ಮಂಗಳವಾರ, ಜನವರಿ 30ರಂದು ವಿಮಾನದಲ್ಲಿ ದಿಢೀರ್ನೆ ಅನಾರೋಗ್ಯಕ್ಕೆ ಒಳಗಾದ ಭಾರತ ಮತ್ತು ಕರ್ನಾಟಕ ತಂಡದ ಬ್ಯಾಟರ್ ಮಯಾಂಕ್ ಅಗರ್ವಾಲ್ ಅವರನ್ನು ತಕ್ಷಣವೇ ಅಗರ್ತಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
2024ರ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ತ್ರಿಪುರ ವಿರುದ್ಧ ಗೆದ್ದ ಕರ್ನಾಟಕ ತಂಡ ಮುಂದಿನ ಪಂದ್ಯಕ್ಕಾಗಿ ಅಗರ್ತಲಾದಿಂದ ಸೂರತ್ಗೆ ಪ್ರಯಾಣ ಬೆಳೆಸಲು ಸಜ್ಜಾಗಿತ್ತು. ಈ ವೇಳೆ ನಾಯಕ ಮಯಾಂಕ್ ಅಗರ್ವಾಲ್ ವಿಮಾನ ಹತ್ತಿ ಕುಳಿತಿದ್ದರು. ಆದರೆ ತಕ್ಷಣವೇ ಅಸ್ವಸ್ಥರಾಗಿದ್ದರು ಮತ್ತು ತ್ರಿಪುರಾ ರಾಜಧಾನಿ ಅಗರ್ತಲಾ ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು.
ಮಯಾಂಕ್ ಅಗರ್ವಾಲ್ ಅವರನ್ನು ಪ್ರಸ್ತುತ ಅಗರ್ತಲಾದ ಐಎಲ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೈಖೇಲ್ ಕನ್ನಡ ಖಚಿತಪಡಿಸುತ್ತದೆ.

"ಅಗರ್ತಲಾದಲ್ಲಿ ಇಂಡಿಗೋ ವಿಮಾನ ಹತ್ತಿದ ನಂತರ, ಮಯಾಂಕ್ ಅಗರ್ವಾಲ್ ಬಾಯಾರಿಕೆ ಎಂದು ಸೀಟಿನ ಮುಂಭಾಗದಲ್ಲಿದ್ದ ನೀರಿನ ಬಾಟಲಿಯನ್ನು ಓಪನ್ ಮಾಡಿ ಒಂದು ಗುಟುಕು ಕುಡಿದಿದ್ದಾನೆ ಅಷ್ಟೇ..!"
"ಆಗ ಬಾಯಿ, ನಾಲಗೆ, ಗಂಟಲು ಸುಟ್ಟು ಹೋದ ಅನುಭವವಾಗಿದೆ. ಉರಿ ಉರಿ ಅಂತ ಕಿರುಚಿಕೊಂಡಿದ್ದಾನೆ. ಏನಾಗುತ್ತದೆ ಎನ್ನುವಷ್ಟರಲ್ಲಿ ಮಯಾಂಕ್ ಅಗರ್ವಾಲ್ ಅವರ ಬಾಯಿ, ನಾಲಗೆ, ಗಂಟಲು ಮತ್ತು ಮುಖದ ಕೆಲವು ಭಾಗ ಸುಟ್ಟು ಹೋಗಿತ್ತು. ಏಕೆಂದರೆ, ಮಯಾಂಕ್ ಕುಡಿದಿದ್ದು ನೀರಲ್ಲ, ನೀರಿನ ಬಾಟಲಿಯಲ್ಲಿದ್ದ ಆ್ಯಸಿಡ್ನಂಥಾ ವಿಷಕಾರಿ ದ್ರವ".
"ಅದೃಷ್ಟವಶಾತ್, ಮಯಾಂಕ್ ಅಗರ್ವಾಲ್ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ಹೇಳಲಾಗಿದೆ. ಈ ಘಟನೆ ನಡೆದ ಬಳಿಕ ಒಂದೂ ಮಾತು ಆತನ ಬಾಯಿಂದ ಬಂದಿಲ್ಲ. ಅಂದರೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ಬಾಯಿ, ನಾಲಗೆ ಹಲ್ಲುಗಳಿಗೆ ಡ್ಯಾಮೇಜ್ ಆಗಿದೆ. ತುಟಿಗಳು ದಪ್ಪನೆ ಊದಿಕೊಂಡಿವೆ".
"ಅಗರ್ತಲಾದ ಐಎಲ್ಎಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಮತ್ತು ಬುಧವಾರದಂದು ಬೆಂಗಳೂರಿಗೆ ಶಿಫ್ಟ್ ಮಾಡಿ, ಇಲ್ಲೇ ಚಿಕಿತ್ಸೆ ಮುಂದುವರೆಸಲಾಗುತ್ತದೆ," ಎಂದು ಮಯಾಂಕ್ ಅಗರ್ವಾಲ್ ಅವರ ಆಪ್ತರಾದ ಸುದರ್ಶನ ಗೌಡ ಎಂಬುವವರು ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.

ಈ ಘಟನೆಯ ನಂತರ ಮಯಾಂಕ್ ಅಗರ್ವಾಲ್ ವಾಂತಿ ಮಾಡಿದ್ದರಿಂದ ಕೆಲವು ಪರೀಕ್ಷೆಗಳಿಗೆ ಒಳಗಾಗಲಿದ್ದಾನೆ ಮತ್ತು ಇನ್ನೂ ಅಸ್ವಸ್ಥತೆ ಅನುಭವಿಸುತ್ತಾನೆ. ಅವರು ಐಸಿಯುನಲ್ಲಿ ಉಳಿಯುವ ಸಾಧ್ಯತೆಯಿದೆ ಮತ್ತು ಆಸ್ಪತ್ರೆಯಲ್ಲಿ ಉನ್ನತ ವೈದ್ಯಕೀಯ ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿದ್ದಾರೆ.
ಕರ್ನಾಟಕ ಮುಂದಿನ ಪಂದ್ಯದಲ್ಲಿ ಫೆಬ್ರವರಿ 2ರಿಂದ ಸೂರತ್ನಲ್ಲಿ ರೈಲ್ವೇಸ್ ವಿರುದ್ಧ ಸೆಣಸಲಿದೆ. ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ತಂಡ ಸೂರತ್ಗೆ ಹೋಗುತ್ತಿತ್ತು. ಆದರೆ ಇದೀಗ ಅವರು ಆ ಪಂದ್ಯದಲ್ಲಿ ಭಾಗವಹಿಸುವುದಿಲ್ಲ. ಕರ್ನಾಟಕ ಪ್ರಸ್ತುತ ನಾಲ್ಕು ಪಂದ್ಯಗಳಿಂದ ಎರಡು ಗೆಲುವುಗಳೊಂದಿಗೆ 15 ಅಂಕಗಳನ್ನು ಕಲೆಹಾಕಿದ್ದು, ಸಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ.