ಭರವಸೆಯ ಬೌಲರ್ ಮಾಧವ್ ಪ್ರಕಾಶ್ (12ಕ್ಕೆ 4) ಹಾಗೂ ರೋಹನ್ ಪಾಟೀಲ್ (ಅಜೇಯ 74) ಇವರುಗಳ ಭರ್ಜರಿ ಆಟದ ಪ್ರದರ್ಶನದಿಂದ ಬೆಂಗಳೂರು ಬ್ಲಾಸ್ಟರ್ಸ್ ಮಹಾರಾಜ್ ಟ್ರೋಫಿ 20 ಟೂರ್ನಿಯಲ್ಲಿ 7 ವಿಕೆಟ್ಗಳಿಂದ ಶಿವಮೊಗ್ಗ ಲಯನ್ಸ್ ತಂಡವನ್ನು ಮಣಿಸಿತು. ಬೆಂಗಳೂರು ಬ್ಲಾಸ್ಟರ್ಸ್ ತಂಡ ಆಡಿದ 8 ಪಂದ್ಯಗಳಲ್ಲಿ 5 ಜಯ, 3 ಸೋಲು ಕಂಡಿದ್ದು, 10 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಶಿವಮೊಗ್ಗ ಲಯನ್ಸ್ ತಂಡದ ಮೇಲ್ಪಂಕ್ತಿಯ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು. ಧ್ರುವ್ ಪ್ರಭಾಕರ್ (0), ನಿಹಾಲ್ ಉಲ್ಲಾಳ (14), ಸಂಜಯ್ ಅಶ್ವಿನ್ (1), ರನ್ ಕಲೆ ಹಾಕುವಲ್ಲಿ ವಿಫಲರಾದರು. ಉಳಿದಂತೆ ಅನಿರುದ್ಧ ಜೋಶಿ (19), ಹಾರ್ದಿಕ್ ರಾಜ್ (13), ಅವಿನಾಶ್ ಡಿ (12), ಧ್ರುವಿ (ಅಜೇಯ 18) ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಸಫಲರಾದರು. ಮಧ್ಯಮ ಕ್ರಮಾಂಕದಲ್ಲಿ 4 ಬೌಂಡರಿ ನೆರವಿನಿಂದ 23 ರನ್ ಸಿಡಿಸಿದರು. ಅಂತಿಮವಾಗಿ 20 ಓವರ್ಗಳಲ್ಲಿ 9 ವಿಕೆಟ್ಗೆ 111 ರನ್ ಗಳಿಸಿತು. ಬೆಂಗಳೂರು ತಂಡ ಮಾಧವ್ ಪ್ರಕಾರ್ 12 ರನ್ ನೀಡಿ 4 ವಿಕೆಟ್ ಪಡೆದರು. ನವೀನ್ ಎಂಜಿ 30 ರನ್ ನೀಡಿ 3 ವಿಕೆಟ್ ಕಬಳಿಸಿದರು.

ಗುರಿಯನ್ನು ಬೆನ್ನಟ್ಟಿದ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಆರಂಭಿಕರಾದ ಎಲ್ಆರ್ ಚೇತನ್, ಮಯಾಂಕ್ ಅಗರ್ವಾಲ್ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ಮೂರನೇ ವಿಕೆಟ್ಗೆ ರೋಹನ್ ಪಾಟೀಲ್ ಹಾಗೂ ಭುವನ್ ರಾಜ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಭುವನ್ ರಾಜ್ 14 ರನ್ ಬಾರಿಸಿ ಔಟ್ ಆದರು. ಸುರಜ್ ಅಹೋಜ್ (ಅಜೇಯ 20) ತಂಡದ ಗೆಲುವಿನಲ್ಲಿ ಮಿಂಚಿದರು.
ರೋಹನ್ ಪಾಟೀಲ್ 7 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 74 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಅಂತಿಮವಾಗಿ ಬೆಂಗಳೂರು 14.4 ಓವರ್ಗಳಲಲಿ 3 ವಿಕೆಟ್ ನಷ್ಟಕ್ಕೆ 117 ರನ್ ಕಲೆ ಹಾಕಿ ಜಯ ಸಾಧಿಸಿತು.

ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಮೈದಾನದಲ್ಲಿ ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಮಂಗಳೂರು ಡ್ರ್ಯಾಗನ್ಸ್ ತಂಡ 52 ರನ್ಗಳ ಭರ್ಜರಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮಂಗಳೂರು ತಂಡದ ಲೋಚನ್ ಗೌಡ (34), ಶರತ್ ಬಿಆರ್ (25), ಮ್ಯಾಕ್ನೀಲ್ ನೊರೊನ್ಹಾ (31), ನಾಯಕ ಶ್ರೇಯಸ್ ಗೋಪಾಲ್ (29), ಎಸ ಶಿವರಾಜ್ (27) ರನ್ ಕಲೆ ಹಾಕಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಮಂಗಳೂರು 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 173 ರನ್ ಸೇರಿಸಿತು. ಗುರಿಯನ್ನು ಬೆನ್ನಟ್ಟಿದ ಮೈಸೂರು ವಾರಿಯರ್ಸ್ ತಂಡದ ಬ್ಯಾಟರ್ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಸಿಯು ಕಾರ್ತಿಕ್ (34), ಮನೀಷ್ ಪಾಂಡೆ (12)ಮ, ಲೋಕೆಶ್ ಕೆಎಸ್ (11), ಯಶೋವರ್ಧನ್ ಪ್ರತಾಪ್ (28), ಶ್ರೀನಿವಾಸ್ ಶರತ್ (14) ರನ್ ಕಲೆ ಹಾಕಿದರೂ ಸಹ ತಂಡಕ್ಕೆ ಗೆಲುವಿನ ಮಾಲೆ ತೊಡಿಸುವಲ್ಲಿ ವಿಫಲರಾದರು.