಕತ್ತರಿಸಲು ಸಹ ನಿರಾಕರಿಸಿದೆ. ಸುನಿಲ್ ಗವಾಸ್ಕರ್ ನನಗೆ ಸಮಾಧಾನ ಮಾಡಿ ಕೇಕ್ ಕತ್ತರಿಸುವಂತೆ ಸೂಚಿಸಿದರು. ಅಳುತ್ತಲೇ ಕೇಕ್ ಕಟ್ ಮಾಡಿದೆ ಎಂದು ಲಕ್ಷ್ಮಣ್ ಶಿವರಾಮಕೃಷ್ಣನ್ ತಮ್ಮ ಹಳೆಯ ನೆನಪುಗಳನ್ನು ಮೆಲಕು ಹಾಕಿದ್ದಾರೆ.
ದೇಶೀಯ ಕ್ರಿಕೆಟ್ನಲ್ಲೂ ಅವರು ಇದೇ ರಿತಿ ನಿಂದನೆಗಳನ್ನು ಎದುರಿಸಿದ್ದಾರೆ. ತಮಿಳುನಾಡು ಡ್ರೆಸ್ಸಿಂಗ್ ಕೋಣೆಯಲ್ಲಿ ಅವರನ್ನು ಕರುಪ ಎಂದು ಕರೆಯಲಾಗುತ್ತಿತ್ತು. ಅದೇ ಉತ್ತರ ಭಾರತದಲ್ಲಿ ಕಾಲಿಯಾ ಎಂದು ಕರೆಯುತ್ತಿದ್ದರು ಎಂದು ಶಿವರಾಮಕೃಷ್ಣನ್ ತಿಳಿಸಿದ್ದಾರೆ.
ಒಮ್ಮೆ ಮುಂಬೈನಲ್ಲಿ ಟೀಮ್ ಇಂಡಿಯಾ ಆಟಗಾರರು ತಂಗಿದ್ದ ಹೋಟೆಲ್ನಲ್ಲಿ ನಾನು ಹೊರಟಿದ್ದಾಗ ಗೇಟ್ ಕೀಪರ್ ನನಗೆ ಹೋಟೆಲ್ ಒಳಗಡೆ ಬಿಡಲಿಲ್ಲ. ಆಗ ಸಹ ಆಟಗಾರ ಬಂದು ನನ್ನನ್ನು ತಮ್ಮೊಂದಿಗೆ ಕರೆದುಕೊಂಡು ಹೋದರು ಎಂದು ಶಿವರಾಮಕೃಷ್ಣನ್ ಹೇಳಿದ್ದಾರೆ.
ಮದುವೆಗಾಗಿ ಪೋಷಕರು ಒಂದು ಜಾಹೀರಾತು ನೀಡಿದ್ದರು. ಅದರಲ್ಲಿ ನಮ್ಮ ವಿಳಾಸ ಹಾಗೂ ನನ್ನ ವೃತ್ತಿ ಹಾಗೂ ನನ್ನ ಆಸ್ತಿಯನ್ನು ಬರೆಯಲಾಗಿತ್ತು. ಆದರೆ ಎರಡು ವಾರಗಳಲ್ಲಿ ಒಂದೇ ಒಂದು ಪೋಸ್ಟ್ ಬಂದಿರಲಿಲ್ಲ. ನನ್ನ ಹೆಸರನ್ನು ಆಗ ತುಂಬ ಹಾಳು ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.