ಮಹಾರಾಜ ಟ್ರೋಫಿ ಲೀಗ್ ಹಂತದ ಕೊನೆಯ ಘಟ್ಟದತ್ತ ಹೊರಳುತ್ತಿದೆ. ಈ ಬಾರಿಯ ಮಹಾರಾಜ ಟ್ರೋಫಿಯ 25ನೇ ಪಂದ್ಯ ಇಂದು ನಡೆದಿದ್ದು ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಮೈಸೂರು ವಾರಿಯರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಅವರ ಅಮೋಘ ಶತಕದಿಂದಾಗಿ ಬೆಂಗಳೂರು ಬ್ಲಾಸ್ಟರ್ಸ್ ತಂಡ 10 ರನ್ಗಳ ಅಂತರದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ನಡೆಸಿದ ಬೆಂಗಳೂರು ಬ್ಲಾಸ್ಟರ್ಸ್ ತಂಡಕ್ಕೆ ನಾಯಕ ಹಾಗೂ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಆಸರೆಯಾದರು. ಮೊದಲ ವಿಕೆಟನ್ನು ಆರಂಭದಲ್ಲಿಯೇ ಕಳೆದುಕೊಂಡಿದ್ದರೂ ನಿಶ್ಚಲ್, ಶುಭಾಂಗ್ ಹೆಗ್ಡೆ ಹಾಗೂ ಸೂರಜ್ ಅಹುಜಾ ನೆರವಿನೊಂದಿಗೆ ಭರ್ಜರಿ ಇನ್ನಿಂಗ್ಸ್ ಕಟ್ಟಿದರು ಮಯಾಂಕ್ ಅಗರ್ವಾಲ್.

ಈ ಪಂದ್ಯದಲ್ಲಿ ಕೇವಲ 57 ಎಸೆತಗಳನ್ನು ಎದುರಿಸಿ ಮಯಾಂಕ್ 105 ರನ್ಗಳನ್ನು ಗಳಿಸಿ ಔಟಾಗಿದ್ದಾರೆ. ಈ ಸ್ಪೋಟಕ ಇನ್ನಿಂಗ್ಸ್ನಲ್ಲಿ 9 ಬೌಂಡರಿ ಹಾಗೂ 6 ಸಿಕ್ಸರ್ಗಳು ಒಳಗೊಂಡಿತ್ತು. 19ನೇ ಓವರ್ನಲ್ಲಿ ಮಯಾಂಕ್ ಗೌತಮ್ ಮಿಶ್ರಾಗೆ ವಿಕೆಟ್ ಒಪ್ಪಿಸುವ ಮೂಲಕ ತಮ್ಮ ಇನ್ನಿಂಗ್ಸ್ ಅಂತ್ಯಗೊಳಿಸಿದರು. ಇನ್ನು ಬೆಂಗಳೂರು ಬ್ಲಾಸ್ಟರ್ಸ್ 200ರೆ ಗಡಿ ದಾಟಲು ಕಾರಣವಾದ ಮತ್ತೋರ್ವ ಆಟಗಾರನೆಂದರೆ ಸೂರಜ್ ಅಹುಜಾ. ಕೇವಲ 10 ಎಸೆತಗಳಲ್ಲಿ 35 ರನ್ಗಳನ್ನು ಬಾರಿಸಿ ಮಿಂಚಿದರು. ಹೀಗಾಗಿ ಬ್ಲಾಸ್ಟರ್ಸ್ ತಂಡ 212 ರನ್ಗಳನ್ನು ಗಳಿಸಿ ಇನ್ನಿಂಗ್ಸ್ ಮುಗಿಸಿತ್ತು.
ಇನ್ನು ಈ ಮೊತ್ತವನ್ನು ಬೆನ್ನಟ್ಟಿದ ಮೈಸೂರು ವಾರಿಯರ್ಸ್ ಅದ್ಭುತ ಆರಂಭ ಪಡೆಯಿತು. ಮೊದಲ ವಿಕೆಟ್ಗೆ 4.5 ಓವರ್ಗಳಲ್ಲಿ 60 ರನ್ಗಳಿಸುವ ಮೂಲಕ ದಿಟ್ಟವಾಗಿ ರನ್ ಬೆನ್ನಟ್ಟುವತ್ತ ವಾರಿಯರ್ಸ್ ಹೆಜ್ಜೆಯೊಟ್ಟಿತ್ತು. 16 ಎಸೆತಗಳಲ್ಲಿ 35 ರನ್ಗಳಿಸಿದ್ದ ಸಮರ್ಥ್ ವಿಕೆಟ್ ಕಳೆದುಕೊಳ್ಳುವ ಮೂಲಕ ಈ ಜೊತೆಯಾಟ ಅಂತ್ಯವಾಯಿತು. ಆದರೆ ಸು ಕಾರ್ತಿಕ್ ಅವರ ಅಬ್ಬರ ಮುಂದುವರಿದಿತ್ತು. ನಾಯಕ ಕರುಣ್ ನಾಯರ್ ನಿಧಾನಗತಿಯಲ್ಲಿ ಬ್ಯಾಟಿಂಗ್ ನಡೆಸಿದರೂ ದೊಡ್ಡ ಜೊತೆಯಾಟಕ್ಕೆ ಸಾಥ್ ನೀಡಿದ್ದರು.
ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ಮೈಸೂರು ವಾರಿಯರ್ಸ್ ಹಿನ್ನಡೆ ಅನುಭವಿಸಿತು. ಅಂತಿಮವಾಗಿ ನಿಗದಿತ 20 ಓವರ್ಗಳಲ್ಲಿ 202 ರನ್ಗಳನ್ನು ಗಳಿಸಿದ ಮೈಸೂರು ವಾರಿಯರ್ಸ್ ತಂಡ 10 ರನ್ಗಳ ಅಂತರದ ಸೋಲು ಅನುಭವಿಸಿದೆ. ಈ ಮೂಲಕ ಬೆಂಗಳೂರು ಬ್ಲಾಸ್ಟರ್ಸ್ ತಂಡ ಈ ಆವೃತ್ತಿಯಲ್ಲಿ ತನ್ನ 9ನೇ ಪಂದ್ಯದಲ್ಲಿ ಮೊದಲ ಗೆಲುವು ಸಾಧಿಸಿದಂತಾಗಿದೆ. ಮೊದಲ 8 ಪಂದ್ಯಗಳಲ್ಲಿಯೂ ಮಯಾಂಕ್ ಅಗರ್ವಾಲ್ ಪಡೆ ಸತತವಾಗಿ ಸೋಲು ಅನುಭವಿಸಿತ್ತು. ಹೀಗಾಗಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಮೈಸೂರು ವಾರಿಯರ್ಸ್: ರವಿಕುಮಾರ್ ಸಮರ್ಥ್, ಲಂಕೇಶ್ ಕೆಎಸ್, ಕರುಣ್ ನಾಯರ್ (ನಾಯಕ), ಶೋಯೆಬ್ ಮ್ಯಾನೇಜರ್, ಶಿವಕುಮಾರ್ ರಕ್ಷಿತ್ (ವಿಕೆಟ್ ಕೀಪರ್), ಮನೋಜ್ ಭಾಂಡಗೆ, ಜಗದೀಶ ಸುಚಿತ್, ಮುರಳೀಧರ ವೆಂಕಟೇಶ್, ಮೋನಿಶ್ ರೆಡ್ಡಿ, ಶ್ರೀಶ ಆಚಾರ್, ಗೌತಮ್ ಮಿಶ್ರಾ
ಬೆಂಚ್: ತುಷಾರ್ ಸಿಂಗ್, ಭರತ್ ಧುರಿ, ಶಶಿ ಕುಮಾರ್ ಕೆ, ಕೋದಂಡ ಅಜಿತ್ ಕಾರ್ತಿಕ್, ಕುಶಾಲ್ ವಾಧ್ವನಿ, ಆದಿತ್ಯ ಮಣಿ, ರಾಹುಲ್ ರಾವತ್
ಬೆಂಗಳೂರು ಬ್ಲಾಸ್ಟರ್ಸ್: ಮಯಾಂಕ್ ಅಗರ್ವಾಲ್ (ನಾಯಕ), ಇಜೆ ಜಾಸ್ಪರ್, ದೇಗಾ ನಿಶ್ಚಲ್, ಪವನ್ ದೇಶಪಾಂಡೆ, ಸೂರಜ್ ಅಹುಜಾ (WK), ಶುಭಾಂಗ್ ಹೆಗ್ಡೆ, ಮೊಹ್ಸಿನ್ ಖಾನ್, ಸರ್ಫರಾಜ್ ಅಶ್ರಫ್, ಗೌರವ್, ಎಲ್ಆರ್ ಕುಮಾರ್, ಅಮನ್ ಖಾನ್
ಬೆಂಚ್: ಲೋಚನ್ ಅಪ್ಪಣ್ಣ, ರಿಷಿ ಬೋಪಣ್ಣ, ತನಿಶ್ ಮಹೇಶ್, ಆರೋನ್ ಕ್ರಿಸ್ಟಿ, ಭುವನ್ ರಾಜು, ಪ್ರದೀಪ್ ಟಿ, ಜೆಸ್ವಂತ್ ಆಚಾರ್ಯ, ವಿದ್ಯಾಧರ್ ಪಾಟೀಲ್, ಅಭಿಷೇಕ್ ಅಹ್ಲಾವತ್, ಆಶಿಶ್ ಮಹೇಶ್