
ನವದೆಹಲಿ: ಭಾರತದ ಇಂಗ್ಲೆಂಡ್ ಪ್ರವಾಸದ ವೇಳೆ ಬೌಲರ್ ಶಾರ್ದೂಲ್ ಠಾಕೂರ್ ಮಿಂಚಿದ್ದರು. ಟೆಸ್ಟ್ ಕ್ರಿಕೆಟ್ನಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ಶಾರ್ದೂಲ್ಗೆ ಅಭಿಮಾನಿಗಳು ಪ್ರೀತಿಯಿಂದ 'ಲಾರ್ಡ್ಸ್ ಶಾರ್ದೂಲ್' ಎಂದು ಕರೆಯತೊಡಗಿದ್ದರು. ಅಂಥ ಶಾರ್ದೂಲ್ ಇತ್ತೀಚಿಗೆ ಟಿ20 ವಿಶ್ವಕಪ್ಗಾಗಿ ಭಾರತ ಪ್ರಕಟಿಸಿದ ತಂಡದಲ್ಲಿ ಇರಲಿಲ್ಲ. ಶಾರ್ದೂಲ್ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಬ್ರಿಸ್ಬೇನ್ನ ಗಬ್ಬಾದಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ನಾಲ್ಕನೇ ಟೆಸ್ಟ್ನಲ್ಲಿ ಶಾರ್ದೂಲ್ ಠಾಕೂರ್ 67 ರನ್ ಬಾರಿಸಿದ್ದರು. ಅಲ್ಲದೆ ವಾಷಿಂಗ್ಟನ್ ಸುಂದರ್ ಜೊತೆಗೆ 123 ರನ್ ಪಾರ್ಟ್ನರ್ಶಿಪ್ ಕೂಡ ನೀಡಿದ್ದರು. ಲಂಡನ್ನ ಕೆನ್ನಿಂಗ್ಟನ್ ಓವಲ್ನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲೂ ಠಾಕೂರ್ ಆರಂಭಿಕ ಇನ್ನಿಂಗ್ಸ್ನಲ್ಲಿ 36 ಎಸೆತಗಳಲ್ಲಿ 57 ರನ್, ದ್ವಿತೀಯ ಇನ್ನಿಂಗ್ಸ್ನಲ್ಲಿ 72 ಎಸೆತಗಳಿಗೆ 60 ರನ್ ಬಾರಿಸಿದ್ದರು. ಠಾಕೂರ್ ಅದ್ಭುತ ಆಲ್ ರೌಂಡರ್ ಆಟದಿಂದಾಗಿ ಭಾರತ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಳ್ಳಲು ಸಾಧ್ಯವಾಗಿತ್ತು.
ಇಂಡಿಯನ್ ಪ್ರೀಮಿಯರ್ ಲೀಗ್ ದ್ವಿತೀಯ ಹಂತದ ಟೂರ್ನಿಗಾಗಿ ಸದ್ಯ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೊತೆಗಿರುವ ಠಾಕೂರ್, ವಿಶ್ವಕಪ್ನಲ್ಲಿ ಅವಕಾಶ ಸಿಗದಿರುವುದರ ಬಗ್ಗೆ ಮಾತನಾಡಿದ್ದಾರೆ. ಹೌದು ನನಗೆ ಸ್ವಲ್ಪ ನಿರಾಶೆಯಾಗಿದೆ," ಎಂದು ಠಾಕೂರ್ ಹೇಳಿದ್ದಾರೆ. ಸೆಪ್ಟೆಂಬರ್ 19ರಿಂದ ಐಪಿಎಲ್ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಮುಂಬೈ-ಚೆನ್ನೈ ಕಾದಾಡಲಿವೆ.
"ವಿಶ್ವಕಪ್ ತಂಡದಲ್ಲಿ ಆಡಿ ದೇಶಕ್ಕೆ ಟ್ರೋಫಿ ಗೆಲ್ಲಬೇಕು ಅನ್ನೋದು ಎಲ್ಲರ ಕನಸು. ಓವಲ್ ಟೆಸ್ಟ್ ಬಗ್ಗೆ ನೀವು ಮಾತನಾಡಿದರೆ ಹೌದು, ಆದರೆ ಅದು ರೆಡ್ ಬಾಲ್ ಮಾದರಿ. ಆದರೆ ವೈಟ್ಬಾಲ್ನಲ್ಲಿ ನಾನು ಕಳೆದ ಎರಡು ವರ್ಷಗಳಲ್ಲಿ ಎರಡೂ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ನಾನು ವಿಶ್ವಕಪ್ ಮೀಸಲು ತಂಡದ ಭಾಗವಾಗಿದ್ದೇನೆ. ನನಗೆ ಯಾವುದೇ ಕ್ಷಣದಲ್ಲೂ ತಂಡಕ್ಕೆ ಕರೆ ಬರಬಹುದು. ನಾನು ತಯಾರಾಗಿರಬೇಕು," ಎಂದು ಠಾಕೂರ್ ವಿವರಿಸಿದ್ದಾರೆ.