ಪ್ರಸಕ್ತ ಐಪಿಎಲ್ನಲ್ಲೂ ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ನಾಯಕ ರಿಷಭ್ ಪಂತ್ ಮೊದಲ ಪಂದ್ಯದಲ್ಲಿ ಆರಂಭಿಕರಾಗಿ ಬ್ಯಾಟ್ ಮಾಡಿ ನಿರಾಸೆ ಅನುಭವಿಸಿದ್ದಾರೆ. ಇವರ ಬ್ಯಾಟಿಂಗ್ ಕ್ರಮಾಂಕ ಹಾಗೂ ಬ್ಯಾಟಿಂಗ್ ಧಾಟಿಯ ಬಗ್ಗೆ ಈಗ ಪ್ರಶ್ನೆಗಳು ಕೇಳಿ ಬರುತ್ತಿವೆ. ಈ ವೇಳೆ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಮೈಕೆಲ್ ವಾನ್ ಅವರು ದೊಡ್ಡ ಹೇಳಿಕೆ ನೀಡಿದ್ದಾರೆ.
ರಿಷಭ್ ಪಂತ್ ಒಬ್ಬ ಪ್ರತಿಭಾನ್ವಿತ ಆಟಗಾರ. ಇವರು ತಮ್ಮ ಸಾಮರ್ಥ್ಯದಿಂದ ಭಾರತ ತಂಡದಲ್ಲಿ ವಿಕೆಟ್ ಕೀಪರ್ ಆಗಿ ಸ್ಥಾನ ಭದ್ರ ಪಡಿಸಿಕೊಂಡಿದ್ದಾರೆ. ಆದರೆ ಇವರು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದಲ್ಲಿ ಅವರ ಸ್ಥಾನಕ್ಕೆ ಕುತ್ತು ಇದೆ ಎಂದು ವಾನ್ ಹೇಳಿದ್ದಾರೆ. ಅಲ್ಲದೆ ಭಾರತ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟರ್ಗಳಾದ ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಜಿತೇಶ್ ಶರ್ಮಾ ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಎಂದು ಇಂಗ್ಲೆಂಡ್ ಮಾಜಿ ಆಟಗಾರ ತಿಳಿಸಿದ್ದಾರೆ.

ಎಲ್ಎಸ್ಜಿ ರಿಷಭ್ ಪಂತ್ ಅವರಿಗೆ 27 ಕೋಟಿ ರೂ. ನೀಡಿ ಖರೀದಿಸಿತ್ತು. ಅಲ್ಲದೆ ಅವರಿಗೆ ನಾಯಕತ್ವ ನೀಡಿತ್ತು. ಇವರ ಮುಂದಾಳತ್ವದಲ್ಲಿ ಎಲ್ಎಸ್ಜಿ ಪ್ಲೇ ಆಫ್ ಪ್ರವೇಶಿಸಲು ಸಹ ವಿಫಲವಾಗಿತ್ತು. ಇವರು 19ನೇ ಆವೃತ್ತಿಯಲ್ಲೂ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಐಪಿಎಲ್ನಲ್ಲಿ ಅಷ್ಟೇ ಅಲ್ಲ ಪಂತ್ ಭಾರತದ ಪರ ಕಣಕ್ಕೆ ಇಳಿದಾಗಲೂ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದು, ಈಗ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಈಗ ವಾನ್ ರಿಷಭ್ ಪಂತ್ ಅವರು ರಾಜಸ್ಥಾನ ರಾಯಲ್ಸ್ ತಂಡದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರಿಂದ ಪಾಠ ಕಲಿಯಬೇಕು ಎಂದು ಹೇಳಿದ್ದಾರೆ.
ರಿಷಭ್ ಪಂತ್ ಅವರಿಗೆ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಲು ಇದು ಬೆಸ್ಟ್ ವೇದಿಕೆ. ಇವರು ತಮ್ಮ ನಾಯಕತ್ವ ಹಾಗೂ ಬ್ಯಾಟಿಂಗ್ ಸುಧಾರಿಸಿಕೊಂಡರೆ ಒಳ್ಳೆಯದು. ಪಂತ್, ಆಡುವಾಗ ವೈಭವ್ ಆಟ ನೆನಪಾಗುತ್ತದೆ. ಪಂತ್ ಅವರು ಸಹ ವೈಭವ್ ಧಾಟಿಯ ಬ್ಯಾಟರ್. ನಿರ್ಭೀತಿ ಹಾಗೂ ಸುಲಭವಾಗಿ ಸಿಕ್ಸರ್ ಬಾರಿಸುವ ಕ್ಷಮತೆ ಹೊಂದಿರುವ ಆಟಗಾರ. ಇವರು ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದರೆ ಉಪಯೋಗ ಅವರು ಆಕ್ರಮಣಕಾರಿ ಆಟದ ಮನೋಭಾವದಿಂದ ಕಣಕ್ಕೆ ಇಳಿಯಬೇಕು ಎಂದು ವಾನ್ ಅಭಿಪ್ರಾಯ ಪಟ್ಟಿದ್ದಾರೆ.

ಪಂತ್ ಭಾರತ ತಂಡದ ಪರ ಮೂರು ಫಾರ್ಮೆಟ್ಗಳನ್ನು ಆಡಿರುವ ಆಟಗಾರ. ಇವರಿಗೆ ಎಲ್ಲ ಫಾರ್ಮೆಟ್ನಲ್ಲಿ ತಮ್ಮ ಚಾಪು ಮೂಡಿಸುವ ಸಾಮರ್ಥ್ಯವಿದೆ. ಇವರು ಟೆಸ್ಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದರೆ ಎಲ್ಲ ಮಾದರಿಯ ಕ್ರಿಕೆಟ್ಗೂ ಇವರು ಹೊಂದಿಕೊಳ್ಳುವ ಆಟಗಾರ. ಅವರು ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಬೇಕು ಎಂದು ಇಂಗ್ಲೆಂಡ್ ಮಾಜಿ ಆಟಗಾರ ವಾನ್ ತಿಳಿಸಿದ್ದಾರೆ.
ಪಂತ್ ಪ್ರಸಕ್ತ ಆವೃತ್ತಿಯ ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಇನಿಂಗ್ಸ್ ಆರಂಭಿಸಿ ಸಿಂಗಲ್ಸ್ ಡಿಜಿಟ್ನಲ್ಲಿ ಆಟ ಮುಗಿಸಿದ್ದರು.