ಭರವಸೆಯ ಆಟಗಾರರಾದ ಅನೀಶ್ ಕೆವಿ ಹಾಗೂ ಮ್ಯಾಕ್ನೀಲ್ ನೊರೊನ್ಹಾ ಬಾರಿಸಿದ ಅರ್ಧಶತಕ ಹಾಗೂ ಕ್ರಾಂತಿ ಕುಮಾರ್ ಅವರ ಅಮೋಘ ದಾಳಿಯ ನೆರವಿನಿಂದ ಮಂಗಳೂರು ಡ್ರ್ಯಾಗನ್ಸ್ 16 ರನ್ಗಳಿಂದ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಮಣಿಸಿ, ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ.
ಮೈಸೂರಿನ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಮೈದಾನದಲ್ಲಿ ನಡೆಯುತ್ತಿರುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯ 10ನೇ ಪಂದ್ಯದಲ್ಲಿ ಟಾಸ್ ಗೆದ್ದ ಹುಬ್ಬಳ್ಳಿ ಟೈಗರ್ಸ್ ತಂಡ ಮೊದಲು ಬೌಲಿಂಗ್ ಮಾಡುವ ನಿರ್ಧಾರವನ್ನು ಮಾಡಿತು. ಮಂಗಳೂರು ತಂಡದ ಆರಂಭಿಕರು ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ಲೋಚನ್ ಗೌಡ್, ಶರತ್ ಬಿಆರ್ ಸಿಂಗಲ್ ಡಿಜಿಟ್ನಲ್ಲಿ ಆಟ ಮುಗಿಸಿದರು. 3ನೇ ವಿಕೆಟ್ಗೆ ಅನೀಶ್ ಕೆವಿ ಹಾಗೂ ಮ್ಯಾಕ್ನೀಲ್ ಜೋಡಿ ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು.

ಮಂಗಳೂರು ತಂಡದ ಮೊತ್ತವನ್ನು ಹಿಗ್ಗಸುವಲ್ಲಿ ಅನೀಶ್ ಕೆವಿ ಹಾಗೂ ಮ್ಯಾಕ್ನೀಲ್ ಜೋಡಿ ಸಫಲವಾಯಿತು. ಈ ಜೋಡಿ ಮೂರನೇ ವಿಕೆಟ್ಗೆ ಶತಕದ ಜತೆಯಾಟದ ಕಾಣಿಕೆ ನೀಡಿತು. ಅನೀಶ್ ಕೆವಿ 4 ಬೌಂಡರಿ, 4 ಸಿಕ್ಸರ್ ಸಹಾಯದಿಂದ 62 ರನ್ ಬಾರಿಸಿದರೆ, ಮ್ಯಾಕ್ನೀಲ್ 4 ಬೌಂಡರಿ, 3 ಸಿಕ್ಸರ್ ನೆರವಿನಿಂದ 56 ರನ್ ಸಿಡಿಸಿತು. ಆದರ್ಶ್ ಪ್ರಜ್ವಲ್ (19), ಎಸ್ ಶಿವರಾಜ್ (ಅಜೇಯ 16) ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಮಂಗಳೂರು 20 ಓವರ್ಗಳಲ್ಲಿ 5 ವಿಕೆಟ್ಗೆ 195 ರನ್ ಸೇರಿಸಿತು.
ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಹುಬ್ಬಳ್ಳಿ ತಂಡದ ಆರಂಭಿಕ ಮೊಹಮ್ಮದ್ ತಹಾ ಸೊನ್ನೆ ಸುತ್ತಿದರು. ಎರಡನೇ ವಿಕೆಟ್ಗೆ ಪ್ರಖರ್ ಚರ್ತುವೇದಿ ಹಾಗೂ ದೇವದತ್ ಪಡಿಕ್ಕಲ್ ಜೋಡಿ ಅರ್ಧಶತಕದ ಕಾಣಿಕೆ ನೀಡಿತು. ಈ ವೇಳೆ ಪ್ರಖರ್ 2 ಬೌಂಡರಿ, 4 ಸಿಕ್ಸರ್ ಸಹಾಯದಿಂದ 37 ರನ್ ಬಾರಿಸಿದ್ದಾಗ ಔಟ್ ಆದರು. ದೇವದತ್ ಪಡಿಕ್ಕಲ್ ತಮ್ಮ ನೈಜ್ಯ ಆಟವನ್ನು ಆಡಿ 40 ಎಸೆತಗಳಲ್ಲಿ 60 ರನ್ ಸಿಡಿಸಿದರು. ವಿಕೆಟ್ ಕೀಪರ್ ಶಿವಕುಮಾರ್ ರಕ್ಷಿತ್ (28),ಮನ್ವತ್ ಕುಮಾರ್ (16), ಅಭಿನವ್ ಮನೋಹರ್ (28) ಕೊಂಚ ಎದುರಾಳಿ ಬೌಲರ್ಗಳನ್ನು ಕಾಡಿದರು. ಹುಬ್ಬಳ್ಳಿ 20 ಓವರ್ಗಳಲ್ಲಿ 9 ವಿಕೆಟ್ಗೆ 179 ರನ್ ಕಲೆ ಹಾಕಿ ಸೋಲು ಕಂಡಿತು.
ಮಂಗಳೂರು ತಂಡದ ಪರ ಕ್ರಾಂತಿ ಕುಮಾರ್ 4, ಶ್ರೀವತ್ಸ್ ಆಚಾರ್ಯ ಹಾಗೂ ಶ್ರೇಯಸ್ ಗೋಪಾಲ್ ತಲಾ 2 ವಿಕೆಟ್ ಪಡೆದರು.

ಮಳೆ ಬಾಧಿತ ಮೊದಲ ಪಂದ್ಯವನ್ನು 6 ಓವರ್ಗಳಿಗೆ ಇಳಿಸಲಾಗಿತ್ತು. ಈ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಮೊದಲು ಬ್ಯಾಟ್ ಮಾಡಿದ ಶಿವಮೊಗ್ಗ ಲಯನ್ಸ್ 6 ಓವರ್ಗಳಲ್ಲಿ 6 ವಿಕೆಟ್ಗೆ 62 ರನ್ ಸೇರಿಸಿತು. ಈ ವೇಳೆ ನಿಹಾಲ್ ಉಲ್ಲಾಳ 3 ಬೌಂಡರಿ, 3 ಸಿಕ್ಸರ್ ಸಹಾಯದಿಂದ 31 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಬೆಂಗಳೂರು ತಂಡದ ಪರ ಶುಭಾಂಗ್ ಹೆಗ್ಡೆ 3, ಮೊಹ್ಸಿನ್ ಖಾನ್ 2 ವಿಕೆಟ್ ಕಬಳಿಸಿದರು. 63 ರನ್ ಗಳ ಗುರಿಯನ್ನು ಬೆನ್ನಟ್ಟಿದ ಬೆಂಗಳೂರು ತಂಡದ ಪರ ಎಲ್ಆರ್ ಚೇತನ್ 16, ರೋಹನ್ ಪಾಟೀಲ್ 12, ಮಯಾಂಕ್ ಅಗರ್ವಾಲ್ ಅಜೇಯ 18, ಶುಭಾಂಗ್ ಹೆಗ್ಡೆ ಅಜೇಯ 14 ರನ್ ಸಿಡಿಸಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು.