ಏನು ನೋಡಿ ಈತನಿಗೆ ಟೀಮ್ ಇಂಡಿಯಾ ನಾಯಕತ್ವ ನೀಡಿದ್ದೀರ ಎಂದು ಕಿಡಿಕಾರಿದ ಭಾರತದ ಹಾಲಿ ಕ್ರಿಕೆಟಿಗ!

ಕಳೆದ ವರ್ಷ ನಡೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ನಂತರ ನಾಯಕತ್ವದ ವಿಚಾರವಾಗಿ ಕ್ರಿಕೆಟ್ ಜಗತ್ತಿನಲ್ಲಿ ಟೀಮ್ ಇಂಡಿಯಾ ಚರ್ಚೆ ಮತ್ತು ಟೀಕೆಗಳಿಗೆ ಒಳಗಾದಷ್ಟು ವಿಶ್ವದ ಬೇರೆ ಯಾವುದೇ ಕ್ರಿಕೆಟ್ ತಂಡ ಕೂಡ ಒಳಗಾಗಲಿಲ್ಲ ಎಂದರೆ ತಪ್ಪಾಗಲಾರದು. ಹೌದು, ಕಳೆದ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ಬೆನ್ನಲ್ಲೇ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವಕ್ಕೆ ರಾಜೀನಾಮೆಯನ್ನು ಸಲ್ಲಿಸಿದ ವಿರಾಟ್ ಕೊಹ್ಲಿ ತಮ್ಮ ಅಭಿಮಾನಿಗಳು ಸೇರಿದಂತೆ ಹಲವಾರು ಕ್ರಿಕೆಟ್ ಪ್ರೇಕ್ಷಕರನ್ನು ಆಶ್ಚರ್ಯಕ್ಕೆ ತಳ್ಳಿದ್ದರು. ಹಲವಾರು ಮಂದಿ ವಿರಾಟ್ ಕೊಹ್ಲಿ ಇಷ್ಟು ಬೇಗ ನಾಯಕತ್ವವನ್ನು ತ್ಯಜಿಸಿರುವ ಪ್ರಮೇಯವಾದರೂ ಏನಿತ್ತು ಎಂದು ಬೇಸರವನ್ನೂ ವ್ಯಕ್ತಪಡಿಸಿದ್ದರು. ಹೀಗೆ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವ ತ್ಯಜಿಸಿದ ವಿರಾಟ್ ಕೊಹ್ಲಿ ನಂತರ ಭಾರತ ಏಕದಿನ ತಂಡದ ನಾಯಕತ್ವವನ್ನು ಕೂಡ ಕಳೆದುಕೊಂಡರು.
ವಿರಾಟ್ ಕೊಹ್ಲಿ ಭಾರತ ಟಿ ಟ್ವೆಂಟಿ ಮತ್ತು ಏಕದಿನ ತಂಡಗಳ ನಾಯಕ ಸ್ಥಾನದಿಂದ ಕೆಳಗಿಳಿದ ನಂತರ ಬಿಸಿಸಿಐ ರೋಹಿತ್ ಶರ್ಮಾ ಅವರನ್ನು ಭಾರತ ಟಿ ಟ್ವೆಂಟಿ ಹಾಗೂ ಏಕದಿನ ತಂಡಗಳ ನೂತನ ನಾಯಕ ಎಂದು ಆಯ್ಕೆ ಮಾಡಿತು. ಹೀಗೆ ನೂತನ ನಾಯಕನಾಗಿ ಆಯ್ಕೆಯಾದ ರೋಹಿತ್ ಶರ್ಮಾ ಇತ್ತೀಚೆಗಷ್ಟೇ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡು ಪೂರ್ಣಾವಧಿ ಏಕದಿನ ತಂಡದ ನಾಯಕನಾಗಿ ಅಧಿಕಾರವನ್ನು ಸ್ವೀಕರಿಸಬೇಕಿತ್ತು. ಆದರೆ ಇದಕ್ಕೂ ಮುನ್ನ ನಡೆಸುತ್ತಿದ್ದ ಅಭ್ಯಾಸದ ವೇಳೆ ಗಾಯದ ಸಮಸ್ಯೆಗೊಳಗಾದ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಗುಳಿದರು. ಹೀಗಾಗಿ ರೋಹಿತ್ ಶರ್ಮಾ ಬದಲು ಕೆಎಲ್ ರಾಹುಲ್ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ನಾಯಕನಾಗಿ ಮುನ್ನಡೆಸಿದರು.
ಆದರೆ ಕೆಎಲ್ ರಾಹುಲ್ ನಾಯಕತ್ವದಲ್ಲಿ ಕಣಕ್ಕಿಳಿದ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಎಲ್ಲಾ ಪಂದ್ಯಗಳಲ್ಲಿಯೂ ಕೂಡ ಸೋತು ವೈಟ್ ವಾಷ್ ಮುಖಭಂಗಕ್ಕೆ ಒಳಗಾಯಿತು. ಹೀಗೆ ಟೀಮ್ ಇಂಡಿಯಾ ಕೆಎಲ್ ರಾಹುಲ್ ನಾಯಕತ್ವದಲ್ಲಿ ಸೋಲುಂಡಿತು ಎಂದು ಹಲವಾರು ಟೀಕೆಗಳು ವ್ಯಕ್ತವಾದರೆ, ಮತ್ತೊಂದಷ್ಟು ಕ್ರಿಕೆಟ್ ತಜ್ಞರು ಟೀಮ್ ಇಂಡಿಯಾದ ಬೌಲಿಂಗ್ ವಿಭಾಗ ಬಲಿಷ್ಠವಾಗಿರದ ಕಾರಣ ಸೋಲನುಭವಿಸಬೇಕಾಯಿತು ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಈ ಕುರಿತಾಗಿ ಇದೀಗ ಭಾರತದ ಕ್ರಿಕೆಟಿಗ ಮನೋಜ್ ತಿವಾರಿ ಮಾತನಾಡಿದ್ದು ನಾಯಕನ ಆಯ್ಕೆ ಕುರಿತು ಈ ಕೆಳಕಂಡಂತೆ ಕಿಡಿಕಾರಿದ್ದಾರೆ.

ರಾಹುಲ್ ನಾಯಕತ್ವ ನಿಭಾಯಿಸಬಲ್ಲ ಆಟಗಾರ ಎಂದು ಹೇಗೆ ಎನಿಸಿತು?
ರೋಹಿತ್ ಶರ್ಮಾ ಅಲಭ್ಯರಾದಾಗ ಕೆಎಲ್ ರಾಹುಲ್ ಅವರನ್ನು ನಾಯಕನನ್ನಾಗಿ ನೇಮಿಸಿದ ಆಯ್ಕೆಗಾರರನ್ನು ಪ್ರಶ್ನಿಸಿರುವ ಮನೋಜ್ ತಿವಾರಿ ಕೆಎಲ್ ರಾಹುಲ್ ಅವರಲ್ಲಿ ನಾಯಕತ್ವದ ಯಾವ ಗುಣ ನಿಮಗೆ ಕಾಣಿಸಿತು ಎಂದು ಪ್ರಶ್ನೆ ಹಾಕಿದ್ದಾರೆ. ಕೆ ಎಲ್ ರಾಹುಲ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿ ಮುಂದಿನ ದಿನಗಳಿಗಾಗಿ ನಾಯಕನನ್ನು ಸಿದ್ಧಗೊಳಿಸುತ್ತಿದ್ದೇವೆ ಎಂದು ಆಯ್ಕೆಗಾರರು ಹೇಳಿಕೆಗಳನ್ನು ನೀಡಿದ್ದಾರೆ. ಆದರೆ ಓರ್ವ ನಾಯಕನನ್ನು ಸಿದ್ಧಗೊಳಿಸುವುದು ಅಸಾಧ್ಯ ಎಂದು ಮನೋಜ್ ತಿವಾರಿ ಕಿಡಿಕಾರಿದ್ದಾರೆ.

ನಾಯಕತ್ವ ಸ್ವಾಭಾವಿಕವಾಗಿ ಬರಬೇಕು ಯಾರೂ ನಾಯಕನನ್ನು ಹುಟ್ಟು ಹಾಕಲು ಆಗುವುದಿಲ್ಲ
ಇನ್ನೂ ಮುಂದುವರಿದು ಮಾತನಾಡಿರುವ ಮನೋಜ್ ತಿವಾರಿ ನಾಯಕತ್ವ ಎನ್ನುವುದು ಓರ್ವ ಆಟಗಾರನಲ್ಲಿ ಸ್ವಾಭಾವಿಕವಾಗಿ ಬರಬೇಕೇ ಹೊರತು ಯಾರೂ ಕೂಡ ಒತ್ತಡವನ್ನು ಹೇರಿ ನಾಯಕತ್ವವನ್ನು ವ್ಯಕ್ತಿಯಲ್ಲಿ ತುಂಬಲಾಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೂ ಕೂಡ ಓರ್ವ ಆಟಗಾರನನ್ನು ನಾಯಕನನ್ನಾಗಿ ಮಾಡಲು ಪ್ರಯತ್ನಿಸಿದರೆ ಸುಮಾರು 25ರಿಂದ 30 ಪಂದ್ಯಗಳನ್ನಾಡಿದ ನಂತರ ಆತನಿಗೆ ನಾಯಕತ್ವದ ಉಪಾಯಗಳು ಬರತೊಡಗುತ್ತವೆ. ಆದರೆ ಈ ರೀತಿ ನಾಯಕನಾದವರು ಮುಂದಿನ ದಿನಗಳಲ್ಲಿ ಯಶಸ್ಸು ಸಾಧಿಸುತ್ತಾರೆ ಎನ್ನುವುದು ಸುಳ್ಳು ಎಂದು ಮನೋಜ್ ತಿವಾರಿ ಹೇಳಿಕೆ ನೀಡಿದ್ದಾರೆ.

ಹೀಗಾಗಿಯೇ ದಕ್ಷಿಣ ಆಫ್ರಿಕಾದಲ್ಲಿ ಹೀನಾಯವಾಗಿ ಭಾರತ ತಂಡ ಸೋತಿತು
ಇನ್ನು ದಕ್ಷಿಣ ಆಫ್ರಿಕಾ ನೆಲದಲ್ಲಿ ಟೀಮ್ ಇಂಡಿಯಾ ಹೀನಾಯವಾಗಿ ಸೋತಿರುವುದರ ಕುರಿತು ಪ್ರತಿಕ್ರಿಯಿಸಿರುವ ಮನೋಜ್ ತಿವಾರಿ ತಂಡದಲ್ಲಿದ್ದ ಆಟಗಾರರನ್ನು ನೋಡಿದರೆ ಟೀಮ್ ಇಂಡಿಯಾ ಯಾವುದೇ ಕಾರಣಕ್ಕೂ ಈ ರೀತಿ ಸೋಲಬಾರದಿತ್ತು ಎಂದಿದ್ದಾರೆ. ಕೆ ಎಲ್ ರಾಹುಲ್ ಅವರನ್ನು ನಾಯಕನನ್ನಾಗಿ ನೇಮಿಸಿದ ಒಂದೇ ಒಂದು ತಪ್ಪು ನಿರ್ಧಾರದಿಂದ ಟೀಂ ಇಂಡಿಯಾ ಸರಣಿಯನ್ನು ಸೋತಿದೆ ಎಂದಿರುವ ಮನೋಜ್ ತಿವಾರಿ ಇದರಲ್ಲಿ ಕೆಎಲ್ ರಾಹುಲ್ ಅವರ ನಾಯಕತ್ವವನ್ನು ನಾನು ಟೀಕಿಸುತ್ತಿಲ್ಲ ಬದಲಾಗಿ ಆಯ್ಕೆಗಾರರ ಆಯ್ಕೆಯನ್ನು ಟೀಕಿಸುತ್ತಿದ್ದೇನೆ ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications