ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡಿದ ಬೆಂಗಳೂರು ಬ್ಲಾಸ್ಟರ್ಸ್ ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಗುಲ್ಬರ್ಗ ಮಿಸ್ಟೆಕ್ಸ್ ತಂಡವನ್ನು 9 ವಿಕೆಟ್ಗಳಿಂದ ಮಣಿಸಿ ಫೈನಲ್ಗೆ ಅರ್ಹತೆ ಪಡೆದಿದೆ.
ಶುಕ್ರವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಲ್ಬರ್ಗ ಮಿಸ್ಟೆಕ್ಸ್ 155 ರನ್ಗಳಿಗೆ ಸರ್ವಪತನ ಕಂಡಿತು. ಸಾಧಾರಣ ಗುರಿಯನ್ನು ಹಿಂಬಾಲಿಸಿದ ಬೆಂಗಳೂರು ಬ್ಲಾಸ್ಟರ್ಸ್ 17.1 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 159 ರನ್ ಸೇರಿಸಿ ಜಯ ಸಾಧಿಸಿತು.

ಗುರಿಯನ್ನು ಬೆನ್ನಟ್ಟಿದ ಬೆಂಗಳೂರು ತಂಡದ ಆರಂಭ ಅಮೋಘವಾಗಿತ್ತು. ನಾಯಕ ಮಯಾಂಕ್ ಅಗರ್ವಾಲ್ ಹಾಗೂ ಎಲ್ಆರ್ಚೇತನ ಜೊತೆಗೂಡಿ ತಂಡಕ್ಕೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿಯನ್ನು ಕಟ್ಟಿ ಹಾಕಲು ಗುಲ್ಬರ್ಗ ವಿಫಲವಾಯಿತು. ಪವರ್ ಪ್ಲೇನ ಸಂಪೂರ್ಣ ಲಾಭ ಪಡೆದ ಬೆಂಗಳೂರು ರನ್ಗಳನ್ನು ಕೊಳ್ಳೆ ಹೊಡೆಯಿತು.
ಆರಂಭಿಕರಿಬ್ಬರು ಅರ್ಧಶತಕ ಬಾರಿಸಿ ಮಿಂಚಿದರು. ಮೊದಲ ವಿಕೆಟ್ಗೆ ಆರಂಭಿಕರು 12.1 ಓವರ್ಗಳಲ್ಲಿ 124 ರನ್ಗಳ ಜೊತೆಯಾಟದ ಕಾಣಿಕೆ ನೀಡಿದರು. ಮಯಾಂಕ್ 31 ಎಸೆತಗಳಲ್ಲಿ 52 ರನ್ ಬಾರಿಸಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು. ಇನ್ನೋರ್ವ ಆರಂಭಿಕ ಆಟಗಾರ ಎಲ್ಆರ್ ಚೇತನ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು 51 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 89 ರನ್ ಸಿಡಿಸಿ ತಂಡದ ಜಯದಲ್ಲಿ ಮಿಂಚಿದರು. ಭುವನ್ ರಾಜ್ ಅಜೇಯ 13 ರನ್ ಬಾರಿಸಿದರು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಗುಲ್ಬರ್ಗ ಮಿಸ್ಟೆಕ್ಸ್ ತಂಡದ ಆರಂಭ ಸಾಧಾರಣವಾಗಿತ್ತು. ನಾಯಕ ದೇವದತ್ ಪಡಿಕ್ಕಲ್ ಹಾಗೂ ಲವನೀತ್ ಸಿಸೋಡಿಯಾ ಜೋಡಿ 2.4 ಓವರ್ಗಳಲ್ಲಿ 33 ರನ್ ಸೇರಿಸಿದರು. 13 ರನ್ ಬಾರಿಸಿ ಮುನ್ನಗುತ್ತಿದ್ದಾಗ ದೇವದತ್ ಔಟ್ ಆದರು.

ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿರುವ ಆರ್ ಸ್ಮರಣ್ ಹಾಗೂ ಬಿಆರ್ ಶರತ್ ಬಂದು ಹೋಗುವ ಸಂಪ್ರದಾಯ ಮುಗಿಸಿದರು. ಮಧ್ಯಮ ಕ್ರಮಾಂಕದಲ್ಲಿ ಕೆವಿ ಅವಿನಾಶ್, ವಿಜಯ್ ಕುಮಾರ್ ವೈಶಾಖ್ ರನ್ ಕಲೆ ಹಾಕುವಲ್ಲಿ ವಿಫಲರಾದರು.
ಗುಲ್ಬರ್ಗ ತಂಡಕ್ಕೆ ಯಾರೊಬ್ಬ ಬ್ಯಾಟ್ಸ್ಮನ್ ಉತ್ತಮ ಕಾಣಿಕೆ ನೀಡಲಿಲ್ಲ. ಮಿಸ್ಟೆಕ್ಸ್ ಪರ ಲವನೀತ್ ಸಿಸೋಡಿಯಾ 20 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಸಹಾಯದಿಂದ 41 ರನ್ ಬಾರಿಸಿ ತಂಡಕ್ಕೆ ಆಧಾರವಾದರು.
ಕೆಳ ಮಧ್ಯಮ ಕ್ರಮಾಂಕದಲ್ಲಿ ಪ್ರವೀಣ್ ದುಬೆ ಉತ್ತಮ ಆಟದ ಪ್ರದರ್ಶನ ನೀಡಿ ತಂಡಕ್ಕೆ ನೆರವಾದರು. ಇವರು 17 ಎಸೆತಗಳಲ್ಲಿ 26 ರನ್ ಬಾರಿಸಿ, ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಗುಲ್ಬರ್ಗ 19.5 ಓವರ್ಗಳಲ್ಲಿ 155 ರನ್ ಸೇರಿಸಿ ಆಲೌಟ್ ಆಯಿತು.
ಬೆಂಗಳೂರು ತಂಡದ ಪರ ಮೋಶಿನ್ ಖಾನ್, ಲವಿಶ್ ಕೌಶಲ್, ಕಾರ್ತಿಕ್ ಕುಮಾರ್, ಶುಭಮನ್ ಹೆಗಡೆ, ತಲಾ ಎರಡು ವಿಕೆಟ್ ಕಬಳಿಸಿದರು.