ಗ್ವಾಲಿಯರ್: ಭಾರತ ಹಾಗೂ ಬಾಂಗ್ಲಾದೇಶ ವಿರುದ್ಧದ ಮೊದಲ ಟಿ20 ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ಈ ಪಂದ್ಯದಲ್ಲಿ ನಿರೀಕ್ಷೆಯಂತೆ ಐಪಿಎಲ್ನಲ್ಲಿ ಮಿಂಚಿದ ಸ್ಟಾರ್ ಆಟಗಾರರಿಗೆ ಅವಕಾಶ ಸಿಕ್ಕಿದೆ. ಇಬ್ಬರು ಯುವ ಆಟಗಾರರು ಗ್ವಾಲಿಯರ್ನಲ್ಲಿ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯ ಆಡಿದರು.
ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ್ದ ಮಯಾಂಕ್ ಯಾದವ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡದ ಪರ ಅಬ್ಬರಿಸಿದ್ದ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಪದಾರ್ಪಣೆ ಮಾಡಿದರು. ಭರವಸೆಯ ಆಟಗಾರರು ಅನುಪಸ್ಥಿತಿಯಲ್ಲಿ ಈ ಯುವ ಆಟಗಾರರಿಗೆ ಅವಕಾಶ ಸಿಕ್ಕಿದೆ.

ಟಿ20 ಸರಣಿಗೂ ಮುನ್ನ ಟೀಮ್ ಇಂಡಿಯಾದ ನಾಯಕ ಸೂರ್ಯಕುಮಾರ್ ಯಾದವ್ ಅವರು ಮಯಾಂಕ್ ಯಾದವ್ ಅವರು ಎಕ್ಸ್ ಫ್ಯಾಕ್ಟರ್ ಆಗಬಲ್ಲರು ಎಂದು ತಿಳಿಸಿದ್ದರು. ಹೀಗಾಗಿ ಇವರು ಮೈದನಾಕ್ಕೆ ಇಳಿಯುವುದು ಪಕ್ಕಾ ಆದಂತೆ ಕಾಣುತ್ತಿತ್ತು.
ಐಪಿಎಲ್ 2024 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಅಬ್ಬರಿಸಿದ್ದ ಮಯಾಂಕ್, ಗಂಟೆಗೆ 150 ಕಿಮಿ ವೇಗದಲ್ಲಿ ನಿರಂತರವಾಗಿ ಬೌಲಿಂಗ್ ಮಾಡಬಲ್ಲರು. ಅಲ್ಲದೆ ಕಳೆದ ಆವೃತ್ತಿಯಲ್ಲಿ ಗಂಟೆಗೆ 156.7 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿ ಎಲ್ಲರ ಗಮನ ಸೆಳೆದಿದ್ದರು. ಇದೀಗ ಟೀಂ ಇಂಡಿಯಾ ಪರ ಮಯಾಂಕ್ ಉತ್ತಮ ಬೌಲಿಂಗ್ ಮಾಡಿದ್ದಾರೆ.

ನಿತೀಶ್ ಕುಮಾರ್ ರೆಡ್ಡಿ, ಸನ್ರೈಸರ್ಸ್ ತಂಡದ ಸ್ಟಾರ್ ಆಟಗಾರ. ಐಪಿಎಲ್ 2023ರಲ್ಲಿ ಇವರಿಗೆ ಹೆಚ್ಚಿನ ಅವಕಾಶಗಳು ಲಭಿಸಿರಲಿಲ್ಲ. ಆದರೆ 17ನೇ ಆವೃತ್ತಿಯ ಐಪಿಎಲ್ನಲ್ಲಿ ಇವರು ಆಡಿದ 13 ಪಂದ್ಯಗಳಲ್ಲಿ 3 ವಿಕೆಟ್ ಪಡೆದಿದ್ದು, 2 ಅರ್ಧಶತಕದ ನೆರವಿನಿಂದ 313 ರನ್ ಸಿಡಿಸಿದ್ದಾರೆ. ಆಲ್ರೌಂಡರ್ ಆಟದ ಮೂಲಕ ಗಮನ ಸೆಳೆದ ಯುವ ಬ್ಯಾಟರ್ ಬಿಸಿಸಿಐ ಆಯ್ಕೆ ಸಮಿತಿಯ ಚಿತ್ತವನ್ನು ಕದ್ದಿದ್ದರು. ಈಗ ಇವರಿಗೆ ಭಾರತ ತಂಡದ ಪರ ಆಡುವ ಅವಕಾಶ ಸಿಕ್ಕಿದೆ.
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಪಂದ್ಯ ದೆಹಲಿಯಲ್ಲಿ ಅಕ್ಟೋಬರ್ 9 ರಂದು ಮತ್ತು ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯ ಅಕ್ಟೋಬರ್ 12 ರಂದು ಹೈದರಾಬಾದ್ನಲ್ಲಿ ನಡೆಯಲಿದೆ.