ವಿಶ್ವದಲ್ಲೇ ಅತ್ಯುತ್ತಮ ಕ್ರಿಕೆಟ್ ಸ್ಟೇಡಿಯಂ ಎಂಬ ಹೆಗ್ಗಳಿಕೆ ಪಾತ್ರರಾಗಿರುವ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ 50ರ ಸಂಭ್ರಮದಲ್ಲಿದೆ. ಕರ್ನಾಟಕ ಕ್ರಿಕೆಟ್ ಪಾಲಿಗೆ ಚಿನ್ನಸ್ವಾಮಿ ಸ್ಟೇಡಿಯಂ 'ಪುಣ್ಯ ಭೂಮಿ' ಆಗಿದೆ. ಈ ಮೈದಾನದಲ್ಲಿ ಆಡಿದ ಬೆಳೆದ ಅದೆಷ್ಟೋ ಪ್ರತಿಭೆಗಳು ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಇಂತಹ ಹೈಟೆಕ್ ಸ್ಟೇಡಿಯಂನಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯ ನಡೆದು ನವೆಂಬರ್ 22ಕ್ಕೆ ಬರೋಬ್ಬರಿ 50 ವರ್ಷಗಳು ತುಂಬಿದೆ. ಆ ಐತಿಹಾಸಿ ಪಂದ್ಯದಲ್ಲಿ ಯಾವ ತಂಡಗಳು ಮುಖಾಮುಖಿಯಾಗಿದ್ದವು? ಯಾರೆಲ್ಲಾ ಆಡಿದ್ದರು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತದಲ್ಲಿ 1974ರ ನವೆಂಬರ್ 22 ರಂದು ಮತ್ತೊಂದು ಟೆಸ್ಟ್ ಕ್ರಿಕೆಟ್ ಕೇಂದ್ರ ಎಲ್ಲರ ಗಮನ ಸೆಳೆದಿತ್ತು. ಅದು ಬೆಂಗಳೂರಿನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಸ್ಟೇಡಿಯಂ. ಇದೇ ದಿನದಂದು ಭಾರತ ಮತ್ತು ವೆಸ್ಟ್ಇಂಡೀಸ್ ತಂಡಗಳು ಮುಖಾಮುಖಿಯಾಗಿದ್ದವು. ಮನ್ಸೂರ್ ಅಲಿ ಖಾನ್ ಪಟೌಡಿ ಭಾರತ ತಂಡದ ನಾಯಕತ್ವ ವಹಿಸಿದ್ದರೆ, ವಿಂಡೀಸ್ ತಂಡವನ್ನು ಕ್ಲೈವ್ ಲಾಯ್ಡ್ ಮುನ್ನಡೆಸಿದ್ದರು.

ಟೀಮ್ ಇಂಡಿಯಾದಲ್ಲಿ ದಿಗ್ಗಜ ಆಟಗಾರರಾದ ಸುನಿಲ್ ಗವಾಸ್ಕರ್, ಜಿ ಆರ್ ವಿಶ್ವನಾಥ್, ಇಎಎಸ್ ಪ್ರಸನ್ನ, ಬಿಎಸ್ ಚಂದ್ರಶೇಖರ್, ಬ್ರಿಜೇಶ್ ಪಟೇಲ್, ಏಕ್ನಾಥ್ ಸೋಲ್ಕರ್, ಫಾರೂಖ್ ಎಂಜಿನಿಯರ್, ಎಸ್ ವೆಂಕಟರಾಘವನ್ ಇದ್ದರು. ಮತ್ತೊಂದೆಡೆ ಲಾಯ್ಡ್, ಆಲ್ವಿನ್ ಕಾಲಿಚರಣ್, ರಾಯ್ ಫ್ರೆಡ್ರಿಕ್ಸ್, ಆ್ಯಂಡಿ ರಾಬರ್ಟ್ಸ್, ಲ್ಯಾನ್ಸ್ ಗಿಬ್ಸ್, ಕೀಥ್ ಬಾಯ್ಸ್, ಡೆರೆಕ್ ಮರ್ರೆ ಅವರಂತಹ ಸ್ಟಾರ್ ಆಟಗಾರರು ವಿಂಡೀಸ್ ತಂಡದಲ್ಲಿದ್ದರು. ಇವರೊಂದಿಗೆ ಮತ್ತಿಬ್ಬರು ವಿಂಡೀಸ್ ಪರ ಪಾದಾರ್ಪಣೆ ಮಾಡಿದ್ದರು. ಅವರೇ ದಿಗ್ಗಜ ಬ್ಯಾಟರ್ ಸರ್ ವಿವಿಯನ್ ರಿಚರ್ಡ್ಸ್ ಹಾಗೂ ಗಾರ್ಡನ್ ಗ್ರೀನಿಡ್ಜ್.
