ದುಲೀಪ್ ಟ್ರೋಫಿಯಲ್ಲಿ ಭಾರತದ ಯುವ ಆಟಗಾರರ ಅಮೋಘ ಪ್ರದರ್ಶನ ಕಾಣುತ್ತಿದೆ. ಭಾರತ ಎ ವಿರುದ್ಧ ಭಾರತ ಬಿ ನಡುವೆ ನಡೆದ ಪಂದ್ಯದಲ್ಲಿ ಮುಶೀರ್ ಖಾನ್ 181 ರನ್ಗಳ ಇನಿಂಗ್ಸ್ ಆಡಿದರೆ, ಇನ್ನೊಂದು ಪಂದ್ಯದಲ್ಲಿ ಮಾನವ್ ಸುತಾರ್ ಇಂಡಿಯಾ ಸಿ ಆರಂಭಿಕ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ.
ಮಾನವ್ ಶನಿವಾರ ಭಾರತ ಡಿ ವಿರುದ್ಧ ಏಳು ವಿಕೆಟ್ ಪಡೆದು ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ದುಲೀಪ್ ಟ್ರೋಫಿಯಲ್ಲಿ ಚೊಚ್ಚಲ ಪಂದ್ಯವಾಡುತ್ತಿರುವಾಗ ಮಾನವ್ ಒಂದೇ ಇನ್ನಿಂಗ್ಸ್ನಲ್ಲಿ 7 ವಿಕೆಟ್ ಕಬಳಿಸಿದ ಸಾಧನೆ ಗೈದಿದ್ದಾರೆ. ಇದು ದುಲೀಪ್ ಟ್ರೋಫಿ ಚೊಚ್ಚಲ ಪಂದ್ಯದ ಅತ್ಯುತ್ತಮ ಪ್ರದರ್ಶನವಾಗಿದೆ.

ಈ ದಾಖಲೆಯೊಂದಿಗೆ ಮಾನವ್ ತಮಿಳುನಾಡಿನ ಸ್ಪಿನ್ನರ್ ಆರ್ ಸಾಯಿ ಕಿಶೋರ್ ಅವರನ್ನು ಹಿಂದಿಕ್ಕಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ ಕೆಟ್ಟ ಆರಂಭದ ಹೊರತಾಗಿಯೂ, ಅವರು ಎರಡನೇ ಇನ್ನಿಂಗ್ಸ್ನಲ್ಲಿ ಏಳು ವಿಕೆಟ್ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪರಿಸ್ಥಿಗೆ ಅನುಗುಣವಾಗಿ ಬೌಲಿಂಗ್ ಮಾಡಿದ ಅವರು ಭಾರತ ಡಿ ಬ್ಯಾಟರ್ಗಳಿಗೆ ಪೆವಿಲಿಯನ್ ದಾರಿ ತೋರಿಸಿದ್ದಾರೆ.
ಮೊದಲ ಇನಿಂಗ್ಸ್ನಲ್ಲಿ ಮಾನವ್ ಕೇವಲ ಒಂದು ವಿಕೆಟ್ ಪಡೆದಿದ್ದರು. ಬಳಿಕ ಎರಡನೇ ಇನ್ನಿಂಗ್ಸ್ನಲ್ಲಿ ಪುನರಾಗಮನ ಮಾಡಿ ಮಿಂಚಿದರು. ಮುಂದಿನ ಪಂದ್ಯದಲ್ಲೂ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ಮುಂದುವರಿಸುವ ನಿರೀಕ್ಷೆಯಿದೆ.
ಭಾರತ ಬಿ ವಿರುದ್ಧ ಭಾರತ ಸಿ ತನ್ನ ಎರಡನೇ ಪಂದ್ಯವನ್ನು ಅನಂತಪುರದಲ್ಲಿ ಆಡಲಿದ್ದು, ಈ ಪಿಚ್ ಕೂಡ ಸ್ಪಿನ್ನರ್ಗಳಿಗೆ ಅನುಕೂಲಕರವಾಗಿದೆ. ಹೀಗಾಗಿ ಎಲ್ಲರ ಕಣ್ಣು ಮಾನವ್ ಸುತಾರ್ ಮೇಲಿದೆ. ಅಲ್ಲದೆ ಮುಂಬರುವ ಬಾಂಗ್ಲಾದೇಶ ಟೆಸ್ಟ್ ಸರಣಿಗೂ ಆಯ್ಕೆಯಾಗುವ ಸಾಧ್ಯತೆಯಿದೆ.