2024ರ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸುತ್ತಿರುವ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ಅವರ ಆರೋಗ್ಯದಲ್ಲಿ ದಿಢೀರ್ನೆ ಏರುಪೇರಾಗಿದ್ದು, ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ದೇಶೀಯ ಕ್ರಿಕೆಟ್ ರಣಜಿ ಟ್ರೋಫಿ ಪಂದ್ಯಾವಳಿಯ ಇತ್ತೀಚಿನ ಪಂದ್ಯದಲ್ಲಿ ತ್ರಿಪುರ ತಂಡವನ್ನು ಎದುರಿಸಿದ್ದ ಕರ್ನಾಟಕ ತಂಡದ ಭಾಗವಾಗಿದ್ದರು. ಸ್ಟಾರ್ ಬ್ಯಾಟರ್ ಮಯಾಂಕ್ ಅಗರ್ವಾಲ್ ಅಸ್ವಸ್ಥರಾದ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಯಾಂಕ್ ಅಗರ್ವಾಲ್ ಅವರನ್ನು ಕೂಡಲೇ ತ್ರಿಪುರಾದ ಅಗರ್ತಲಾ ಎಎಲ್ಎಸ್ ಆಸ್ಪತ್ರೆಗೆ ದಾಖಲು ಮಾಡಿದ್ದು, ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
ವಾಸ್ತವಾಗಿ, ತ್ರಿಪುರ ವಿರುದ್ಧ ರಣಜಿ ಪಂದ್ಯವನ್ನಾಡಿದ್ದ ಕರ್ನಾಟಕ ತಂಡ ತನ್ನ ಮುಂದಿನ ಪಂದ್ಯವನ್ನು ಇದೇ ಫೆಬ್ರವರಿ 2ರಿಂದ ರೈಲ್ವೇಸ್ ವಿರುದ್ಧ ಗುಜರಾತ್ನ ಸೂರತ್ನಲ್ಲಿ ಆಡಬೇಕಿತ್ತು.
ಈ ಪಂದ್ಯಕ್ಕಾಗಿ ಕರ್ನಾಟಕ ರಣಜಿ ತಂಡದ ಆಟಗಾರರು ಅಗರ್ತಲಾದಿಂದ ಸೂರತ್ಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಈ ವೇಳೆ ವಿಮಾನದಲ್ಲಿ ನೀರು ಕುಡಿದ ಮಯಾಂಕ್ ಅಗರ್ವಾಲ್ ಅವರು ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಯಾಂಕ್ ಅಗರ್ವಾಲ್ ವಿಮಾನದ ಸೀಟಿನ ಮುಂಭಾಗದಲ್ಲಿದ್ದ ನೀರು ಕುಡಿದಿದ್ದರು. ನೀರು ಕುಡಿಯುತಿದ್ದಂತೆ ನಾಲಿಗೆ, ಬಾಯಿ, ಕೆನ್ನೆ ಸುಟ್ಟು ಹೋದ ಅನುಭವವಾಗಿದೆ. ಮಾತಾಡಲು ಸಾಧ್ಯವಾಗದೆ ಮಯಾಂಕ್ ಅಗರ್ವಾಲ್ ಸೀಟಿನಲ್ಲೇ ಒರಗಿ ಬಿದ್ದಿದ್ದರು. ಮಯಾಂಕ್ ಅಗರ್ವಾಲ್ಗೆ ವಿಮಾನದಲ್ಲಿ ವಿಷಪ್ರಾಶನವಾಗಿದೆಯಾ ಎಂಬ ಪ್ರಶ್ನೆ ಮೂಡಿದೆ.