ನವದೆಹಲಿ, ಜು. 30: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಆರೋಪದಿಂದ ಮುಕ್ತರಾಗಿದ್ದರೂ ಶ್ರಿಶಾಂತ್ ಗೆ ಚೆಂಡು ಹಿಡಿಯುವ ಭಾಗ್ಯವಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳಬೇಕೆಂಬ ಅವರ ಆಸೆಗೆ ಬಿಸಿಸಿಐ ತಣ್ಣೀರು ಎರಚಿದೆ.
ಕೋರ್ಟ್ ನಿರ್ದೋಷಿಗಳು ಎಂದು ಹೇಳಿದ್ದರೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿಷೇಧ ಹಿಂಪಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಮೂವರು ಕ್ರಿಕೆಟಿಗರಾದ ಎಸ್. ಶ್ರೀಶಾಂತ್, ಅಂಕಿತ್ ಚೌಹಾಣ್ ಹಾಗೂ ಅಜಿತ್ ಚಾಂಡಿಲಾ ಕ್ರಿಕೆಟ್ ಭವಿಷ್ಯ ಮುಗಿದಂತೆ ಎಂದು ವಿಶ್ಲೇಷಣೆ ಮಾಡಲಾಗಿದೆ.[ಐಪಿಎಲ್ 6 ಸ್ಪಾಟ್ ಫಿಕ್ಸಿಂಗ್ : ಶ್ರೀಶಾಂತ್ ಸೇರಿ ಮೂವರು ಆರೋಪ ಮುಕ್ತ]
ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವನ್ನು ಶ್ರೀಶಾಂತ್ ಎದುರಿಸುತ್ತಿದ್ದರು. ನ್ಯಾಯಾಲಯ ಅವರಿಗೆ ವಿನಾಯಿತಿ ನೀಡಿರಬಹುದು ಆದರೆ ಬಿಸಿಸಿಐ ನಿಷೇಧ ಮುಂದುವರಿಸಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಸ್ಪಷ್ಟಪಡಿಸಿದ್ದಾರೆ.[ಐಪಿಎಲ್ ಹಗರಣ 2013 ರಿಂದ 2015: ಟೈಮ್ ಲೈನ್]
ಶ್ರೀಶಾಂತ್ ಮೇಲಿನ ನಿರ್ಧಾರವನ್ನು ಪುನರ್ ಪರಿಶೀಲನೆ ಮಾಡುವಂತೆ ಕೇರಳ ಕ್ರಿಕೆಟ್ ಮಂಡಳಿ ಬಿಸಿಸಿಐಗೆ ಮನವಿ ಮಾಡಿತ್ತು. ಶ್ರೀಶಾಂತ್ ಹಾಗೂ ಚೌವಾಣ್ ಆಜೀವ ನಿಷೇಧಕ್ಕೆ ಗುರಿಯಾಗಿದ್ದರೆ, ಚಾಂಡಿಲಾ ವಿರುದ್ಧ ವಿಚಾರಣೆ ಇನ್ನೂ ಬಾಕಿ ಇದೆ. ಇದು ಬಿಸಿಸಿಯ ನ ಶಿಸ್ತು ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದ್ದು ಆಜೀವ ನಿಷೇಧವನ್ನು ಯಾವ ಕಾರಣಕ್ಕೂ ಹಿಂಪಡೆಯಲ್ಲ ಎಂದು ಠಾಕೂರ್ ತಿಳಿಸಿದ್ದಾರೆ.