ಐತಿಹಾಸಿಕ ಪಂದ್ಯದಲ್ಲಿ ಮೊದಲು ಇನ್ನಿಂಗ್ಸ್ನಲ್ಲಿ ವಿಂಡೀಸ್ 289 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಭಾರತ 260 ರನ್ಗೆ ಆಲೌಟಾಗಿತ್ತು. 29 ರನ್ ಮುನ್ನಡೆ ಪಡೆದ ವಿಂಡೀಸ್ 2ನೇ ಇನ್ನಿಂಗ್ಸಲ್ಲಿ 6 ವಿಕೆಟ್ಗೆ 356 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. 386 ರನ್ ಗುರಿ ಪಡೆದ ಭಾರತಕ್ಕೆ ಗೆಲ್ಲಲು 2ನೇ ಇನ್ನಿಂಗ್ಸಲ್ಲಿ ಕೇವಲ 118 ರನ್ಗೆ ಆಲೌಟ್ ಆಗಿ 267 ರನ್ ಸೋಲು ಕಂಡಿತ್ತು.
ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಕರ್ನಾಟಕ ನಾಲ್ವರು ದಿಗ್ಗರು ಆಡಿದ್ದರು. ವಿಂಡೀಸ್ ವಿರುದ್ಧ ಸ್ಟಾರ್ ಬ್ಯಾಟರ್ಗಳಾದ ಜಿ.ಆರ್.ವಿಶ್ವನಾಥ್, ಬ್ರಿಜೇಶ್ ಪಟೇಲ್, ತಾರಾ ಸ್ಪಿನ್ನರ್ಗಳಾದ ಇಎಎಸ್ ಪ್ರಸನ್ನ, ಬಿಎಸ್ ಚಂದ್ರಶೇಖರ್ ಮಿಂಚಿದ್ದರು.
ಬೆಂಗಳೂರಿನ ಸ್ಟೇಡಿಯಂ 'ಚಿನ್ನಸ್ವಾಮಿ ಸ್ಟೇಡಿಯಂ' ಎಂದೇ ಪ್ರಖ್ಯಾತಿ ಪಡೆದಿದೆ. ಸಾಕಷ್ಟು ಜನರಿಗೆ ಚಿನ್ನಸ್ವಾಮಿ ಎಂಬ ಹೆಸರು ಸ್ಟೇಡಿಯಂಗೆ ಹೇಗೆ ಬಂತು ಎಂಬುದರ ಬಗ್ಗೆ ತಿಳಿದಿರಲಿಕ್ಕಿಲ್ಲ. ಅಷ್ಟಕ್ಕೂ ಚಿನ್ನಸ್ವಾಮಿ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಬಹುದು. ಅದಕ್ಕೆ ಇಲ್ಲಿದೆ ಉತ್ತರ. ಚಿನ್ನಸ್ವಾಮಿ ಅವರ
ಪೂರ್ಣ ಹೆಸರು ಮಂಗಳಂ ಚಿನ್ನಸ್ವಾಮಿ ಮುದಳಿಯಾರ್. ಅವರು 1900ರಲ್ಲಿ ಮಂಡ್ಯದಲ್ಲಿ ಜನಿಸಿದರು. ವೃತ್ತಿಯಲ್ಲಿ ವಕೀಲರಾಗಿದ್ದ ಅವರು ವೃತ್ತಿಪರ ಕ್ರಿಕೆಟಿಗನಲ್ಲದಿದ್ದರೂ ಕರ್ನಾಟಕದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಹೀಗಾಗಿ ಅವರ ಹೆಸರನ್ನೇ ಸ್ಟೇಡಿಯಂಗೆ ಇಡಲಾಗಿದೆ.