ಭಾರತ ವಿರುದ್ಧ ಎರಡನೇ ಟಿ20 ಪಂದ್ಯಕ್ಕೂ ಮುನ್ನ ಬಾಂಗ್ಲಾದೇಶ ತಂಡಕ್ಕೆ ಹಿನ್ನಡೆಯಾಗಿದೆ. ಬಾಂಗ್ಲಾದೇಶ ತಂಡದ ಅನುಭವಿ ಆಟಗಾರ ಮಹಮ್ಮದುಲ್ಲಾ ಮಂಗಳವಾರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಮಹಮ್ಮದುಲ್ಲಾ ಅವರು 3 ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತರಾಗಿದ್ದರು. ಈಗ ಅವರು ಚುಟುಕು ಕ್ರಿಕೆಟ್ನಿಂದ ದೂರ ಸರಿದಿದ್ದಾರೆ.
ಭಾರತದಲ್ಲಿ ಬಾಂಗ್ಲಾದೇಶದ ಪ್ರಸ್ತುತ ಟಿ20 ಸರಣಿಯು ಮಹಮ್ಮದುಲ್ಲಾ ಅವರ ಕೊನೆಯ ಅಂತರರಾಷ್ಟ್ರೀಯ ಸರಣಿಯಾಗಿದೆ. ನವದೆಹಲಿಯಲ್ಲಿ ಬುಧವಾರ ನಡೆಯಲಿರುವ ಎರಡನೇ ಟಿ20 ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಹಮ್ಮದುಲ್ಲಾ ತಮ್ಮ ನಿವೃತ್ತಿ ಬಗ್ಗೆ ಮಾಹಿತಿ ನೀಡಿದ್ದಾರೆ. ಬಾಂಗ್ಲಾದೇಶ ಪರ ಅತಿ ಹೆಚ್ಚು ಟಿ20 ಪಂದ್ಯಗಳನ್ನು ಆಡಿರುವ ಅವರು ತಮ್ಮ ತಂಡದೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಆಲ್ರೌಂಡರ್ ಮಹಮ್ಮದುಲ್ಲಾ, 'ಭಾರತಕ್ಕೆ ಬರುವ ಮುನ್ನ ನನ್ನ ನಿರ್ಧಾರದ ಬಗ್ಗೆ ಮಂಡಳಿಗೆ ತಿಳಿಸಿದ್ದೆ. ಹೈದರಾಬಾದ್ನಲ್ಲಿ ನಡೆಯಲಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೂರನೇ ಟಿ20 ಪಂದ್ಯವು ನನ್ನ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿದೆ ಎಂದಿದ್ದಾರೆ.
ಮಹಮ್ಮದುಲ್ಲಾ ಬಾಂಗ್ಲಾದೇಶ ಪರ ಇದುವರೆಗೆ 139 ಟಿ20 ಪಂದ್ಯಗಳನ್ನು ಆಡಿದ್ದು, 2394 ರನ್ ಹಾಗೂ 40 ವಿಕೆಟ್ ಪಡೆದಿದ್ದಾರೆ. ಬಾಂಗ್ಲಾದೇಶದ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಟಿ20 ಕ್ರಿಕೆಟಿಗ ಮಾತ್ರವಲ್ಲದೆ, ಟಿ20 ಕ್ರಿಕೆಟ್ನಲ್ಲಿ ತಂಡವನ್ನು ಅತಿ ಹೆಚ್ಚು ಪಂದ್ಯಗಳಲ್ಲಿ ಮುನ್ನಡೆಸಿದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2007ರಲ್ಲಿ ಕೀನ್ಯಾ ವಿರುದ್ಧ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಮಹಮುದುಲ್ಲಾ 43 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದಾರೆ. ಈ ಪೈಕಿ ಬಾಂಗ್ಲಾದೇಶ 16 ಪಂದ್ಯಗಳನ್ನು ಗೆದ್ದಿದೆ.
2021ರ ಟಿ20 ವಿಶ್ವಕಪ್ನಲ್ಲಿ ಬಾಂಗ್ಲಾದೇಶ ತಂಡದ ನಾಯಕರಾಗಿದ್ದ ಮಹಮ್ಮದುಲ್ಲಾ ಇದೀಗ ತಮ್ಮ 17 ವರ್ಷಗಳ ಟಿ20 ವೃತ್ತಿಜೀವನವನ್ನು ಅಕ್ಟೋಬರ್ 12 ರಂದು ಕೊನೆಗೊಳಿಸಲಿದ್ದಾರೆ. ಪ್ರಸ್ತುತ ಟಿ20 ಸರಣಿಯನ್ನು ನೋಡುವುದಾದರೆ, ಗ್ವಾಲಿಯರ್ನಲ್ಲಿ ನಡೆದ ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ತಂಡವು ಮುನ್ನಡೆ ಸಾಧಿಸಿದೆ.
ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಟೀಮ್ ಇಂಡಿಯಾ ಏಳು ವಿಕೆಟ್ಗಳಿಂದ ಸೋಲಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 19.5 ಓವರ್ಗಳಲ್ಲಿ 127 ರನ್ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ 49 ಎಸೆತಗಳು ಬಾಕಿ ಇರುವಂತೆಯೇ ಗೆದ್ದು ಬೀಗಿತ್ತು.
ಅಕ್ಟೋಬರ್ 9 ರಂದು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟಿ20 ಪಂದ್ಯ ನಡೆಯಲಿದೆ. ಉಭಯ ತಂಡಗಳು ಗೆಲುವಿಗೆ ರಣತಂತ್ರ ರೂಪಿಸುತ್ತಿವೆ. ಭಾರತ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದ್ದರೆ, ಬಾಂಗ್ಲಾದೇಶ ಎರಡನೇ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಜೀವಂತವಾಗಿರಲು ಹವಣಿಸುತ್ತಿದೆ.