ಹುಬ್ಬಳ್ಳಿ: ಭರವಸೆಯ ಆಟಗಾರ ಮಯಾಂಕ್ ಅಗರ್ವಾಲ್ ಅವರು ಬಾರಿಸಿದ ಶತಕದ ನೆರವಿನಿಂದ ಕರ್ನಾಟಕ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಜಮ್ಮು ಕಾಶ್ಮೀರ ವಿರುದ್ಧ ಮೊದಲ ಇನಿಂಗ್ಸ್ನಲ್ಲಿ ಮೂರನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ಗೆ 220 ರನ್ ಸೇರಿಸಿದೆ. ಅಲ್ಲದೆ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಲು ಕರ್ನಾಟಕಕ್ಕೆ 364 ರನ್ಗಳ ಅವಶ್ಯಕತೆ ಇದೆ.
ಗುರುವಾರ ಮೂರನೇ ದಿನದಾಟವನ್ನು ಜಮ್ಮು ಕಾಶ್ಮೀರ ಮೊದಲ ಇನಿಂಗ್ಸ್ನ್ನು 6 ವಿಕೆಟ್ಗೆ 527 ರನ್ಗಳಿಂದ ಆಟ ಮುಂದುವರಿಸಿತು ಅಂತಿಮವಾಗಿ ಜಮ್ಮು ತಂಡ 584 ರನ್ಗಳಿಗೆ ಆಲೌಟ್ ಆಯಿತು. ಪ್ರವಾಸಿ ತಂಡದ ಪರ ಸಾಹಿಲ್ ಲೋತ್ರಾ 8 ಬೌಂಡರಿ ನೆರವಿನಿಂದ 72 ರನ್ ಸಿಡಿಸಿದರು. ಅಬಿದ್ ಮುಷ್ತಾಕ್ 28, ಯಧುವೀರ್ ಸಿಂಗ್ 30 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.

ಕರ್ನಾಟಕದ ಪರ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣಾ 34.1 ಓವರ್ಗಳಲ್ಲಿ 98 ರನ್ ನೀಡಿ 5 ವಿಕೆಟ್ ಕಬಳಿಸಿದರು. ಉಳಿದಂತೆ ವಿದ್ಯಾಧರ್ ಪಾಟೀಲ್, ವಿಜಯ್ಕುಮಾರ್ ವೈಶಾಖ್, ಶ್ರೇಯಾಸ್ ಗೋಪಾಲ್, ಶಿಖರ್ ಶೆಟ್ಟಿ ತಲಾ ಒಂದು ವಿಕೆಟ್ ಕಬಳಿಸಿದರು.
ಮೊದಲ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡದ ಪರ ಅನುಭವಿ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಅವರು ಭರ್ಜರಿ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾಗಲಿಲ್ಲ. ಈ ಜೋಡಿ ತಂಡಕ್ಕೆ 27 ರನ್ಗಳ ಜೊತೆಯಾಟದ ಕಾಣಿಕೆ ನೀಡಿತು. 13 ರನ್ ಬಾರಿಸಿದ್ದ ಕೆಎಲ್ ರಾಹುಲ್ ಅವರಿಗೆ ಅಕಿಬ್ ನಬಿ ಖೆಡ್ಡಾ ತೋಡಿದರು. ನಾಯಕ ದೇವದತ್ ಪಡಿಕ್ಕಲ್ ಒತ್ತಡವನ್ನು ಮೆಟ್ಟಿನಿಂತು ಆಡುವಲ್ಲಿ ವಿಫಲರಾದರು. ಇವರು 10 ಎಸೆತಗಳಲ್ಲಿ 11 ರನ್ ಸಿಡಿಸಿ ಸುನಿಲ್ ಕುಮಾರ್ಗೆ ವಿಕೆಟ್ ಒಪ್ಪಿಸಿದರು.

ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವ ಹೊಂದಿರುವ ಕರುಣ್ ನಾಯರ್ ಹಾಗೂ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿ ರನ್ಗಳನ್ನು ಗುಡ್ಡೆ ಹಾಕಿರುವ ರವಿಚಂದ್ರನ್ ಸ್ಮರಣ್ ಸೊನ್ನೆ ಸುತ್ತಿದರು. ಕರ್ನಾಟಕ 57 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.
5ನೇ ವಿಕೆಟ್ಗೆ ಮಯಾಂಕ್ ಅಗರ್ವಾಲ್ ಹಾಗೂ ಶ್ರೇಯಸ್ ಗೋಪಾಲ್ ಜೋಡಿ ತಂಡಕ್ಕೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಶತಕದ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ಆಧಾರವಾಯಿತು. ಈ ವೇಳೆ ಶ್ರೇಯಸ್ ಗೋಪಾಲ್ 27 ರನ್ ಬಾರಿಸಿದ್ದಾಗ ಯಧುವೀರ್ ಅವರ ಎಸೆತದಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು.
ಒಂದು ತುದಿಯಲ್ಲಿ ವಿಕೆಟ್ ಬೀಳುತ್ತಾ ಇದ್ದರೂ ಸಹ ಇನ್ನೊಂದು ತುದಿಯನ್ನು ಗಟ್ಟಿಯಾಗಿ ಹಿಡಿದುಕೊಂಡ ಬ್ಯಾಟ್ ಮಾಡಿದ ಮಯಾಂಕ್ ಅಗರ್ವಾಲ್ ಅಬ್ಬರಿಸಿದರು. ಇವರು ಫೈನಲ್ ಪಂದ್ಯದಲ್ಲಿ ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡಿ ಶತಕ ಬಾರಿಸಿದರು. ಇವರು 207 ಎಸೆತಗಳಲ್ಲಿ 17 ಬೌಂಡರಿ ಅಜೇಯ 130 ರನ್ ಸಿಡಿಸಿದ್ದಾರೆ. ವಿಕೆಟ್ ಕೀಪರ್ ಕೃತಿಕ್ ಕೃಷ್ಣ ಅಜೇಯ 27 ರನ್ ಸಿಡಿಸಿದ್ದಾರೆ.