ಭರವಸೆಯ ಆಟಗಾರ ಲೋಚನ್ ಗೌಡ್ ಹಾಗೂ ಶರತ್ ಬಿಆರ್ ಅವರ ಭರ್ಜರಿ ಜೊತೆಯಾಟದ ನೆರವಿನಿಂದ ಮಂಗಳೂರು ಡ್ರ್ಯಾಗನ್ಸ್ ಮಹಾರಾಜ್ ಟ್ರೋಫಿ ಟಿ20 ಟೂರ್ನಿಯಲ್ಲಿ 7 ವಿಕೆಟ್ಗಳಿಂದ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಮಣಿಸಿ, ಪ್ರಸಕ್ತ ಟೂರ್ನಿಯ ಫೈನಲ್ಗೆ ಪ್ರವೇಶ ಪಡೆದಿದೆ.
ಮೈಸೂರಿನ ಶ್ರೀಕಂಠದತ್ತ ನರಸಿಂಹ ರಾಜ್ ಒಡೆಯರ ಮೈದಾನದಲ್ಲಿ ಬುಧವಾರ ನಡೆದ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಮಂಗಳೂರು ತಂಡ ಮೊದಲು ಬೌಲಿಂಗ್ ಮಾಡುವ ನಿರ್ಧಾರವನ್ನು ಮಾಡಿತು. ಮೊದಲು ಬ್ಯಾಟ್ ಮಾಡಿದ ಬೆಂಗಳೂರು ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಎಲ್ಆರ್ ಚೇತನ್ (9), ನಾಯಕ ಮಯಾಂಕ್ ಅಗರ್ವಾಲ್ ರನ್ ಕಲೆ ಹಾಕುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ಶುಭಂ ಹೆಗ್ಡೆ (1), ಕಾರ್ತಿಕ್ ಕೃಷ್ಣ (0) ರನ್ ಕಲೆ ಹಾಕುವಲ್ಲಿ ವಿಫಲರಾದರು. ಸೂರಜ್ ಅಹುಜಾ (16) ಮಾತ್ರ ಡಬಲ್ ಡಿಜಿಟ್ ಮುಟ್ಟಿದರು.

ಮೂರನೇ ಕ್ರಮಾಂಕದಲ್ಲಿ ರೋಹನ್ ಪಾಟೀಲ್ 52 ಎಸೆತಗಳಲ್ಲಿ 7 ಬೌಂಡರಿ, 6 ಸಿಕ್ಸರ್ ಸಹಾಯದಿಂದ ಅಜೇಯ 86 ರನ್ ಸಿಡಿಸಿದರು. ಅಂತಿಮವಾಗಿ ಬೆಂಗಳೂರು ತಂಡ 19.4 ಓವರ್ಗಳಲ್ಲಿ 152 ರನ್ಗಳಿಗೆ ಆಲೌಟ್ ಆಯಿತು. ಮಂಗಳೂರು ತಂಡದ ಪರ ಶ್ರೇಯಸ್ ಗೋಪಾಲ್ 3 ವಿಕೆಟ್ ಪಡೆದರು. ಉಳಿದಂತೆ ಅಭಿಲಾಶ್ ಶೆಟ್ಟಿ 2 ವಿಕೆಟ್ ಕಬಳಿಸಿದರು.
ಗುರಿಯನ್ನು ಬೆನ್ನಟ್ಟಿದ ಮಂಗಳೂರು ಡ್ರ್ಯಾಗನ್ಸ್ ತಂಡದ ಆರಂಭ ಭರ್ಜರಿಯಾಗಿತ್ತು. ಲೋಚನ್ ಗೌಡ್ ಹಾಗೂ ಶರತ್ ಬಿಆರ್ ಜೋಡಿ ಮೊದಲ ವಿಕೆಟ್ಗೆ 6.5 ಓವರ್ಗಳಲ್ಲಿ 63 ರನ್ಗಳ ಜೊತೆಯಾಟದ ಕಾಣಿಕೆ ನೀಡಿತು. ಆರಂಭಿಕ ಶರತ್ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ 43 ರನ್ ಸಿಡಿಸಿ ಔಟ್ ಆದರು. ಪಲ್ಲವ್ ಕುಮಾರ್ 23, ಮ್ಯಾಕ್ನೀಲ್ ಹ್ಯಾಡ್ಲಿ ನೊರೊನ್ಹಾ 24 ರನ್ ಸಿಡಿಸಿದರು. ಆರಂಭಿಕ ಲೋಚನ್ ಗೌಡ್ 51 ಎಸೆತಗಳಲ್ಲಿ 1 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 62 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಮಿಂಚಿದರು. ಅಂತಿಮವಾಗಿ ಮಂಗಳೂರು 19.1 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 157 ರನ್ ಸೇರಿಸಿ ಜಯ ಸಾಧಿಸಿತು.
ಇಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಹುಬ್ಬಳ್ಳಿ ಟೈಗರ್ಸ್ ಹಾಗೂ ಮಂಗಳೂರು ಡ್ರ್ಯಾಗನ್ಸ್ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಮಂಗಳೂರು ಡ್ರ್ಯಾಗನ್ಸ್ ಆಡಿದ 10 ಪಂದ್ಯಗಳಲ್ಲಿ 7 ಜಯ ಸಾಧಿಸಿದ್ದು, 15 ಅಂಕಗಳೊಂದಿಗೆ ಅಗ್ರ ಸ್ಥಾನ ಪಡೆದುಕೊಂಡಿದೆ. ಇನ್ನು ಹುಬ್ಬಳ್ಳಿ ಟೈಗರ್ಸ್ 10 ಪಂದ್ಯಗಳಲ್ಲಿ 7 ಜಯ ಸಾಧಿಸಿದ್ದು, 14 ಅಂಕ ಕಲೆ ಹಾಕಿದೆ.
ಗುಲ್ಬರ್ಗ್ ಮಿಸ್ಟೇಕ್ಸ್, 2022
ಹುಬ್ಬಳ್ಳಿ ಟೈಗರ್ಸ್, 2023
ಮೈಸೂರು ವಾರಿಯರ್ಸ್, 2024