

ನವದೆಹಲಿ, ಫೆಬ್ರವರಿ 13: ಡಿಡಿಸಿಎ ಆಯ್ಕೆ ಸಮಿತಿಯ ಅಧ್ಯಕ್ಷ, ಭಾರತದ ಮಾಜಿ ವೇಗಿ ಅಮಿತ್ ಭಂಡಾರಿ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಅಂಡರ್-23 ಆಟಗಾರ ಅನುಜ್ ದೇಢಾ ಅವರನ್ನು ಡೆಲ್ಲಿ ಆ್ಯಂಡ್ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ಜೀವನ ಪರ್ಯಾಂತ ನಿಷೇಧಿಸಿದೆ.
ರಾಜ್ಯ ಅಂಡರ್-23 ತಂಡದಲ್ಲಿ ಆಯ್ಕೆ ನಡೆಸಲಿಲ್ಲ ಎಂಬ ಕಾರಣಕ್ಕೆ ಡಿಡಿಸಿಎ ಆಯ್ಕೆ ಸಮಿತಿಯ ಅಮಿತ್ ಮೇಲೆ ದೇಢಾ ಮತ್ತವರ ಬೆಂಬಲಿಗರು ದೈಹಿಕ ಹಲ್ಲೆ ನಡೆಸಿದ್ದರು. ದೆಹಲಿಯ ಸೇಂಟ್ ಸ್ಟೀಫನ್ಸ್ ಗ್ರೌಂಡ್ನಲ್ಲಿ ಸೈಯ್ಯದ್ ಮುಷ್ತಕ್ ಆಲಿ ಟ್ರೋಫಿಗಾಗಿ ಹಿರಿಯ ಆಟಗಾರರಿದ್ದ ಡೆಲ್ಲಿ ತಂಡದ ಅಭ್ಯಾಸ ಪಂದ್ಯ ವೀಕ್ಷಿಸುತ್ತಿದ್ದಾಗ ಭಂಡಾರಿ ಮೇಲೆ ಹಲ್ಲೆ ನಡೆಸಲಾಗಿತ್ತು.
ಅನುಜ್ ಮತ್ತು ಗೂಂಡಾಗಳಿದ್ದ 15 ಜನರ ತಂಡ ಅಮಿತ್ ಅವರನ್ನು ಹಾಕಿ ಸ್ಟಿಕ್, ಕ್ರಿಕೆಟ್ ಬ್ಯಾಟ್, ರಾಡ್ ಮೂಲಕ ಹೊಡೆದಿತ್ತು. ಇದರಿಂದಾಗಿ ಅಮಿತ್ ಅವರ ತಲೆ, ಕಾಲು ಮತ್ತು ದೇಹದ ಇನ್ನಿತರ ಭಾಗಗಳಿಗೆ ತೀವ್ರಗಾಯಗಳಾಗಿತ್ತು. ಗೂಂಡಾ ವರ್ತನೆ ಪ್ರತಿಯಾಗಿ ಅನುಜ್ ಅವರಿಗೆ ಡಿಡಿಸಿಎ ಆಜೀವ ನಿಷೇಧ ಶಿಕ್ಷೆ ವಿಧಿಸಿದೆ.