ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಮನೋಜ್ ತಿವಾರಿ ಇದೀಗ ಮಾಜಿ ನಾಯಕ ಎಂಎಸ್ ಧೋನಿಯನ್ನು ತಮ್ಮ ಟೀಕೆಯ ವಲಯಕ್ಕೆ ಸೆಳೆದುಕೊಂಡಿದ್ದಾರೆ. ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಪಕ್ಷಪಾತಿ ಎಂದು ಮನೋಜ್ ತಿವಾರಿ ಆರೋಪಿಸಿದ್ದಾರೆ. ಟೀಮ್ ಇಂಡಿಯಾ ಪರ ಅದ್ಭುತ ಪ್ರದರ್ಶನ ನೀಡಿದ್ದರೂ, ನನ್ನನ್ನು ತಂಡದಿಂದ ಹೊರಗಿಡಲಾಯಿತು ಎಂದು ಆಕ್ರೋಶ ಹೊರ ಹಾಕಿದ್ದಾರೆ.
2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಶತಕ ಗಳಿಸಿದ್ದರೂ, 14 ಪಂದ್ಯಗಳಿಗೆ ನನ್ನನ್ನು ಕೈಬಿಡಲಾಯಿತು. ಆದರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಸುರೇಶ್ ರೈನಾ ಅವರಂತಹ ಆಟಗಾರರು ತಮ್ಮ ಕಳಪೆ ಫಾರ್ಮ್ನ ಹೊರತಾಗಿಯೂ ಪ್ಲೇಯಿಂಗ್ ಹನ್ನೊಂದರಲ್ಲಿ ಉಳಿದರು ಎಂಬುದು ಧೋನಿಯಿಂದಾಗಿ ಎಂದು ಮನೋಜ್ ತಿವಾರಿ ಬಹಿರಂಗಪಡಿಸಿದ್ದಾರೆ.

ಟೀಮ್ ಇಂಡಿಯಾದಲ್ಲಿ ನಾಯಕನ ನಿರ್ಧಾರದಂತೆ ಎಲ್ಲವೂ ನಡೆಯುತ್ತದೆ ಎಂದು ಮನೋಜ್ ತಿವಾರಿ ಹೇಳಿದ್ದಾರೆ. ಟೀಮ್ ಇಂಡಿಯಾ ನಾಯಕನ ಯೋಜನೆಯನ್ನು ಅನುಸರಿಸುತ್ತಿದೆ. ರಾಜ್ಯ ತಂಡಗಳಲ್ಲಿ ವಿಷಯಗಳು ವಿಭಿನ್ನವಾಗಿವೆ. ಆದರೆ ಟೀಮ್ ಇಂಡಿಯಾದಲ್ಲಿ ಎಲ್ಲವೂ ನಾಯಕನ ನಿರ್ಧಾರದಂತೆ ನಡೆಯುತ್ತದೆ. ನೀವು ನೋಡಿದರೆ, ಕಪಿಲ್ ದೇವ್ ಕಾಲದಲ್ಲಿ ಅವರು ತಂಡವನ್ನು ನಡೆಸುತ್ತಿದ್ದರು. ಸುನಿಲ್ ಗವಾಸ್ಕರ್ ಕಾಲದಲ್ಲಿ ಅವರ ನಿರ್ಧಾರ ಮಾತ್ರ ತೆಗೆದುಕೊಳ್ಳಲಾಗಿದೆ. ಮೊಹಮ್ಮದ್ ಅಜರುದ್ದೀನ್ ಅವರ ಕಾಲದಲ್ಲೂ ಇದೇ ನಡೆದಿದೆ. ಆ ನಂತರ ಬಂದಂತಹ ನಾಯಕರೂ ಮಾಡಿದ್ದಾರೆ. ಹೀಗಾಗಿ ಕಟ್ಟುನಿಟ್ಟಾದ ಆಡಳಿತಗಾರ ಬಂದು ಕಟ್ಟುನಿಟ್ಟಾದ ನಿಯಮಗಳನ್ನು ಮಾಡುವವರೆಗೆ ಇದು ಮುಂದುವರಿಯುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ, ಸುರೇಶ್ ರೈನಾ ಮತ್ತು ರೋಹಿತ್ ಶರ್ಮಾ ಅವರಂತಹ ಆಟಗಾರರು ಇದ್ದರು. ಆ ನಂತರ ನಡೆದ ಪ್ರವಾಸದಲ್ಲಿ ಅವರು ರನ್ ಗಳಿಸಲಿಲ್ಲ. ಇಲ್ಲಿ ಶತಕ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ನಂತರವೂ ನಾನು ಆಡುವ ಹನ್ನೊಂದರೊಳಗೆ ಬರಲು ಸಾಧ್ಯವಾಗಲಿಲ್ಲ. ಆರು ತಿಂಗಳ ಅವಧಿಯಲ್ಲಿ ನಡೆದ 14 ಪಂದ್ಯಗಳಿಗೆ ನನ್ನನ್ನು ಕೈಬಿಡಲಾಯಿತು. ಆ ವೇಳೆ ಕೈಬಿಡಲಾದ ಆಟಗಾರನಿಗೆ ಸಾಕಷ್ಟು ಅಭ್ಯಾಸ ಸಿಗಲಿಲ್ಲ. ನಾನು ನಿವೃತ್ತಿ ಹೊಂದಲು ಬಯಸಿದ್ದೆ, ಆದರೆ ಕುಟುಂಬದ ಜವಾಬ್ದಾರಿಗಳಿಂದ ಅದು ಸಾಧ್ಯವಾಗಲಿಲ್ಲ. ಮನೋಜ್ ತಿವಾರಿ ಪ್ರಸ್ತುತ ಬಂಗಾಳದ ಟಿಎಂಸಿ ಸರ್ಕಾರದಲ್ಲಿ ಕ್ರೀಡೆ ಮತ್ತು ಯುವ ವ್ಯವಹಾರಗಳ ರಾಜ್ಯ ಸಚಿವರಾಗಿದ್ದಾರೆ.