2023-24ರ ರಣಜಿ ಟ್ರೋಫಿ ಟೂರ್ನಿಗಾಗಿ ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ತಂಡವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ಸಿಎ) ಪ್ರಕಟಿಸಿದೆ.
ರಣಜಿ ಟ್ರೋಫಿಯ ಪಂಜಾಬ್ ಮತ್ತು ಗುಜರಾತ್ ತಂಡಗಳ ವಿರುದ್ಧದ ಆರಂಭಿಕ ಎರಡು ಪಂದ್ಯಗಳಲ್ಲಿ ಮಯಾಂಕ್ ಅಗರ್ವಾಲ್ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.

ಹಿಂದಿನ ವಿಜಯ್ ಹಜಾರೆ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ವೈಟ್ ಬಾಲ್ ಟೂರ್ನಿಗಳಲ್ಲಿ ಕಾಣಿಸಿಕೊಂಡಿದ್ದ ಪ್ರಮುಖ ಆಲ್ರೌಂಡರ್ ಕೃಷ್ಣಪ್ಪ ಗೌತಮ್ ಅವರನ್ನು ಕೈಬಿಡಲಾಗಿದೆ.
ಹಿಂದಿನ ಆವೃತ್ತಿಯ ರಣಜಿ ಟ್ರೋಫಿಯಲ್ಲಿ ವೇಗಿ ವಿಜಯ್ಕುಮಾರ್ ವೈಶಾಕ್ (31 ವಿಕೆಟ್) ಜೊತೆಗೆ ಕೃಷ್ಣಪ್ಪ ಗೌತಮ್ ಕರ್ನಾಟಕ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಮುಗಿಸಿದ್ದರು.
36ರ ಹರೆಯದ ಕೃಷ್ಣಪ್ಪ ಗೌತಮ್ ಅವರನ್ನು ಹೊರಗಿಟ್ಟಿರುವ ಕುರಿತು ಕೆಎಸ್ಸಿಎ ಪುರುಷರ ಆಯ್ಕೆ ಸಮಿತಿ ಅಧ್ಯಕ್ಷ ಜೆ. ಅಭಿರಾಮ್ ಕಿರಿಯ ಆಟಗಾರರನ್ನು ನೋಡುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
"ಕೆ.ಗೌತಮ್ ಅವರು ಹಲವು ವರ್ಷಗಳಿಂದ ಕರ್ನಾಟಕಕ್ಕೆ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಎಲ್ಲಾ ಆಟಗಾರರು ಅಂತಿಮವಾಗಿ ಮುಂದುವರಿಯಬೇಕಾಗಿದೆ. ನಾವು ಭವಿಷ್ಯವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು," ಎಂದು ಜೆ.ಅಭಿರಾಮ್ ತಿಳಿಸಿದರು.
ಕೃಷ್ಣಪ್ಪ ಗೌತಮ್ ಬಹುಕಾಲದಿಂದ ಕರ್ನಾಟಕದ ರೆಡ್ ಬಾಲ್ ತಂಡದಲ್ಲಿ ಆಧಾರ ಸ್ತಂಭವಾಗಿದ್ದರು. ಅವರು 59 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ ಮತ್ತು ಆಫ್ ಸ್ಪಿನ್ ಬೌಲಿಂಗ್ನೊಂದಿಗೆ 224 ವಿಕೆಟ್ಗಳನ್ನು ಕಬಳಿಸಿದ್ದಾರೆ. ದೊಡ್ಡ ಶಾಟ್ಗಳಿಗೆ ಹೆಸರುವಾಸಿಯಾಗಿರುವ ಕೃಷ್ಣಪ್ಪ ಗೌತಮ್ ಒಂದು ಶತಕ ಮತ್ತು ಐದು ಅರ್ಧಶತಕಗಳನ್ನು ಬಾರಿಸಿದ್ದಾರೆ.
ಇನ್ನು ಹುಬ್ಬಳ್ಳಿಯ ಜೆಎಸ್ಎಸ್ ಕಾಲೇಜಿನಲ್ಲಿ ಬಿ.ಕಾಂ ವಿದ್ಯಾರ್ಥಿಯಾಗಿರುವ ರೋಹಿತ್ ಕುಮಾರ್ ಚೊಚ್ಚಲ ಬಾರಿಗೆ ಕರ್ನಾಟಕ ರಣಜಿ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಸ್ಪಿನ್ ದಾಳಿಯಲ್ಲಿ ಇದೀಗ ಎಡಗೈ ಸ್ಪಿನ್ನರ್ಗಳಾದ ಶುಭಾಂಗ್ ಹೆಗ್ಡೆ ಮತ್ತು ರೋಹಿತ್ ಕುಮಾರ್ ಮತ್ತು ಆಫ್ಸ್ಪಿನ್ನರ್ ಕೆ. ಶಶಿಕುಮಾರ್ ಇದ್ದಾರೆ. ಈ ಮೂವರು ಅನನುಭಗಳಾಗಿದ್ದಾರೆ. ಶುಭಾಂಗ್ ಹೆಗ್ಡೆ ನಾಲ್ಕು ಪ್ರಥಮ ದರ್ಜೆ ಪಂದ್ಯಗಳನ್ನು ಮಾತ್ರ ಆಡಿದ್ದಾರೆ.
1970 ಮತ್ತು 1980ರ ದಶಕದಲ್ಲಿ ಕರ್ನಾಟಕ ತಂಡದ ಭಾಗವಾಗಿದ್ದ ದಿವಂಗತ ಬಿ.ವಿಜಯಕೃಷ್ಣ ಅವರನ್ನು ರೋಹಿತ್ ಕುಮಾರ್ ಹೋಲುತ್ತಿದ್ದಾರೆ ಎಂದು ಜೆ. ಅಭಿರಾಮ್ ಹೇಳಿದ್ದಾರೆ.
"ಯುವ ಆಟಗಾರ ರೋಹಿತ್ ಕುಮಾರ್ ಅವರು ವಿಜಯಕೃಷ್ಣ ಅವರ ಅಚ್ಚಿನಲ್ಲಿ ಅದ್ಭುತ ಪ್ರತಿಭೆ. ರೋಹಿತ್ಗೆ ಫ್ಲೈಟ್ ಮತ್ತು ಲೂಪ್ ಇದೆ ಮತ್ತು ತುಂಬಾ ಸ್ಥಿರವಾಗಿದ್ದಾರೆ," ಎಂದು ಜೆ.ಅಭಿರಾಮ್ ತಿಳಿಸಿದರು.
ಸಾಮಾನ್ಯ ಆಯ್ಕೆಯ ಕುರಿತು ಜೆ.ಅಭಿರಾಮ್ ಮಾತನಾಡಿ, "ಸಂದೇಶವು ಎಲ್ಲರಿಗೂ ಸ್ಪಷ್ಟವಾಗಿದೆ, ಯುವ ಪೀಳಿಗೆ ಬರುತ್ತಿದೆ," ಎಂದರು.
23 ವರ್ಷದೊಳಗಿನವರ ಸಿ.ಕೆ. ನಾಯುಡು ಟ್ರೋಫಿಯಲ್ಲಿ ಬ್ಯಾಟ್ನೊಂದಿಗೆ ಫಾರ್ಮ್ ಕಂಡುಕೊಂಡಿರುವ ವಿಕೆಟ್ಕೀಪರ್-ಬ್ಯಾಟರ್ ಸುಜಯ್ ಸಾತೇರಿ ಅವರನ್ನು ಬಿ.ಆರ್. ಶರತ್ ಬದಲಿಗೆ ಸೇರಿಸಲಾಗಿದೆ. ಶರತ್ ಶ್ರೀನಿವಾಸ್ ತಂಡದಲ್ಲಿರುವ ಮತ್ತೊಬ್ಬ ವಿಕೆಟ್ ಕೀಪರ್.
ವಿಶ್ವಾಸಾರ್ಹ ಬ್ಯಾಟರ್ ನಿಕಿನ್ ಜೋಸ್ ಅವರು ರವಿಕುಮಾರ್ ಸಮರ್ಥ್ ಅವರಿಂದ ಉಪನಾಯಕನ ಅಧಿಕಾರ ವಹಿಸಿಕೊಂಡರು. ಬ್ಯಾಟರ್ ಕೆಎಲ್ ರಾಹುಲ್ ಮತ್ತು ವೇಗಿ ಪ್ರಸಿದ್ಧ್ ಕೃಷ್ಣ ರಾಷ್ಟ್ರೀಯ ತಂಡದ ಕರ್ತವ್ಯದಲ್ಲಿದ್ದಾರೆ.
ಮಯಾಂಕ್ ಅಗರ್ವಾಲ್ (ನಾಯಕ), ರವಿಕುಮಾರ್ ಸಮರ್ಥ್, ದೇವದತ್ ಪಡಿಕ್ಕಲ್, ನಿಕಿನ್ ಜೋಸ್ (ಉಪನಾಯಕ), ಮನೀಶ್ ಪಾಂಡೆ, ಶುಭಾಂಗ್ ಹೆಗ್ಡೆ, ಶರತ್ ಶ್ರೀನಿವಾಸ್ (ವಿಕೆಟ್ ಕೀಪರ್), ವಿಜಯ್ಕುಮಾರ್ ವೈಶಾಕ್, ವಾಸವಿ ಕೌಶಿಕ್, ವಿದ್ವತ್ ಕಾವೇರಪ್ಪ, ಕೆ.ಶಶಿಕುಮಾರ್, ಸುಜಯ್ ಸಾತೇರಿ, ಡಿ.ನಿಶ್ಚಲ್, ಎಂ.ವೆಂಕಟೇಶ್, ಕಿಶನ್ ಬೇಡರೆ, ರೋಹಿತ್ ಕುಮಾರ್.
ಕೋಚ್: ಪಿ.ವಿ. ಶಶಿಕಾಂತ್
ಬೌಲಿಂಗ್ ಕೋಚ್: ಮನ್ಸೂರ್ ಅಲಿ ಖಾನ್
ಫೀಲ್ಡಿಂಗ್ ಕೋಚ್: ಶಬರೀಶ್ ಮೋಹನ್