ನಾಯಕ ವಿಜಯ್ ಕುಮಾರ್ ವೈಶಾಖ್ ಹಾಗೂ ಸ್ಮರಣ್ ರವಿಚಂದ್ರನ್ ಅವರ ಅಮೋಘ ಆಟದ ನೆರವಿನಿಂದ ಗುಲ್ಬರ್ಗ್ ಮಿಸ್ಟೇಕ್ಸ್ ತಂಡ6 ವಿಕೆಟ್ಗಳಿಂದ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಮಣಿಸಿ, ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.
ಟಾಸ್ ಗೆದ್ದ ಗುಲ್ಬರ್ಗ್ ಬೌಲಿಂಗ್ ಮಾಡಲು ಮುಂದಾಯಿತು. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ ಆರಂಭ ಸಾಧಾರಣವಾಗಿತ್ತು. ಆರಂಭಿಕ ಎಲ್ಆರ್ ಚೇತನ್ (19), ಮಯಾಂಕ್ ಅಗರ್ವಾಲ್ (21) ಜೋಡಿ ಮೊದಲ ವಿಕೆಟ್ಗೆ 40 ರನ್ ಜೊತೆಯಾಟದ ಕಾಣಿಕೆ ನೀಡಿತು. ಮಧ್ಯಮ ಕ್ರಮಾಂಕದಲ್ಲಿ ರೋಹನ್ ಪಾಟೀಲ್ (3), ಭುವನ್ ರಾಜ್ (1), ನಾಯಕ ಶುಭಂಗ್ ಹೆಗ್ಡೆ (9), ನವೀನ್ ಎಂಜಿ (7) ರನ್ ಕಲೆ ಜಾಕಿವಲ್ಲಿ ವಿಫಲರಾದರು.

ಗುರಿಯನ್ನು ಬೆನ್ನಟ್ಟಿದ ಗುಲ್ಬರ್ಗ್ ಮಿಸ್ಟೇಕ್ಸ್ ತಂಡದ ಪರ ಲುವನಿತ್ ಸಿಸೋಡಿಯಾ (16), ನಿಕಿನ್ ಜೋಸ್ (16), ಪ್ರಜ್ವಲ್ ಪವನ್ (10), ಕೃಷ್ಣಮೂರ್ತಿ ಸಿದ್ಧಾರ್ಥ್ (5) ರನ್ ಕಲೆ ಹಾಕುವಲ್ಲಿ ವಿಫಲರಾದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಸ್ಮರಣ್ ರವಿಚಂದ್ರನ್ 52 ಎಸೆತಗಳಲ್ಲಿ 8 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಅಜೇಯ 89 ರನ್ ಸಿಡಿಸಿದರು. ಪ್ರವೀಣ್ ದುಬೆ ಅಜೇಯ 29 ರನ್ ಕಲೆ ಹಾಕಿ ಗೆಲುವಿನಲ್ಲಿ ಮಿಂಚಿದರು.

ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಮೈಸೂರು ವಾರಿಯರ್ಸ್ ತಂಡ ಮೊದಲು ಬ್ಯಾಟ್ ಮಾಡಿತು. ಮೈಸೂರು ತಂಡದ ಪರ ಎಂ ವೆಂಕಟೇಶ್ (15), ಹರ್ಷೀಲ್ (20), ಶ್ರೀನಿವಾಸ್ ಶರತ್ (27) ರನ್ ಕಲೆ ಹಾಕಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಇನ್ನು ಆರಂಭಿಕ ಎಸ್ಯು ಕಾರ್ತಿಕ್ 2 ಬೌಂಡರಿ, 5 ಸಿಕ್ಸರ್ ಸಹಾಯದಿಂದ 53 ರನ್ ಸಿಡಿಸಿದರು. ಅಂತಿಮವಾಗಿ ಮೈಸೂರು 20 ಓವರ್ಗಳಲ್ಲಿ 8 ವಿಕೆಟ್ಗೆ 129 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಹುಬ್ಬಳ್ಳಿ ಟೈಗರ್ಸ್ ತಂಡದ ನಾಯಕ ದೇವದತ್ ಪಡಿಕ್ಕಲ್ 5 ಬೌಂಡರಿ, 3 ಸಿಕ್ಸರ್ ಸಹಾಯದಿಂದ 44 ರನ್ ಸಿಡಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಕಾರ್ತಿಕೇಯ್ ಕೆಪಿ 7 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 52 ರನ್ ಸಿಡಿಸಿ ಜಯದಲ್ಲಿ ಮಿಂಚಿದರು. ಅಂತಿಮವಾಗಿ ಹುಬ್ಬಳ್ಳಿ 14.2 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 132 ರನ್ ಕಲೆ ಹಾಕಿತು. ಈ ಮೂಲಕ ಹುಬ್ಬಳ್ಳಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಬಡ್ತಿ ಪಡೆದಿದೆ.