ಟೀಮ್ ಇಂಡಿಯಾ ಕಳಪೆ ಪ್ರದರ್ಶನಕ್ಕೆ ಹೆಡ್ ಕೋಚ್ ಗೌತಮ್ ಗಂಭೀರ್ ಹೊಣೆಯಾಗುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಸೋಲಿನ ಗೌತಮ್ ಗಂಭೀರ್ ಟೀಕೆಗಳನ್ನು ಎದುರಿಸುವಂತಾಗಿದೆ. ಇದೀಗ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಮನೋಜ್ ತಿವಾರಿ ಅವರು ಗೌತಮ್ ಗಂಭೀರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗೌತಮ್ ಗಂಭೀರ್ ನಿರೀಕ್ಷಿತ ರೀತಿಯ ಕೋಚಿಂಗ್ ತೋರಿಲ್ಲ. ಬೌಲಿಂಗ್ ಕೋಚ್ ಮೋರ್ನೆ ಮೊರ್ಕೆಲ್ ಮತ್ತು ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರ ನೇಮಕ ಸರಿಯಿಲ್ಲ ಎಂದು ಮನೋಜ್ ತಿವಾರಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಗೌತಮ್ ಗಂಭೀರ್ ಅವರ ಕೋಚಿಂಗ್ನಲ್ಲಿ ಟೀಮ್ ಇಂಡಿಯಾ ಶ್ರೀಲಂಕಾದಲ್ಲಿ ನಡೆದ ಏಕದಿನ ಸರಣಿಯನ್ನು 0-2 ಅಂತರದಿಂದ ಕಳೆದುಕೊಂಡಿತು ನಂತರ ನ್ಯೂಜಿಲೆಂಡ್ ವಿರುದ್ಧದ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ 0-3 ಅಂತರದಿಂದ ಸೋಲನ್ನು ಎದುರಿಸಿತ್ತು. ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲೂ ಭಾರತ 1-3 ಅಂತರದಲ್ಲಿ ಸೋಲು ಕಂಡಿದೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಮನೋಜ್ ತಿವಾರಿ, 'ಗೌತಮ್ ಒಬ್ಬ ಗಂಭೀರ ಕಪಟಿ. ಅವನು ಹೇಳಿದಂತೆ ಮಾಡುವುದಿಲ್ಲ. ನಾಯಕ ರೋಹಿತ್ ಶರ್ಮಾ ಎಲ್ಲಿಂದ ಬಂದವರು? ಮುಂಬೈ. ಅಭಿಷೇಕ್ ನಾಯರ್ ಎಲ್ಲಿಂದ ಬಂದವರು? ಮುಂಬೈ. ಮುಂಬೈ ಆಟಗಾರರನ್ನು ಮುಂದೆ ತರುವ ಅವಕಾಶ ಸಿಕ್ಕಿತ್ತು. ಜಲಜ್ ಸಕ್ಸೇನಾ ಪರ ಮಾತನಾಡಲು ಯಾರೂ ಇಲ್ಲ. ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ, ಆದರೆ ಮೌನವಾಗಿರುತ್ತಾರೆ ಎಂದು ಹೇಳಿದ್ದಾರೆ.
ಇದೇ ವೇಳೆ ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಬಗ್ಗೆ ಕೂಡ ಮನೋಜ್ ತಿವಾರಿ ಮಾತನಾಡಿದ್ದಾರೆ. 'ಬೌಲಿಂಗ್ ಕೋಚ್ನಿಂದ ಏನು ಪ್ರಯೋಜನ? ಕೋಚ್ ಏನೇ ಹೇಳಿದರೂ ಒಪ್ಪುತ್ತಾರೆ. ಮೋರ್ನೆ ಮೊರ್ಕೆಲ್ ಲಕ್ನೋ ಸೂಪರ್ ಜೈಂಟ್ಸ್ನಿಂದ ಬಂದರು. ಕೋಲ್ಕತ್ತಾ ನೈಟ್ ರೈಡರ್ಸ್ನಲ್ಲಿ ಅಭಿಷೇಕ್ ನಾಯರ್ ಗಂಭೀರ್ ಜೊತೆಗಿದ್ದರು. ಅವರ ಸೂಚನೆಗಳಿಗೆ ವಿರುದ್ಧವಾಗಿ ಹೋಗುವುದಿಲ್ಲ ಎಂದು ಟೀಮ್ ಇಂಡಿಯಾ ಹೆಡ್ ಕೋಚ್ಗೆ ತಿಳಿದಿದೆ ಎಂದು ತಿಳಿಸಿದ್ದಾರೆ.
