ಮಹಾರಾಜ್ ಟ್ರೋಫಿ ಕ್ರಿಕೆಟ್ ಟೂರ್ನಿ ಮುಗಿದಿದೆ. ಈ ಟುರ್ನಿಯಲ್ಲಿ ಆಡುವ ಅವಕಾಶವನ್ನು ಪಡೆದ ಭರವಸೆಯ ಆಟಗಾರರು ತಂಡದ ಗೆಲುವಿನಲ್ಲಿ ತಮ್ಮದೇ ಆದ ಕಾಣಿಕೆ ನೀಡಿದ್ದಾರೆ. ಇದೇ ವೇಳೆ ಮುಂಬರುವ ಐಪಿಎಲ್ ಮಿನಿ ಹರಾಜಿನಲ್ಲಿ ಮಾಲೀಕರ ಚಿತ್ತವನ್ನು ಕದ್ದಿರುವ ಭರವಸೆಯ ಆಟಗಾರರು, ದೊಡ್ಡ ವೇದಿಕೆಯಲ್ಲಿ ಮಿಂಚಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಹಾಗಿದ್ದರೆ ಮಹಾರಾಜ ಟ್ರೋಫಿಯಲ್ಲಿ ಮಿಂಚಿ ಐಪಿಎಲ್ ವೇದಿಕೆ ಏರುವ ಕನಸು ಕಾಣುತ್ತಿರುವ ಟಾಪ್ 5 ಪ್ಲೇಯರ್ಸ್ ಬಗ್ಗೆ ವರದಿ ಇಲ್ಲಿದೆ.
ಮಹಾರಾಜ ಟ್ರೋಫಿ ಟಿ20 ಪಂದ್ಯದಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ದೇವದತ್ ಪಡಿಕ್ಕಲ್ಗೆ ಅಗ್ರ ಸ್ಥಾನ. ಇವರು ಆಡಿದ 12 ಪಂದ್ಯಗಳಲ್ಲಿ 40ರ ಸರಾಸರಿಯಲ್ಲಿ 449 ರನ್ ಸಿಡಿಸಿದ್ದಾರೆ. ಇವರು ಈಗಾಗಲೇ ಆರ್ಸಿಬಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಇರುವ ಎರಡನೇ ಆಟಗಾರ ಸ್ಮರಣ್ ರವಿಚಂದ್ರನ್. ಈ ಸ್ಟಾರ್ ಪ್ಲೇಯರ್ಗೆ ಈಗಾಗಲೇ ಐಪಿಎಲ್ನಲ್ಲಿ ಚಾನ್ಸ್ ಸಿಕ್ಕಿದೆ. ಕಳೆದ ಬಾರಿ ಸನ್ರೈಸರ್ಸ್ ಹೈದರಾಬಾದ್ ತಂಡದ ಆಡಂ ಜಂಪಾ ಗಾಯಕ್ಕೆ ತುತ್ತಾಗಿ ಟೂರ್ನಿಯಿಂದ ಹೊರ ನಡೆದಾಗ, ಸ್ಮರಣ್ ಅವರನ್ನು ಎಸ್ಆರ್ಎಚ್ ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಂಡಿತು. ಆದರೆ ಇನ್ನು ಇವರಿಗೆ ಅವಕಾಶ ಲಭಿಸಿಲ್ಲ. ಇವರು ಈ ಬಾರಿ ಮೊದಲ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಸ್ಮರಣ್ ಮಹಾರಾಜ ಟೂರ್ನಿಯಲ್ಲಿ 69ರ ಸರಾಸರಿಯಲ್ಲಿ 415 ರನ್ ಸಿಡಿಸಿದ್ದಾರೆ.

ಮಹಾರಾಜ ಟಿ20 ಟೂರ್ನಿಯಲ್ಲಿ ಮಂಗಳೂರು ಡ್ರ್ಯಾಗನ್ಸ್ ಪರ ಆಡಿರುವ ಶರತ್ ಬಿಆರ್ ಸಹ ಐಪಿಎಲ್ ಫ್ರಾಂಚೈಸಿ ಗಮನ ಸೆಳೆದ ಪ್ಲೇಯರ್. ಇವರು ಆಡಿದ 12 ಪಂದ್ಯಗಳಲ್ಲಿ 35ರ ಸರಾಸರಿಲ್ಲಿ 392 ರನ್ ಬಾರಿಸಿದ್ದಾರೆ. ಈ ಮೂಲಕ ಇವರು ದೊಡ್ಡ ವೇದಿಕೆಯಲ್ಲಿ ಮಿಂಚಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇನ್ನು ಹುಬ್ಬಳ್ಳಿ ಟೈಗರ್ಸ್ ಪರ ಆರಂಭಿಕರಾಗಿ ಕಣಕ್ಕೆ ಇಳಿಯುವ ಮೊಹಮ್ಮದ್ ತಹಾ ಸಹ ಐಪಿಎಲ್ ಆಡಲು ಕಾತುರರಾಗಿದ್ದಾರೆ. ಇವರು ಕಳೆದ ಆವೃತ್ತಿ ಸೇರಿದಂತೆ ಈ ಆವೃತ್ತಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಆರಂಭದಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಬಾರಿಸಿ ತಂಡಕ್ಕೆ ನೆರವಾಗಿದ್ದರು.
ಮಂಗಳೂರು ತಂಡ ಈ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವ ಪ್ರಮುಖ ಪಾತ್ರವನ್ನು ನಿರ್ವಹಿಸಿದ ಆಟಗಾರರ ಪಟ್ಟಿಯಲ್ಲಿ ಕ್ರಾಂತಿ ಕುಮಾರ್ ಅವರಿಗೂ ಸ್ಥಾನ. ಇವರು ಸಹ ಐಪಿಎಲ್ ಆಡವ ಕನಸು ಕಾಣುತ್ತಿದ್ದಾರೆ. 31 ವರ್ಷದ ಕ್ರಾಂತಿ ಮಹಾರಾಜ ಟ್ರೋಫಿಯಲ್ಲಿ ಆಡಿದ 12 ಪಂದ್ಯಗಳಲ್ಲಿ 26 ವಿಕೆಟ್ ಕಬಳಿಸಿದ್ದಾರೆ. ಇನ್ನು ಹುಬ್ಬಳ್ಳಿ ಟೈಗರ್ಸ್ ತಂಡದ ಭರವಸೆಯ ಬೌಲರ್ ಯಶ್ ರಾಜ್ ಸಹ ಐಪಿಎಲ್ನಲ್ಲಿ ತಮ್ಮ ಬಿಗುವಿನ ದಾಳಿ ನಡೆಸುವ ಇರಾದೆ ಹೊಂದಿದ್ದಾರೆ. ಇವರು ಆಡಿರುವ 10 ಪಂದ್ಯಗಳಲ್ಲಿ 23 ವಿಕೆಟ್ ಕಬಳಿಸಿದ್ದಾರೆ. ಈ ಸ್ಟಾರ್ ಪ್ಲೇಯರ್ಗಳು ಈ ಬಾರಿಯ ಐಪಿಎಲ್ ಮಿನಿ ಹರಾಜಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ಯಾವ ತಂಡ ಇವರಿಗೆ ಮಣೆ ಹಾಕುತ್ತದೆ ಕಾದು ನೋಡಬೇಕಿದೆ.