ಮುಂಬೈ ಇಂಡಿಯನ್ಸ್ ತಂಡ ಮಂಗಳವಾರ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಸೆಣೆಸಾಡಲು ಸಜ್ಜಾಗಿದೆ. ಲಕ್ನೋದ ಏಕಾನ ಕ್ರೀಡಾಂಗಣದಲ್ಲಿ ಈ ಮುಖಾಮುಖಿ ನಡೆಯಲಿದ್ದು ಎರಡು ತಂಡಗಳ ನಡುವಿನ ಸೆಣೆಸಾಟ ತೀವ್ರ ಕುತೂಹಲ ಮೂಡಿಸಿದೆ. ಈ ಪಂದ್ಯಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ತಂಡದ ಯುವ ವೇಗಿ ಅರ್ಜುನ್ ತೆಂಡೂಲ್ಕರ್ ನಾಯಿಯಿಂದ ಕಡಿತಕ್ಕೆ ಒಳಗಾಗಿದ್ದಾರೆ. ಈ ವಿಚಾರವನ್ನು ಸ್ವತಃ ಅರ್ಜುನ್ ತೆಂಡೂಲ್ಕರ್ ಹೇಳಿಕೊಂಡಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯಕ್ಕಾಗಿ ಲಕ್ನೋದ ಏಕಾನ ಕ್ರೀಡಾಂಗಣಕ್ಕೆ ಆಗಮಿಸಿದ ಅರ್ಜುನ್ ತೆಂಡೂಲ್ಕರ್ ಎದುರಾಳಿ ತಂಡದಲ್ಲಿರುವ ತಮ್ಮ ಗೆಳೆಯರಾದ ಯುಧ್ವೀರ್ ಸಿಂಗ್ ಹಾಗೂ ಮೊಹಸೀನ್ ಖಾನ್ ಜೊತೆಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಅರ್ಜುನ್ ತೆಂಡೂಲ್ಕರ್ ತಮ್ಮ ಕೈಗೆ ನಾಯಿ ಕಡಿದಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಅರ್ಜುನ್ ತೆಂಡೂಲ್ಕರ್ ಗೆಳೆಯರಾದ ಎಲ್ಎಸ್ಜಿ ತಂಡದ ಮೊಹ್ಸಿನ್ ಖಾನ್ ಹಾಗೂ ಯುಧ್ವೀರ್ ಸಿಂಗ್ ಅವರನ್ನು ಆಲಂಗಿಸಿಕೊಂಡ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದೆ. ಇಲ್ಲಿ ಯುವ ಆಟಗಾರರ ಸಂಭಾಷಣೆ ಕೂಡ ವಿಡಿಯೋದಲ್ಲಿ ದಾಖಲಾಗಿದ್ದು ಅರ್ಜುನ್ ತೆಂಡೂಲ್ಕರ್ ತಮ್ಮ ಕೈಗೆ ನಾಯಿ ಕಡಿದಿರುವುದನ್ನು ವಿವರಿಸಿದ್ದಾರೆ.
ಅರ್ಜುನ್ ತೆಂಡೂಲ್ಕರ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಟೂರ್ನಿಗೆ ಪದಾರ್ಪಣೆ ಮಾಡಿದ್ದಾರೆ. ಎಡಗೈ ವೇಗಿ ಅರ್ಜುನ್ ಈವರೆಗೆ ನಾಲ್ಕು ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪದಾರ್ಪಣಾ ಪಂದ್ಯದಲ್ಲಿ ಎರಡು ಓವರ್ಗಳ ಬೌಲಿಂಗ್ ಮಾಡಿದ ಅರ್ಜುನ್ ಯಾವುದೇ ವಿಕೆಟ್ ಪಡೆದಿರಲಿಲ್ಲ. ಆದರೆ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ತಮ್ಮ ಚೊಚ್ಚಲ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಅರ್ಜುನ್ ತಮ್ಮ ಮೂರನೇ ಪಂದ್ಯದಲ್ಲಿ ಮೂರು ಓವರ್ಗಳಲ್ಲಿ ಬರೊಬ್ಬರಿ 48 ರನ್ಗಳನ್ನು ಬಿಟ್ಟುಕೊಟ್ಟು ಅತ್ಯಂತ ದುಬಾರಿಯೆನಿಸಿಕೊಂಡರು. ಆದರೆ ಮುಂದಿನ ಪಂದ್ಯದಲ್ಲಿಯೇ ಅರ್ಜುನ್ ಅದ್ಭುಯತವಾಗಿ ಕಮ್ಬ್ಯಾಕ್ ಮಾಡುವಲ್ಲಿಯೂ ಯಶಸ್ವಿಯಾದರು. ಗುಜರಾತ್ ಟೈಟನ್ಸ್ ವಿರುದ್ಧ ಪಂದ್ಯದಲ್ಲಿ ಅರ್ಜುನ್ ವೃದ್ಧಿಮಾನ್ ಸಾಹಾ ಅವರ ವಿಕೆಟ್ ಪಡೆದುಕೊಂಡಿದ್ದು ಎರಡು ಓವರ್ಗಳ ಬೌಲಿಂಗ್ ದಾಳಿಯಲ್ಲಿ ಕೇವಲ 9 ರನ್ ನೀಡಿದ್ದರು.
ಇನ್ನು ಅರ್ಜುನ್ ತೆಂಡೂಲ್ಕರ್ ಕಳೆದ ಐದು ಪಂದ್ಯಗಳಲ್ಲಿ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆದುಕೊಂಡಿಲ್ಲ. ಇದೀಗ ನಾಯಿ ಕಡಿತಕ್ಕೆ ಒಳಗಾಗಿರುವ ಕಾರಣ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂದ್ಯದಲ್ಲಿಯೂ ಆಡುವ ಸಾಧ್ಯತೆ ಕಡಿಮೆಯಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡ: ಕೈಲ್ ಮೇಯರ್ಸ್, ಕ್ವಿಂಟನ್ ಡಿ ಕಾಕ್(ವಿಕೆಟ್ ಕೀಪರ್), ಪ್ರೇರಕ್ ಮಂಕಡ್, ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್, ಕೃನಾಲ್ ಪಾಂಡ್ಯ(ನಾಯಕ), ಅಮಿತ್ ಮಿಶ್ರಾ, ಯಶ್ ಠಾಕೂರ್, ರವಿ ಬಿಷ್ಣೋಯ್, ಯುದ್ವೀರ್ ಸಿಂಗ್ ಚರಕ್, ಅವೇಶ್ ಖಾನ್, ಆಯುಷ್ ಬಡೋನಿ, ಸ್ವಪ್ನಿಲ್ ಸಿಂಗ್, ಡೇನಿಯಲ್ ಸಾಮ್ಸ್, ದೀಪಕ್ ಹೂಡಾ, ಅರ್ಪಿತ್ ಗುಲೇರಿಯಾ, ಕೃಷ್ಣಪ್ಪ ಗೌತಮ್, ಮೊಹ್ಸಿನ್ ಖಾನ್, ಕರುಣ್ ನಾಯರ್, ಮನನ್ ವೋಹ್ರಾ, ಮಾರ್ಕ್ ವುಡ್, ನವೀನ್-ಉಲ್-ಹಕ್, ರೊಮಾರಿಯೋ ಶೆಫರ್ಡ್, ಕರಣ್ ಶರ್ಮಾ
ಮುಂಬೈ ಇಂಡಿಯನ್ಸ್ ತಂಡ: ಇಶಾನ್ ಕಿಶನ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ನೆಹಾಲ್ ವಧೇರಾ, ಕ್ಯಾಮೆರಾನ್ ಗ್ರೀನ್, ವಿಷ್ಣು ವಿನೋದ್, ಟಿಮ್ ಡೇವಿಡ್, ಕ್ರಿಸ್ ಜೋರ್ಡಾನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆನ್ಡಾರ್ಫ್, ಕುಮಾರ್ ಕಾರ್ತಿಕೇಯ, ಆಕಾಶ್ ಮಧ್ವಲ್, ರಮಣದೀಪ್ ಸಿಂಗ್, ಡೆವಾಲ್ಡ್ ಬ್ರೆವಿಸ್, ಸಂದೀಪ್ ವಾರಿಯರ್, ಹೃತಿಕ್ ಶೋಕೀನ್, ರಿಲೆ ಮೆರೆಡಿತ್, ಶಮ್ಸ್ ಮುಲಾನಿ, ಅರ್ಜುನ್ ತೆಂಡೂಲ್ಕರ್, ತಿಲಕ್ ವರ್ಮಾ, ದುವಾನ್ ಜಾನ್ಸೆನ್, ಅರ್ಷದ್ ಖಾನ್, ಟ್ರಿಸ್ಟಾನ್ ಸ್ಟಬ್ಸ್, ರಾಘವ್ ಗೋಯಲ್