ಮಹಾರಾಜ ಟ್ರೋಫಿ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮೈಸೂರ್ ವಾರಿಯರ್ಸ್ ಅಮೋಘ ಆಟವನ್ನು ಪ್ರದರ್ಶಿಸಿದೆ. ಗುಲ್ಬರ್ಗಾ ಮಿಸ್ಟಿಕ್ಸ್ ವಿರುದ್ಧ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಮೈಸೂರ್ ವಾರಿಯರ್ಸ್ ತಂಡ ಸೆಮಿಫೈನಲ್ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಫೈನಲ್ಗೆ ಪ್ರವೇಶಿಸಿದೆ.
ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ನಡೆಸಿದ ಮೈಸೂರ್ ವಾರಿಯರ್ಸ್ ತಂಡ ಆರಂಭದಿಂದಲೇ ಸ್ಪೋಟಕ ಆಟವನ್ನು ಪ್ರದರ್ಶಿಸಿದ್ದು ಮೇಲುಗೈ ಸಾಧಿಸಿತ್ತು. ಸು ಕಾರ್ತಿಕ್ ಹಾಗೂ ಸಮರ್ಥ್ ಮೊದಲ ವಿಕೆಟ್ಗೆ ಭರ್ಜರಿ 82 ರನ್ಗಳ ಜೊತೆಯಾಟ ನೀಡಿದ್ದರು. ಈ ಜೋಡಿ ಬೇರ್ಪಟ್ಟ ಬಳಿಕ ಗುಲ್ಬರ್ಗಾ ತಂಡಕ್ಕೆ ಆಘಾತ ನೀಡಿದ್ದು ಕರುಣ್ ನಾಯರ್. ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದ ನಾಯರ್ ಈ ಒಂದೇ ಇನ್ನಿಂಗ್ಸ್ನಲ್ಲಿ ತನ್ನ ವಿರುದ್ಧ ಕೇಳಿಬಂದಿದ್ದ ಎಲ್ಲಾ ಟೀಕೆಗಳಿಗೂ ಉತ್ತರ ನೀಡಿದ್ದಾರೆ.

ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಕರುಣ್ ಕೇವಲ 42 ಎಸೆತಗಳನ್ನು ಎದುರಿಸಿದ್ದು 107 ರನ್ಗಳನ್ನು ಕಲೆಹಾಕಿದರು. ಈ ಇನ್ನಿಂಗ್ಸ್ನಲ್ಲಿ 9 ಸಿಕ್ಸರ್ ಹಾಗೂ 7 ಬೌಂಡರಿ ಸಿಡಿದಿದ್ದವು.ಬರೊಬ್ಬರಿ 254.76ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬಿಸಿದ್ದರು ಅನುಭವಿ ಆಟಗಾರ. ಸಮರ್ಥ್ 50 ಎಸೆತಗಳಲ್ಲಿ 80 ರನ್ಗಳನ್ನು ಕಲೆಹಾಕಿದ್ದರೆ ಮನೋಜ್ ಭಾಂಡಗೆ 5 ಎಸೆತಗಳಲ್ಲಿ 18 ರನ್ ಬಾರಿಸಿ ಮಿಂಚಿದರು. ಹೀಗಾಗಿ ಮೈಸೂರ್ ವಾರಿಯರ್ಸ್ ತಂಡ ನಿಗದಿತ 20 ಓವರ್ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 248 ರನ್ಗಳನ್ನು ಕಲೆಹಾಕಿದೆ.
ಇನ್ನು ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಗುಲ್ಬರ್ಗಾ ಮಿಸ್ಟಿಕ್ಸ್ ತಂಡಕ್ಕೂ ಉತ್ತಮ ಆರಂಭ ದೊರೆಯಿತು. ಆರಂಭಿಕ ಆಟಗಾರರಾದ ಎಲ್ಆರ್ ಚೇತನ್ ಹಾಗೂ ಅನೀಶ್ ಕೆವಿ ಸ್ಪೋಟಕ ಆರಂಭ ನೀಡಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮ್ಯಾಕ್ನಿಲ್ 34 ಎಸೆತಗಳಲ್ಲಿ 61 ರನ್ಗಳ ಕೊಡುಗೆ ನೀಡಿ ಮಿಂಚಿದರು. ಮಧ್ಯಮ ಕ್ರಮಾಂಕದಲ್ಲಿ ಅಬ್ದುಲ್ ಹಸನ್ ಖಾಲಿದ್ ಕೂಡ 54 ರನ್ಗಳನ್ನು ಬಾರಿಸಿದರು. ಆದರೆ ವಾರಿಯರ್ಸ್ ನೀಡಿದ್ದ ಬೃಹತ್ ಗುರಿ ಬೆನ್ನಟ್ಟುವಲ್ಲಿ ಮಿಸ್ಟಿಕ್ಸ್ ವಿಫಲವಾಗಿತ್ತು.
