18ನೇ ಆವೃತ್ತಿಯ ಐಪಿಎಲ್ ರೋಚಕ ಘಟ್ಟದತ್ತ ಮುಖ ಮಾಡಿದೆ. ಶನಿವಾರ ಜೈಪುರ್ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಎಲ್ಎಸ್ಜಿ 2 ರನ್ಗಳ ರೋಚಕ ಜಯ ದಾಖಲಿಸಿದೆ. ಈ ಮೂಲಕ ರಾಜಸ್ಥಾನ ತವರಿನಲ್ಲಿ ಮತ್ತೊಂದು ಸೋಲು ಕಂಡಿದೆ. ಸಂಜು ಸ್ಯಾಮ್ಸನ್ ಅನುಪಸ್ಥಿತಿಯಲ್ಲಿ ರಿಯಾನ್ ಪರಾಗ್ ತಂಡವನ್ನು ಮುನ್ನಡೆಸಿದ್ದು, ಇವರ ಸೋಲಿನ ಸಂಖ್ಯೆಗೆ ಮತ್ತೊಂದು ಸಂಖ್ಯೆ ಸೇರ್ಪಡೆ ಆಗಿದೆ. ಪಂದ್ಯ ಬಳಿಕ ರಿಯಾನ್ ತಮ್ಮ ಮನದಾಳದ ಮಾತುಗಳನ್ನು ಹೇಳಿದ್ದಾರೆ. ಅಲ್ಲದೆ ತಾವು ಎಡವಿದ್ದು ಎಲ್ಲಿ ಎಂಬ ಬಗ್ಗೆಯೂ ಮಾತನಾಡಿದ್ದಾರೆ.
ಎಲ್ಎಸ್ಜಿ 36ನೇ ಪಂದ್ಯದಲ್ಲಿ ಟಾಸ್ ಗೆಲ್ಲುತ್ತಿದ್ದಂತೆ ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ತೆಗೆದುಕೊಂಡಿತು. ಈ ನಿರ್ಧಾರ ಹಲವರಿಗೆ ಅಚ್ಚರಿ ತಂದಿತು. ಮೊದಲು ಬ್ಯಾಟ್ ಮಾಡಿದ ಎಲ್ಎಸ್ಜಿ ದೊಡ್ಡ ಮೊತ್ತವನ್ನು ಏನು ಕಲೆ ಹಾಕಲಿಲ್ಲ. ಆದರೆ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಿತು. 20 ಓವರ್ಗಳಲ್ಲಿ ಲಕ್ನೋ 5 ವಿಕೆಟ್ ನಷ್ಟಕ್ಕೆ 180 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ರಾಜಸ್ಥಾನ ಉತ್ತಮ ಸ್ಥಿತಿಯಲ್ಲಿತ್ತು. 19 ಓವರ್ಗಳಲ್ಲಿ 172 ರನ್ ಸಿಡಿಸಿತ್ತು. ಕೊನೆಯ ಓವರ್ನಲ್ಲಿ ಗೆಲುವಿನ 9 ರನ್ ಅವಶ್ಯಕತೆ ಇತ್ತು. ಆದರೆ 20ನೇ ಓವರ್ನಲ್ಲಿ ಆವೀಶ್ ಖಾನ್ ಮ್ಯಾಜಿಕ್ ಮಾಡಿದರು. ಪರಿಣಾಮ ಗೆಲ್ಲುವ ಪಂದ್ಯವನ್ನು ರಾಜಸ್ಥಾನ ಸೋಲ ಬೇಕಾಯಿತು.