ಗಂಭೀರ್ ಮತ್ತು ರೋಹಿತ್ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬುದ ಬಗ್ಗೆ ಮನೋಜ್ ತಿವಾರಿ ಪ್ರತಿಕ್ರಿಯಿಸಿ, ಗಂಭೀರ್ ಮತ್ತು ರೋಹಿತ್ ಹೇಗೆ ಒಟ್ಟಿಗೆ ಕೆಲಸ ಮಾಡುತ್ತಾರೆ?. ರೋಹಿತ್ ವಿಶ್ವಕಪ್ ವಿಜೇತ ನಾಯಕನಾಗಿದ್ದರೆ, ಗಂಭೀರ್ ಕೆಕೆಆರ್ ತಂಡವನ್ನು ಐಪಿಎಲ್ ಪ್ರಶಸ್ತಿಗೆ ನಾಯಕ ಮತ್ತು ಮಾರ್ಗದರ್ಶಕರಾಗಿ ಮುನ್ನಡೆಸಿದ್ದಾರೆ. ಗಂಭೀರ್ ಏಕಾಂಗಿಯಾಗಿ ಕೆಕೆಆರ್ ತಂಡವನ್ನು ಪ್ರಶಸ್ತಿಗೆ ಕೊಂಡೊಯ್ಯಲಿಲ್ಲ. ಏಕೆಂದರೆ ನಾವೆಲ್ಲರೂ ಒಂದು ತಂಡವಾಗಿ ಆಡಿದ್ದೇವೆ. ಜಾಕ್ವೆಸ್ ಕಾಲಿಸ್, ಸುನಿಲ್ ನರೈನ್ ಮತ್ತು ನಾನು ಎಲ್ಲರೂ ಇದಕ್ಕೆ ಕೊಡುಗೆ ನೀಡಿದ್ದೇವೆ. ಆದರೆ ಕ್ರೆಡಿಟ್ ತೆಗೆದುಕೊಂಡವರು ಯಾರು? ಎಲ್ಲಾ ಕ್ರೆಡಿಟ್ ತೆಗೆದುಕೊಳ್ಳಲು ಅವಕಾಶ ನೀಡುವ ಸಮಾಜವಿದೆ ಎಂದು ಬೇಸರ ಹೊರಹಾಕಿದ್ದಾರೆ.
ನವದೆಹಲಿಯ ಫಿರೋಜ್ಶಾ ಕೋಟ್ಲಾ ಸ್ಟೇಡಿಯಂನಲ್ಲಿ ನಡೆದ 2015ರ ರಣಜಿ ಟ್ರೋಫಿ ಪಂದ್ಯದ ವೇಳೆ ಗೌತಮ್ ಗಂಭೀರ್ ಆಗಿನ ಬಂಗಾಳದ ನಾಯಕ ಮನೋಜ್ ತಿವಾರಿ ಅವರೊಂದಿಗೆ ಜಗಳವಾಡಿದ್ದರು. ಗೌತಮ್ ಗಂಭೀರ್ ಸ್ಲಿಪ್ಸ್ನಲ್ಲಿ ನಿಂತು ಬ್ಯಾಟರ್ ಮನೋಜ್ ತಿವಾರಿ ಅವರನ್ನು ನಿಂದಿಸಲು ಪ್ರಾರಂಭಿಸಿದ್ದರು. ಮನೋಜ್ ತಿವಾರಿಗೆ, 'ನಾನು ಸಂಜೆ ನಿಮ್ಮನ್ನು ಭೇಟಿಯಾಗಿ ಕೊಲ್ಲುತ್ತೇನೆ ಎಂದು ಗೌತಮ್ ಗಂಭೀರ್ ಬೆದರಿಕೆ ಹಾಕಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮನೋಜ್ ತಿವಾರಿ, 'ಸಂಜೆ ಏನು? ಈಗಲೇ ಹೊರಗೆ ಬಾ.' ಎಂದಿದ್ದರು. ಈ ವೇಳೆ ತಿವಾರಿ ಮತ್ತು ಗಂಭೀರ್ ನಡುವೆ ತೀವ್ರ ವಾಗ್ವಾದ ನಡೆದಿತ್ತು.
ಇದಾದ ಬಳಿಕ ಗಂಭೀರ್ಗೆ ಪಂದ್ಯ ಶುಲ್ಕದ ಶೇ.50ರಷ್ಟು ದಂಡ ವಿಧಿಸಲಾಗಿತ್ತು.