ದೇಶೀಯ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವ ಕರ್ನಾಟಕ, ಮತ್ತೊಂದು ಸವಾಲಿಗೆ ಸಿದ್ಧವಾಗುತ್ತಿದೆ. ರಣಜಿ ಟ್ರೋಫಿಯ ಮುಂದಿನ ಪಂದ್ಯಕ್ಕೆ ಕರ್ನಾಕಟ ತಂಡವನ್ನು ಪ್ರಕಟಿಸಲಾಗಿದ್ದು, ಮಯಾಂಕ್ ಅಗರ್ವಾಲ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಸ್ಟಾರ್ ಆಲ್ರೌಂಡರ್ ಶ್ರೇಯಸ್ ಗೋಪಾಲ್ ಉಪ ನಾಯಕರಾಗಿ ನೇಮಕರಾಗಿದ್ದಾರೆ.
ಕರ್ನಾಟಕ ತಂಡ ರಣಜಿ ಟೂರ್ನಿಯಲ್ಲಿ ಸಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಆಡಿರುವ 5 ಪಂದ್ಯಗಳಲ್ಲಿ ಕೇವಲ 1 ಜಯ ದಾಖಲಿಸಿದೆ. ಕರ್ನಾಟಕದ ಬುಟ್ಟಿಯಲ್ಲಿ 12 ಅಂಕಗಳು ಇದ್ದು ನಾಲ್ಕನೇ ಸ್ಥಾನದಲ್ಲಿದೆ. ಇನ್ನು ರಣಜಿ ಟ್ರೋಫಿಯಲ್ಲಿ ಕರ್ನಾಟಕ ಇನ್ನು ಮುಂದಿನ ಪಂದ್ಯದಲ್ಲಿ ಜ.23 ರಂದು ಪಂಜಾಬ್ ವಿರುದ್ಧ ಕಣಕ್ಕೆ ಇಳಿಯಲಿದೆ. ಇನ್ನು ಎರಡನೇ ಪಂದ್ಯದಲ್ಲಿ ಜ.30 ರಂದು ಹರಿಯಾಣ ವಿರುದ್ಧ ಎರಡನೇ ಪಂದ್ಯ ಆಡಲಿದೆ.

ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕದ ಆಟಗಾರರು ಅಮೋಘ ಪ್ರದರ್ಶನ ನೀಡಿದ್ದಾರೆ. ನಾಯಕ ಮಯಾಂಕ್ ಅಗರ್ವಾಲ್ ಆಡಿದ 10 ಪಂದ್ಯಗಳಲ್ಲಿ 605 ರನ್ ಸಿಡಿಸಿದ್ದಾರೆ. ಇದರಲ್ಲಿ 4 ಶತಕ ಹಾಗೂ 1 ಅರ್ಧಶತಕ ಸೇರಿವೆ. ಇನ್ನು ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಆರ್.ಸ್ಮರಣ್ (432 ರನ್), ಕೆವಿ ಅನೀಶ್ (385 ರನ್), ಕೆಎಲ್ ಶ್ರೀಜೀತ್ (303 ರನ್), ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಲ್ಲದೆ ಈ ಎಲ್ಲ ಆಟಗಾರರು ಅಮೋಘ ಫಾರ್ಮ್ನಲ್ಲಿದ್ದು ಕರ್ನಾಟಕದ ಗೆಲುವಿನ ಆಸೆ ಚಿಗುರಿಸಿದೆ.
ಪಂಜಾಬ್ ವಿರುದ್ಧ ಪಂದ್ಯದಲ್ಲಿ ಕಣಕ್ಕೆ ಇಳಿಯುವ ತಂಡದಲ್ಲಿ ಎದ್ದು ಕಾಣುವ ಬೌಲರ್ ಎಂದರೆ ಶ್ರೇಯಸ್ ಗೋಪಾಲ್. ಇವರು ಸಹ ವಿಜಯ್ ಹಜಾರೆ ಟ್ರೋಫಿಯಲ್ಲಿ 18 ವಿಕೆಟ್ ಪಡೆದು ಅಬ್ಬರಿಸಿದ್ದಾರೆ. ಇನ್ನು ವೇಗಿ ವಾಸುಕಿ ಕೌಶಿಕ್ ಸಹ ಇಷ್ಟೇ ವಿಕೆಟ್ಗಳನ್ನು ಪಡೆದಿದ್ದು, ಬಿಳಿ ಜೆರ್ಸಿಯಲ್ಲಿ ಎದುರಾಳಿಗಳನ್ನು ಕಾಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಭಾರತ ಟೆಸ್ಟ್ ತಂಡದಿಂದ ದೂರ ಇರುವ ಮಯಾಂಕ್ ಅಗರ್ವಾಲ್ ತಮ್ಮ ಅಮೋಘ ಫಾರ್ಮ್ ಮುಂದುವರೆಸಿ ಮತ್ತೆ ಟೆಸ್ಟ್ ತಂಡವನ್ನು ಸೇರುವ ಕನಸಿನಲ್ಲಿದ್ದಾರೆ. ಮಯಾಂಕ್ ಭಾರತದ ಪರ 21 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 4 ಶತಕ, 6 ಅರ್ಧಶತಕಗಳೊಂದಿಗೆ 1488 ರನ್ ಸಿಡಿಸಿದ್ದಾರೆ.

ಕರ್ನಾಟಕ ತಂಡ: ಮಯಾಂಕ್ ಅಗರ್ವಾಲ್ (ನಾಯಕ), ಶ್ರೇಯಸ್ ಗೋಪಾಲ್ (ಉಪನಾಯಕ), ದೇವದತ್ ಪಡಿಕ್ಕಲ್, ಕೆ.ವಿ. ಅನೀಶ್, ಆರ್. ಸ್ಮರಣ್, ಕೆ.ಎಲ್. ಶ್ರೀಜಿತ್ (ವಿಕೆಟ್ ಕೀಪರ್), ಅಭಿನವ್ ಮನೋಹರ್, ಹಾರ್ದಿಕ್ ರಾಜ್, ಪ್ರಸಿದ್ಧ್ ಕೃಷ್ಣ, ವಾಸುಕಿ ಕೌಶಿಕ್, ಅಭಿಲಾಷ್ ಶೆಟ್ಟಿ, ಯಶೋವರ್ಧನ್ ಪರಂತಪ್, ನಿಕ್ಕಿನ್ ಜೋಸ್, ವಿದ್ಯಾಧರ್ ಪಾಟೀಲ್, ಸುಜಯ್ ಸಥೇರಿ (ವಿಕೆಟ್ ಕೀಪರ್), ಮೊಹ್ಸಿನ್ ಖಾನ್.