ಪಂದ್ಯದ ಬಳಿಕ ಮಾತನಾಡಿರುವ ರಿಯಾನ್ ಪರಾಗ್, ಸೋಲಿಗೆ ಏನು ಎಂದು ಹೇಳಬೇಕು ಎಂಬುದೇ ಅರ್ಥವಾಗುತ್ತಿಲ್ಲ. ಈ ಪಂದ್ಯದಲ್ಲಿ ಅವರು ಮಾಡಿದ ತಪ್ಪು ಅವರಿಗೆ ಅರ್ಥವಾಗಿಲ್ಲ ಎಂದು ತಿಳಿಸಿದರು. ನಾನು ಈ ಪಂದ್ಯವನ್ನು ಬೇಗನೇ ಮುಗಿಸಬೇಕಿತ್ತು ಎಂದು ಹೇಳಿದ್ದಾರೆ. ರಿಯಾನ್ 18ನೇ ಓವರ್ನ ಕೊನೆಯ ಎಸೆತದಲ್ಲಿ ಔಟ್ ಆದರು. ಆಗ ರಾಜಸ್ಥಾನ ಸುಲಬವಾಗಿ ಪಂದ್ಯವನ್ನು ಗೆಲ್ಲಬಹುದು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಎಲ್ಎಸ್ಜಿ ಕಮಾಲ್ ಪ್ರದರ್ಶನ ನೀಡಿತು. ಮುಂಬರುವ ಪಂದ್ಯಗಳಲ್ಲಿ ತಮ್ಮ ತಂಡವು 40 ಓವರ್ಗಳ ಸಂಘಟಿತ ಪ್ರದರ್ಶನ ನೀಡಿದ್ರೆ, ಮಾತ್ರ ಗೆಲ್ಲಲು ಸಾಧ್ಯ ಎಂದು ಅವರು ಹೇಳಿದರು.
ತಮ್ಮ ತಂಡದ ಬೌಲಿಂಗ್ ಸಾಧನೆಯ ಬಗ್ಗೆ ರಿಯಾನ್ ಮೆಚ್ಚಿಕೊಂಡರು. ತಮ್ಮ ತಂಡದ ಬೌಲರ್ಗಳು ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಕೊನೆಯ ಓವರ್ನಲ್ಲಿ ಸಂದೀಪ್ ಶರ್ಮಾ ನೀಡಿದ್ದ 27 ರನ್ಗಳು ದುಬಾರಿ ಆದವು. ನಾವು ಲಕ್ನೋ ತಂಡವನ್ನು 165 ರಿಂದ 170 ರನ್ಗಳಿಗೆ ಕಟ್ಟಿ ಹಾಕುವ ಪ್ಲ್ಯಾನ್ ಮಾಡಿಕೊಂಡಿದ್ದೇವು. ಸಂದೀಪ್ ಉತ್ತಮ ಬೌಲರ್. ಅವರನ್ನು ನಂಬಬಹುದು. ಒಂದು ಓವರ್ ಕೆಟ್ಟದಾಗಿತ್ತು. ಅಬ್ದುಲ್ ಸಮದ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ಪಿಚ್ ಬಗ್ಗೆ ನನಗೆ ಅಸಮಾಧಾನ ಇಲ್ಲ. ಆದರೆ ನಮ್ಮ ಪ್ರದರ್ಶನದ ಬಗ್ಗೆ ನನಗೆ ಬೇಸರ ಇದೆ ಎಂದು ರಿಯಾನ್ ತಿಳಿಸಿದ್ದಾರೆ.
ರಿಷಭ್ ಪಂತ್ ಹೇಳಿದ್ದೇನು?
ಗೆಲುವಿನ ಬಳಿಕ ಮಾತನಾಡಿರುವ ಪಂತ್, ಇಂತಹ ಗೆಲುವುಗಳು ತಂಡದ ಕ್ಯಾರೇಕ್ಟರ್ ತೋರಿಸುತ್ತದೆ. ಅಲ್ಲದೆ ತಂಡದ ಮನಸ್ಥಿತಿಯನ್ನು ಬೆಳೆಸುತ್ತದೆ. ಮುಂದಿನ ದಿನಗಳಲ್ಲಿ ಇನ್ನು ಉತ್ತಮ ಪ್ರದರ್ಶನ ನೀಡಲು ನಾವು ಬದ್ಧ. ಬೌಲರ್ಗಳು ನಿಜಕ್ಕೂ ಅಮೋಘ ಬೌಲಿಂಗ್ ನಡೆಸಿದರು. ನಮ್ಮ ಯೋಜನೆಯನ್ನು ಮೈದಾನದಲ್ಲಿ ಕಾರ್ಯ ರೂಪಕ್ಕೆ ತರುವುದೇ ಸವಾಲು ಆಗಿತ್ತು. ನಾವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎಂಬ ನಂಬಿಕೆ ನನಗಿದೆ ಎಂದು ಎಲ್ಎಸ್ಜಿ ನಾಯಕ ರಿಷಭ್ ಪಂತ್ ತಿಳಿಸಿದ್ದಾರೆ.