ನಿಗದಿತ 20 ಓವರ್ಗಳಲ್ಲಿ ಮಿಸ್ಟಿಕ್ಸ್ ತಂಡ 8 ವಿಕೆಟ್ ಕಳೆದುಕೊಂಡು 212 ರನ್ಗಳನ್ನು ಮಾತ್ರವೇ ಗಳಿಸಲು ಶಕ್ತವಾಯಿತು. ಹೀಗಾಗಿ ಸೆಮಿಫೈನಲ್ ಪಂದ್ಯದಲ್ಲಿ ಕರುಣ್ ನಾಯರ್ ನೇತೃತ್ವದ ಮೈಸೂರ್ ವಾರಿಯರ್ಸ್ ತಂಡ 36 ರನ್ಗಳ ಬೃಹತ್ ಅಂತರದಿಂದ ಗೆಲುವು ಸಾಧಿಸಿದೆ. ಈ ಮೂಲಕ ಫೈನಲ್ಗೆ ಪ್ರವೇಶ ಪಡೆದುಕೊಂಡಿತು.
ಇನ್ನು ಇದಕ್ಕೂ ಮುನ್ನ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಶಿವಮೊಗ್ಗ ಲಯನ್ ಹಾಗೂ ಹುಬ್ಳಿ ಟೈಗರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಹುಬ್ಳಿ ಟೈಗರ್ಸ್ ತಂಡ 8 ವಿಕೆಟ್ಗಳ ಅಂತರದಿಂದ ಗೆದ್ದುಕೊಂಡಿತ್ತು. ಈ ಮೂಲಕ ಮೊದಲ ತಂಡವಾಗಿ ಫೈನಲ್ಗೆ ಪ್ರವೇಶ ಪಡೆದುಕೊಂಡಿತ್ತು.
ಫೈನಲ್ ಪಂದ್ಯ ಮಂಗಳವಾರ ನಡೆಯಲಿದ್ದು ಹುಬ್ಳಿ ಟೈಗರ್ಸ್ ಹಾಗೂ ಮೈಸೂರ್ ವಾರಿಯರ್ಸ್ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಕಾದಾಟ ನಡೆಸಲಿದೆ.
ಮೈಸೂರ್ ವಾರಿಯರ್ಸ್: ಸು ಕಾರ್ತಿಕ್, ರವಿಕುಮಾರ್ ಸಮರ್ಥ್, ಕರುಣ್ ನಾಯರ್ (ನಾಯಕ), ಲಂಕೇಶ್ ಕೆಎಸ್, ಕೋದಂಡ ಅಜಿತ್ ಕಾರ್ತಿಕ್, ಶಿವಕುಮಾರ್ ರಕ್ಷಿತ್ (ವಾಕ್), ಮನೋಜ್ ಭಾಂಡಗೆ, ಜಗದೀಶ ಸುಚಿತ್, ಮೋನಿಶ್ ರೆಡ್ಡಿ, ಶಶಿಕುಮಾರ್ ಕೆ, ಕುಶಾಲ್ ವಾಧ್ವಾನಿ
ಬೆಂಚ್: ತುಷಾರ್ ಸಿಂಗ್, ಶ್ರೀಶ ಆಚಾರ್, ಮುರಳೀಧರ ವೆಂಕಟೇಶ್, ಗೌತಮ್ ಮಿಶ್ರಾ, ಶೋಯೆಬ್ ಮ್ಯಾನೇಜರ್, ಆದಿತ್ಯ ಮಣಿ, ಭರತ್ ಧುರಿ, ರಾಹುಲ್ ರಾವತ್
ಗುಲ್ಬರ್ಗಾ ಮಿಸ್ಟಿಕ್ಸ್: ಅನೀಶ್ ಕೆವಿ, ಮ್ಯಾಕ್ನೀಲ್ ಹ್ಯಾಡ್ಲಿ ನೊರೊನ್ಹಾ, ಸ್ಮರಣ್ ಆರ್, ಅಮಿತ್ ವರ್ಮಾ, ಶ್ರೀನಿವಾಸ್ ಶರತ್ (ವಿಕೆಟ್ ಕೀಪರ್), ಅಬುಲ್ ಹಸನ್ ಖಾಲಿದ್, ವಿಜಯಕುಮಾರ್ ವೈಶಾಕ್ (ನಾಯಕ), ಅವಿನಾಶ್ ಡಿ, ಶರಣ್ ಗೌಡ್, ಹಾರ್ದಿಕ್ ರಾಜ್, ಅಭಿಲಾಷ್ ಶೆಟ್ಟಿ
ಬೆಂಚ್: ಎಲ್ಆರ್ ಚೇತನ್, ಮೊಹಮ್ಮದ್ ಅಕಿಬ್ ಜವಾದ್, ಯಶೋವರ್ಧನ್ ಪರಂತಪ್, ಶಾನ್ ಜೋಸೆಫ್, ಆದರ್ಶ್ ಪ್ರಜ್ವಲ್, ಕೆಪಿ ಅಪ್ಪಣ್ಣ, ಶಿಮೊನ್ ಲೂಯಿಜ್, ಸೌರಭ್ ಮುತ್ತೂರ್