ಭರವಸೆಯ ಬ್ಯಾಟರ್ಗಳಾದ ಅಭಿನವ್ ಮನೋಹರ್ ಹಾಗೂ ರೋಹನ್ ನವೀನ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಮಹಾರಾಜ್ ಟ್ರೋಫಿ ಟಿ20 ಟೂರ್ನಿಯಲ್ಲಿ ಶಿವಮೊಗ್ಗ ಲಯನ್ಸ್ 6 ವಿಕೆಟ್ಗಳಿಂದ ಗುಲ್ಬರ್ಗ್ ಮಿಸ್ಟಿಕ್ಸ್ ತಂಡವನ್ನು ಮಣಿಸಿ, ಟೂರ್ನಿಯಲ್ಲಿ ಮೂರನೇ ಜಯವನ್ನು ದಾಖಲಿಸಿತು.
ಐಪಿಎಲ್ನಲ್ಲಿ ಆಡಿದ ಆನುಭವ ಹೊಂದಿರುವ ಅಭಿನವ್ ಮನೋಹರ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರ ಬಿರುಸಿನ ಆಟಕ್ಕೆ ಗುಲ್ಬರ್ಗ್ ಬೌಲರ್ಗಳು ಕಂಗಾಲಾದರು. ಅಭಿನವ್ ಅವರ ಮನಮೋಹಕ ಆಟ ನೆರೆದ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣಬಡಿಸಿತು. ತಮ್ಮ ನೈಜ ಶೈಲಿಯಲ್ಲಿ ಬ್ಯಾಟ್ ಮಾಡಿದ ಅಭಿನವ್ ಶಿವಮೊಗ್ಗ ಜಯದಲ್ಲಿ ಮಿಂಚಿದರು.

ಒಂದು ಹಂತದಲ್ಲಿ 133 ರನ್ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ರೋಹನ್ ನವೀನ್ ಹಾಗೂ ಅಭಿನವ್ ಮನೋಹರ್ ಆಧಾರವಾದರು. ಈ ಜೋಡಿ ವಿಕೆಟ್ಗಳನ್ನು ಬೀಳದಂತೆ ನೋಡಿಕೊಂಡು, ರನ್ ವೇಗಕ್ಕೆ ಚುರುಕು ಮುಟ್ಟಿಸಿತು. ಅಭಿನವ್ ಅವರಿಗೆ ನವೀನ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ತಂಡಕ್ಕೆ ಅಗತ್ಯವಿದ್ದ ರನ್ಗಳನ್ನು ಕಲೆ ಹಾಕಿ ಮಿಂಚಿತು.
ಅಭಿನವ್ ಮನೋಹರ್ ಪ್ರಸಕ್ತ ಋತುವಿನಲ್ಲಿ ಭರ್ಜರಿ ಫಾರ್ಮ್ನಲ್ಲಿದ್ದು, ಇವರ ಆಟಕ್ಕೆ ಬ್ರೇಕ್ ಹಾಕಲು ಗುಲ್ಬರ್ಗ ವಿಫಲವಾಯಿತು. ಇವರ ಬಿರುಸಿನ ಆಟದ ಪ್ರಭಾವ ಸವಾಲಿನ ಗುರಿಯನ್ನು ಲಯನ್ಸ್ ಸುಲಭವಾಗಿ ಮುಟ್ಟಿತು. ಅಭಿನವ್ 34 ಎಸೆತಗಳಲ್ಲಿ 2 ಬೌಂಡರಿ, 9 ಸಿಕ್ಸರ್ ಸಹಾಯದಿಂದ ಅಜೇಯ 76 ರನ್ ಸಿಡಿಸಿ ಆರ್ಭಟಿಸಿದರು.
ರೋಹನ್ ನವೀನ್ ಕೇವಲ 14 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 36 ರನ್ ಸಿಡಿಸಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು. ಅಂತಿಮವಾಗಿ ಶಿವಮೊಗ್ಗ 19.1 ಓವರ್ಗಳಲ್ಲಿ ಸವಾಲಿನ 207 ರನ್ಗಳ ಗುರಿಯನ್ನು 4 ವಿಕೆಟ್ ಕಳೆದುಕೊಂಡು ಮುಟ್ಟಿತ್ತು.
ಇದಕ್ಕು ಮೊದಲು ಬ್ಯಾಟ್ ಮಾಡಿದ ಗುಲ್ಬರ್ಗ್ ಮಿಸ್ಟೆಕ್ಸ್ ಆರಂಭ ಕಳಪೆ ಆಗಿತ್ತು. ಎರಡನೇ ವಿಕೆಟ್ಗೆ ದೇವದತ್ ಪಡಿಕ್ಕಲ್, ಸೌರಭ್ ಮುತ್ತೂರು 75 ರನ್ಗಳ ಜೊತೆಯಾಟದ ಕಾಣಿಕೆ ನೀಡಿದರು. ದೇವದತ್ 50 ರನ್ಗಳಿಗೆ ಆಟ ಮುಗಿಸಿದರು.
ಗುಲ್ಬರ್ಗ್ ತಂಡಕ್ಕೆ ಆರ್ ಸ್ಮರಣ್ ಆಸರೆಯಾದರು. ಇವರು ಪ್ರಸಕ್ತ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಇವರು 30 ಎಸೆತಗಳಲ್ಲಿ 1 ಬೌಂಡರಿ, 7 ಸಿಕ್ಸರ್ ಸಹಾಯದಿಂದ 63 ರನ್ ಸಿಡಿಸಿದರು. ವಿಜಯ್ ಕುಮಾರ್ ವೈಶಾಖ್ 38, ಪ್ರವೀಣ್ ದುಬೆ 24 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಗುಲ್ಬರ್ಗ 20 ಓವರ್ಗಳಲ್ಲಿ 5 ವಿಕೆಟ್ಗೆ 206 ರನ್ ಸೇರಿಸಿತು.
ಮಂಗಳವಾರ ನಡೆದ ಎರಡನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ 20 ಓವರ್ಗಳಲ್ಲಿ 6 ವಿಕೆಟ್ಗೆ 191 ರನ್ಗಳನ್ನು ಸೇರಿಸಿತು. ಮೈಸೂರು ತಂಡದ ಪರ ನಾಯಕ ಕರುಣ್ ನಾಯರ್ ಅಮೋಘ ಬ್ಯಾಟಿಂಗ್ ನಡೆಸಿತು. ಕರುಣ್ 48 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಅಜೇಯ 80 ರನ್ ಬಾರಿಸಿ ಸಿಡಿಸಿದರು. ಇದಕ್ಕೆ ಉತ್ತರವಾಗಿ ಬ್ಯಾಟ್ ಮಾಡಿದ ಹುಬ್ಬಳ್ಳಿ ಟೈಗರ್ಸ್ 18.4 ಓವರ್ಗಳಲ್ಲಿ 117 ರನ್ಗಳಿಗೆ ಆಲೌಟ್ ಆಯಿತು. ಮೈಸೂರು ತಂಡ ಈ ಟೂರ್ನಿಯಲ್ಲಿ 5ನೇ ಜಯ ಸಾಧಿಸಿತು.