ಭಾರತದಲ್ಲಿ ದೇಶೀಯ ಟೂರ್ನಿ ವಿಜಯ್ ಹಜಾರೆ ಟ್ರೋಫಿ 2024ರ ಟೂರ್ನಿ ನಡೆಯುತ್ತಿದೆ. ಬಹುತೇಕ ಅನಾಮಧೇಯವಾಗಿ ಮರೆಯಾಗಿರುವ ಭಾರತ ತಂಡದ ಸ್ಟಾರ್ ಆಟಗಾರರು ಈ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಒಂದೆಡೆ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಅನುಭವಿ ಬ್ಯಾಟರ್ಗಳು ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದಾರೆ. ಮತ್ತೊಂದೆಡೆ, ಟೀಮ್ ಇಂಡಿಯಾದಿಂದ ಹೊರಗುಳಿದಿದ್ದ ಆಟಗಾರರು ಐಪಿಎಲ್ 2025ರ ಹರಾಜಿನಲ್ಲಿಯೂ ಮಾರಾಟವಾಗದೆ ಉಳಿದುಕೊಂಡಿದ್ದಾರೆ. ಆದರೆ ಇದೀಗ ವಿಜಯ್ ಹಜಾರೆ ಟ್ರೋಫಿ 2024ರ ಟೂರ್ನಿಯಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ.
ಕರ್ನಾಟಕ ತಂಡವನ್ನು ನಾಯಕನ್ನಾಗಿ ಮುನ್ನಡೆಸುತ್ತಿರುವ ಮಾಯಾಂಕ್ ಅರ್ಗವಾಲ್ ವಿಜಯ್ ಹಜಾರೆ ಟ್ರೋಫಿ 2024ರ ಟೂರ್ನಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡುತ್ತಿದ್ದಾರೆ. ಈ ಟೂರ್ನಿಯಲ್ಲಿ ಸತತ ಮೂರು ಪಂದ್ಯಗಳಲ್ಲಿ ಶತಕ ಬಾರಿಸಿದ್ದಾರೆ. ಈ ಮೂಲಕ ಇದರೊಂದಿಗೆ ತನ್ನ ಮೇಲೆ ವಿಶ್ವಾಸ ವ್ಯಕ್ತಪಡಿಸದ ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆದಿದ್ದಾರೆ.

ಇಂದು ವಿಜಯ್ ಹಜಾರೆ ಟ್ರೋಫಿಯ ಗುಂಪು ಪಂದ್ಯದಲ್ಲಿ ಕರ್ನಾಟಕ ಮತ್ತು ಹೈದರಾಬಾದ್ ನಡುವೆ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಅಮೋಘ ಶತಕ ಸಿಡಿಸಿ ಮಿಂಚಿದ್ದಾರೆ. ಅವರು 112 ಎಸೆತಗಳಲ್ಲಿ 15 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 124 ರನ್ ಗಳಿಸಿದ್ದಾರೆ. ಇದರೊಂದಿಗೆ ಮಾಯಾಂಕ್ ತಮ್ಮ ಟೀಕಾಕಾರರಿಗೆ ತಕ್ಕ ಉತ್ತರವನ್ನೂ ನೀಡಿದ್ದಾರೆ.
ಇದಕ್ಕೂ ಮುನ್ನ ಮಯಾಂಕ್ ಮತ್ತೆರಡು ಶತಕ ಸಿಡಿಸಿದ್ದಾರೆ. ಅವರು ಪಂಜಾಬ್ ವಿರುದ್ಧ ತಮ್ಮ ಮೊದಲ ಶತಕ ಗಳಿಸಿದರೆ, ಎರಡನೇ ಶತಕವನ್ನು ಅರುಣಾಚಲ ಪ್ರದೇಶದ ವಿರುದ್ಧ ಸಿಡಿಸಿದ್ದರು. ಪಂಜಾಬ್ ವಿರುದ್ಧ ಅವರು 127 ಎಸೆತಗಳಲ್ಲಿ 17 ಬೌಂಡರಿ ಮತ್ತು 3 ಸಿಕ್ಸರ್ಗಳೊಂದಿಗೆ 139* ರನ್ ಗಳಿಸಿದರು. ಅರುಣಾಚಲ ಪ್ರದೇಶ ಎದುರು 54 ಎಸೆತಗಳಲ್ಲಿ ಕ್ರಮವಾಗಿ 7 ಬೌಂಡರಿ ಮತ್ತು 7 ಸಿಕ್ಸರ್ಗಳೊಂದಿಗೆ 100 ರನ್ ಕಲೆ ಹಾಕಿದ್ದರು.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ) 2025ರ ಟೂರ್ನಿಗಾಗಿ ಸನ್ರೈಸರ್ಸ್ ಹೈದರಾಬಾದ್ ಈ ಬಾರಿ ಮಯಾಂಕ್ ಅಗರ್ವಾಲ್ ಅವರನ್ನು ಉಳಿಸಿಕೊಂಡಿಲ್ಲ. ಇದಾದ ನಂತರ ಯಾವುದೇ ಫ್ರಾಂಚೈಸಿ ಐಪಿಎಲ್ ಮೆಗಾ ಹರಾಜಿನಲ್ಲಿ ಅವರನ್ನು ಖರೀದಿಸಲಿಲ್ಲ. ಮಯಾಂಕ್ ಭಾರತ ಪರ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಆಡಿದ್ದಾರೆ. ಉತ್ತಮ ಪ್ರದರ್ಶನ ನೀಡಿದರೂ ಮಯಾಂಕ್ ಅವರನ್ನು ಭಾರತ ಕ್ರಿಕೆಟ್ ತಂಡದಿಂದ ಕೈಬಿಡಲಾಗಿದೆ. ಇದೀಗ ಶತಕದ ಮೇಲೆ ಶತಕ ಸಿಡಿಸಿರುವ ಮಾಯಾಂಕ್ ಅರ್ಗವಾಲ್ ಟೀಮ್ ಇಂಡಿಯಾ ಕದ ತಟ್ಟಿದ್ದಾರೆ.