Maharaja Trophy T20: ಶಿವಮೊಗ್ಗ ವಿರುದ್ಧ ಅಬ್ಬರಿಸಿದ ವಾರಿಯರ್ಸ್
ಬೆಂಗಳೂರು: ನಾಯಕ ವೈಶಾಖ್ ವಿಜಯ್ಕುಮಾರ್ ಅವರ ಬಿಗುವಿನ ದಾಳಿಯ ನೆರವಿನಿಂದ ಮೈಸೂರು ವಾರಿಯರ್ಸ್ ತಂಡ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಆರು ವಿಕೆಟ್ಗಳಿಂದ ಶಿವಮೊಗ್ಗ ಯೋಧಾಸ್ ತಂಡವನ್ನು ಮಣಿಸಿ ಅಬ್ಬರಿಸಿದೆ. ಅಲ್ಲದೆ ಟೂರ್ನಿಯ ನಾಕೌಟ್ ಹಂತಕ್ಕೆ ಲಗ್ಗೆ ಇಟ್ಟಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಮೈಸೂರು ತಂಡದ ಬೌಲರ್ಗಳು ಆರ್ಭಟಿಸಿದರು. ಇವರ ಕರಾರುವಾಕ್ ದಾಳಿಗೆ ಶಿವಮೊಗ್ಗ ತಂಡ ಕೇವಲ 10.5 ಓವರ್ಗಳಲ್ಲಿ 66 ರನ್ಗಳಿಗೆ ಆಲೌಟ್ ಆಯಿತು. ಬಳಿಕ ಸುಲಭದ ಗುರಿಯನ್ನು 10 ಓವರ್ಗಳಲ್ಲಿ ಬೆನ್ನಟ್ಟಿದ ಮೈಸೂರು ತಂಡ, ನಾಲ್ಕರ ಘಟ್ಟಕ್ಕೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು.

ಮೈಸೂರು ತಂಡದ ಅರ್ಬಿಂದ್ ಕುಮಾರ್ ರೈ ಭರ್ಜರಿ ಸ್ವಿಂಗ್ ಬೌಲಿಂಗ್ ಮೂಲಕ ಶಿವಮೊಗ್ಗದ ಪ್ರಮುಖ ಬ್ಯಾಟರ್ಗಳಾದ ಲವ್ನೀತ್ ಸಿಸೋಡಿಯಾ (12), ಹರ್ಷಿಲ್ ಧರ್ಮಾನಿ (8) ಮತ್ತು ಸುಜಯ್ ಸಾತೇರಿ (0) ಅವರ ವಿಕೆಟ್ ಪಡೆದು ಬೀಗಿದರು. ಇವರ ಬಿಗುವಿನ ದಾಳಿಯ ಪರಿಣಾಮ ಶಿವಮೊಗ್ಗ 7ನೇ ಓವರ್ನಲ್ಲಿ 57 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಶಿವಮೊಗ್ಗ ತಂಡಕ್ಕೆ ಮತ್ತೆ ಪೆಟ್ಟು ನೀಡಿದ್ದು ಮೈಸೂರು ತಂಡದ ನಾಯಕ ವೈಶಾಖ್ ವಿಜಯ್ಕುಮಾರ್. ಇವರು ಕೇವಲ 1.5 ಓವರ್ ಬೌಲಿಂಗ್ ಮಾಡಿ 1 ರನ್ ನೀಡಿ 3 ವಿಕೆಟ್ ಕಬಳಿಸಿದರು.
67 ರನ್ಗಳ ಸುಲಭ ಗುರಿ ಬೆನ್ನಟ್ಟಿದ ಮೈಸೂರು ವಾರಿಯರ್ಸ್ 4 ವಿಕೆಟ್ ಕಳೆದುಕೊಂಡರೂ, ಎಲ್.ಆರ್. ಚೇತನ್ (60) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಮೈಸೂರು 60 ಎಸೆತಗಳು ಬಾಕಿ ಇರುವಂತೆಯೇ ಸುಲಭ ಜಯ ದಾಖಲಿಸಿತು.
ಈ ಗೆಲುವಿನೊಂದಿಗೆ ಮೈಸೂರು ವಾರಿಯರ್ಸ್ ತಂಡ 10 ಪಂದ್ಯಗಳಿಂದ ಒಟ್ಟು 9 ಅಂಕಗಳನ್ನು ಗಳಿಸಿ ನಾಲ್ಕನೇ ಹಾಗೂ ಕೊನೆಯ ನಾಕೌಟ್ ತಂಡವಾಗಿ ಅರ್ಹತೆ ಪಡೆಯಿತು. ಈ ಪಂದ್ಯದಲ್ಲಿ ಸೋತರೂ ಶಿವಮೊಗ್ಗ ಯೋಧಾಸ್ ಅಂಕ ಪಟ್ಟಿಯಲ್ಲಿ 10 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಬೆಂಗಳೂರು ಬ್ಲಾಸ್ಟರ್ಸ್ ತಂಡ 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.
ಮಂಗಳೂರುಗೆ ಜಯ
ಬುಧವಾರ ನಡೆದ ಇನ್ನೊಂದು ಪಂದ್ಯದಲ್ಲಿ ಕೋಸ್ಟಲ್ ಕಿಂಗ್ಸ್ ಮಂಗಳೂರು 3 ರನ್ಗಳಿಂದ ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧ ಜಯ ಸಾಧಿಸಿತು. ಮಂಗಳೂರು ತಂಡದ ಪರ ಸ್ಟಾರ್ ಆಟಗಾರ ಕರುಣ್ ನಾಯರ್ 65 ರನ್ ಬಾರಿಸಿದರೆ, ಪ್ರಜ್ವಲ್ ಪವನ್ 35 ರನ್ ಸಿಡಿಸಿದರು. ಅಂತಿಮವಾಗಿ ಮಂಗಳೂರು ತಂಡ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 169 ರನ್ ಕಲೆ ಹಾಕಿತು. ಗುರಿಯನ್ನು ಬೆನ್ನಟ್ಟಿದ ಗುಲ್ಬರ್ಗ 20 ಓವರ್ಗಳಲ್ಲಿ 7 ವಿಕೆಟ್ಗೆ 166 ರನ್ ಸೇರಿಸಿ ಸೋಲು ಕಂಡಿತು. ಈ ಗೆಲುವಿನೊಂದಿಗೆ ಮಂಗಳೂರು ಆಡಿರುವ 10 ಪಂದ್ಯಗಳಲ್ಲಿ 11 ಅಂಕ ಕಲೆ ಹಾಕಿ ಎರಡನೇ ಸ್ಥಾನದೊಂದಿಗೆ ಮುಂದಿನ ಹಂತ ಪ್ರವೇಶಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications