
ರಾಹುಲ್ ನಾಯಕತ್ವ ನಿಭಾಯಿಸಬಲ್ಲ ಆಟಗಾರ ಎಂದು ಹೇಗೆ ಎನಿಸಿತು?
ರೋಹಿತ್ ಶರ್ಮಾ ಅಲಭ್ಯರಾದಾಗ ಕೆಎಲ್ ರಾಹುಲ್ ಅವರನ್ನು ನಾಯಕನನ್ನಾಗಿ ನೇಮಿಸಿದ ಆಯ್ಕೆಗಾರರನ್ನು ಪ್ರಶ್ನಿಸಿರುವ ಮನೋಜ್ ತಿವಾರಿ ಕೆಎಲ್ ರಾಹುಲ್ ಅವರಲ್ಲಿ ನಾಯಕತ್ವದ ಯಾವ ಗುಣ ನಿಮಗೆ ಕಾಣಿಸಿತು ಎಂದು ಪ್ರಶ್ನೆ ಹಾಕಿದ್ದಾರೆ. ಕೆ ಎಲ್ ರಾಹುಲ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿ ಮುಂದಿನ ದಿನಗಳಿಗಾಗಿ ನಾಯಕನನ್ನು ಸಿದ್ಧಗೊಳಿಸುತ್ತಿದ್ದೇವೆ ಎಂದು ಆಯ್ಕೆಗಾರರು ಹೇಳಿಕೆಗಳನ್ನು ನೀಡಿದ್ದಾರೆ. ಆದರೆ ಓರ್ವ ನಾಯಕನನ್ನು ಸಿದ್ಧಗೊಳಿಸುವುದು ಅಸಾಧ್ಯ ಎಂದು ಮನೋಜ್ ತಿವಾರಿ ಕಿಡಿಕಾರಿದ್ದಾರೆ.

ನಾಯಕತ್ವ ಸ್ವಾಭಾವಿಕವಾಗಿ ಬರಬೇಕು ಯಾರೂ ನಾಯಕನನ್ನು ಹುಟ್ಟು ಹಾಕಲು ಆಗುವುದಿಲ್ಲ
ಇನ್ನೂ ಮುಂದುವರಿದು ಮಾತನಾಡಿರುವ ಮನೋಜ್ ತಿವಾರಿ ನಾಯಕತ್ವ ಎನ್ನುವುದು ಓರ್ವ ಆಟಗಾರನಲ್ಲಿ ಸ್ವಾಭಾವಿಕವಾಗಿ ಬರಬೇಕೇ ಹೊರತು ಯಾರೂ ಕೂಡ ಒತ್ತಡವನ್ನು ಹೇರಿ ನಾಯಕತ್ವವನ್ನು ವ್ಯಕ್ತಿಯಲ್ಲಿ ತುಂಬಲಾಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೂ ಕೂಡ ಓರ್ವ ಆಟಗಾರನನ್ನು ನಾಯಕನನ್ನಾಗಿ ಮಾಡಲು ಪ್ರಯತ್ನಿಸಿದರೆ ಸುಮಾರು 25ರಿಂದ 30 ಪಂದ್ಯಗಳನ್ನಾಡಿದ ನಂತರ ಆತನಿಗೆ ನಾಯಕತ್ವದ ಉಪಾಯಗಳು ಬರತೊಡಗುತ್ತವೆ. ಆದರೆ ಈ ರೀತಿ ನಾಯಕನಾದವರು ಮುಂದಿನ ದಿನಗಳಲ್ಲಿ ಯಶಸ್ಸು ಸಾಧಿಸುತ್ತಾರೆ ಎನ್ನುವುದು ಸುಳ್ಳು ಎಂದು ಮನೋಜ್ ತಿವಾರಿ ಹೇಳಿಕೆ ನೀಡಿದ್ದಾರೆ.

ಹೀಗಾಗಿಯೇ ದಕ್ಷಿಣ ಆಫ್ರಿಕಾದಲ್ಲಿ ಹೀನಾಯವಾಗಿ ಭಾರತ ತಂಡ ಸೋತಿತು
ಇನ್ನು ದಕ್ಷಿಣ ಆಫ್ರಿಕಾ ನೆಲದಲ್ಲಿ ಟೀಮ್ ಇಂಡಿಯಾ ಹೀನಾಯವಾಗಿ ಸೋತಿರುವುದರ ಕುರಿತು ಪ್ರತಿಕ್ರಿಯಿಸಿರುವ ಮನೋಜ್ ತಿವಾರಿ ತಂಡದಲ್ಲಿದ್ದ ಆಟಗಾರರನ್ನು ನೋಡಿದರೆ ಟೀಮ್ ಇಂಡಿಯಾ ಯಾವುದೇ ಕಾರಣಕ್ಕೂ ಈ ರೀತಿ ಸೋಲಬಾರದಿತ್ತು ಎಂದಿದ್ದಾರೆ. ಕೆ ಎಲ್ ರಾಹುಲ್ ಅವರನ್ನು ನಾಯಕನನ್ನಾಗಿ ನೇಮಿಸಿದ ಒಂದೇ ಒಂದು ತಪ್ಪು ನಿರ್ಧಾರದಿಂದ ಟೀಂ ಇಂಡಿಯಾ ಸರಣಿಯನ್ನು ಸೋತಿದೆ ಎಂದಿರುವ ಮನೋಜ್ ತಿವಾರಿ ಇದರಲ್ಲಿ ಕೆಎಲ್ ರಾಹುಲ್ ಅವರ ನಾಯಕತ್ವವನ್ನು ನಾನು ಟೀಕಿಸುತ್ತಿಲ್ಲ ಬದಲಾಗಿ ಆಯ್ಕೆಗಾರರ ಆಯ್ಕೆಯನ್ನು ಟೀಕಿಸುತ್ತಿದ್ದೇನೆ ಎಂದಿದ್ದಾರೆ.


Click it and Unblock the Notifications
