
ಭಾರತೀಯ ಟೆಸ್ಟ್ ತಂಡದಲ್ಲಿ ಆರಂಭಿಕನಾಗಿ ಮಿಂಚುತ್ತಿರುವ ಮಯಾಂಕ್ ಅಗರ್ವಾಲ್ ತನಗೆ ಭರವಸೆ ತುಂಬಿದ್ದು ರಾಹುಲ್ ದ್ರಾವಿಡ್ ಎಂದಿದ್ದಾರೆ. ತಂಡಕ್ಕೆ ಆಯ್ಕೆಯಾಗದೆ ಬೇಸತ್ತಿದ್ದ ಮಯಾಂಕ್ ಸಾಕಷ್ಟು ಕುಗ್ಗಿಹೋಗಿದ್ದರಂತೆ ಆ ಸಂದರ್ಭದಲ್ಲಿ ದ್ರಾವಿಡ್ ಮಾತುಗಳು ಆಶಾಭಾವನೆಯನ್ನು ಮೂಡಿಸಿತ್ತು ಎಂದು ಅಗರ್ವಾಲ್ ಹೇಳಿದ್ದಾರೆ.
ಮಯಾಂಕ್ ಅಗರ್ವಾಲ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನವನ್ನು ನೀಡುತ್ತಿದ್ದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ತಂಡದಿಂದ ಕರೆ ಬರುವ ನಿರೀಕ್ಷೆಯಲ್ಲಿದ್ದರು. ಆದರೆ ಸಾಕಷ್ಟು ಕಾದರೂ ಅಗರ್ವಾಲ್ಗೆ ರಾಷ್ಟ್ರೀಯ ತಂಡದಲ್ಲಿ ಮನ್ನಣೆ ಸಿಕ್ಕಿರಲಿಲ್ಲ. ಈ ಸಂದರ್ಭದಲ್ಲಿ ಬಹಳಷ್ಟು ಋಣಾತ್ಮಕ ಚಿಂತನೆಗಳೇ ಮನಸಿನಲ್ಲಿ ಬರುತ್ತಿತ್ತು ಎಂದು ಅಗರ್ವಾಲ್ ಹೇಳಿದ್ದಾರೆ.
ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಜೊತೆಗೆ ಸಂವಾದ ನಡೆಸಿದ ಅಗರ್ವಾಲ್ ಆ ಕಠಿಣ ಸಂದರ್ಭದ ಬಗ್ಗೆ ಹೇಳಿಕೊಂಡಿದ್ದಾರೆ. ನಾನು ಇನ್ನು ಭಾರತೀಯ ಕ್ರಿಕೆಟ್ ತಂಡಕ್ಕೆ ಯಾವತ್ತೂ ಆಯ್ಕೆಯಾಗಲಾರೆ ಎನಿಸಿತ್ತು. ಆದರೆ ಅಂತಾ ಸಂದರ್ಭದಲ್ಲಿ ನನಗೆ ಸ್ಪೂರ್ತಿ ನೀಡಿದ್ದು ರಾಹುಲ್ ದ್ರಾವಿಡ್ ಆಡಿದ ಮಾತುಗಳು. ಅವರೊಂದಿಗೆ ಮಾತನಾಡಲು ಸಿಕ್ಕ ಸಂದರ್ಭದಲ್ಲಿ ನನ್ನಲ್ಲಿ ಭರವಸೆಯನ್ನು ತುಂಬಿದರು ಎಂದು ಅಗರ್ವಾಲ್ ಹೇಳಿದ್ದಾರೆ.
ರಣಜಿ ಮತ್ತು ಭಾರತ ಎ ತಂಡದಲ್ಲಿ ಸಾಕಷ್ಟು ರನ್ ಗಳಿಸಿದ್ದೆ ಆದರೂ ಟೀಮ್ ಇಂಡಿಯಾಗೆ ಆಯ್ಕೆಯಾಗದಿದ್ದಾಗ ಭಾರತ ಎ ತಂಡದ ಕೋಚ್ ಆಗಿದ್ದ ದ್ರಾವಿಡ್ ನನಗೆ ಮಾನಸಿಕವಾಗಿ ಬೆಂಬಲವನ್ನು ನೀಡಿದರು. ನೀನು ಕಠಿಣ ಪರಿಶ್ರಮವನ್ನು ಪಟ್ಟಿದ್ದೀಯ, ಹಾಗಾಗಿ ನೀನು ಈವರೆಗೂ ತಲುಪಿದ್ದೀಯ. ಇದು ನಿನ್ನಿಂದ ಮಾಡಲು ಸಾಧ್ಯವಾಗುವುದು. ಆಯ್ಕೆಯ ವಿಚಾರ ನಿನ್ನ ಕೈಯ್ಯಲಿಲ್ಲ. ಆಯ್ಕೆಗೆ ಸಾಕಷ್ಟು ಸಮೀಪದಲ್ಲಿ ನೀನು ಇದ್ದೀಯ ಎಂದು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದನ್ನು ಅಗರ್ವಾಲ್ ನೆನಪಿಸಿಕೊಂಡಿದ್ದಾರೆ.
ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗದ ಸಂದರ್ಭದಲ್ಲಿ ದ್ರಾವಿಡ್ ಆಡಿದ ಮಾತುಗಳು ನನಗೆ ಸಾಕಷ್ಟು ಧೈರ್ಯ ತುಂಬಿತ್ತು ಎಂದು ಅಗರ್ವಾಲ್ ಹೇಳಿದ್ದಾರೆ. ಅದಾದ ಬಳಿಕ ಮಯಾಂಕ್ ಅಗರ್ವಾಲ್ ಕೆಲವೇ ತಿಂಗಳಲ್ಲಿ ಟೀಮ್ ಇಂಡಿಯಾದಿಂದ ಕರೆಯನ್ನು ಸ್ವೀಕರಿಸಿದರು. 2018ರ ಬಾಕ್ಸಿಂಗ್ ಡೇ ಪಂದ್ಯದ ದಿನ ಅಂತಾರಾಷ್ಟ್ರೀಯ ಟೆಸ್ಟ್ಗೆ ಮಯಾಂಕ್ ಪದಾರ್ಪಣೆಯನ್ನು ಮಾಡಿದರು.