ಕಳೆದ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅಮೋಘ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದ, ಯುವ ವೇಗದ ಬೌಲರ್ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ಈ ವೇಗದ ಬೌಲರ್ ಬಹು ಬೇಗ ಟೀಮ್ ಇಂಡಿಯಾಕ್ಕೆ ಎಂಟ್ರಿ ನೀಡಬಹುದು ಎಂದು ಅಂದಾಜಿಸಲಾಗಿತ್ತು. ಈ ಕನಸು ಈಗ ನನಸಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ತನ್ನ ಬಿಗುವಿನ ದಾಳಿಯ ಮೂಲಕ ಅಬ್ಬರಿಸಿದ್ದ ಮಯಾಂಕ್ ಯಾದವ್ಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ನೀಡಲಾಗಿದೆ.
ಭಾರತ ಹಾಗೂ ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಸರಣಿ ಮುಗಿದ ಬಳಿಕ, ಉಭಯ ತಂಡಗಳ ನಡುವೆ ಟಿ20 ಸರಣಿ ನಡೆಯಲಿದೆ. ಈ ನಿಟ್ಟಿನಲ್ಲಿ ಬಿಸಿಸಿಐ 15 ಸದಸ್ಯರ ತಂಡವನ್ನು ಪ್ರಕಟಿಸಿದ್ದು, ಸೂರ್ಯಕುಮಾರ್ ಯಾದವ್ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಟಿ20 ತಂಡಕ್ಕೆ ಹಲವು ಸ್ಟಾರ್ ಆಟಗಾರರು ಕಂ ಬ್ಯಾಕ್ ಮಾಡಿದ್ದಾರೆ. ಅನುಭವಿಗಳ ಜೊತೆ ಯುವ ಆಟಗಾರರಿಗೆ ಬಿಸಿಸಿಐ ಮಣೆ ಹಾಕಿದೆ.

ಐಪಿಎಲ್ನಲ್ಲಿ ಮಿಂಚು ಹರಿಸಿದ್ದ ವೇಗದ ಸೂಪರ್ ಸ್ಟಾರ್ ಮಯಾಂಕ್ ಯಾದವ್ ಅವರಿಗೆ ಇದೇ ಮೊದಲು ಬಾರಿಗೆ ಭಾರತ ತಂಡದಲ್ಲಿ ಆಡುವ ಅವಕಾಶ ನೀಡಲಾಗಿದೆ. ಮಯಾಂಕ್ ಯಾದವ್ ಮೊದಲ ಬಾರಿಗೆ ಟೀಂ ಇಂಡಿಯಾದ ಭಾಗವಾಗಿದ್ದಾರೆ. ಮಯಾಂಕ್ ಅವರು ಐಪಿಎಲ್ 2024 ರಲ್ಲಿ ಗಾಯದ ಸಮಸ್ಯೆಯಿಂದ ಹೆಚ್ಚಿನ ಪಂದ್ಯಗಳಲ್ಲಿ ಆಡಿರಲಿಲ್ಲ. ಆದರೆ ಆಡಿದ ಎಲ್ಲ ಪಂದ್ಯಗಳಲ್ಲೂ ಮಯಾಂಕ್ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು.
ಮಯಾಂಕ್ ಯಾದವ್ ಐಪಿಎಲ್ನಲ್ಲಿ ವೇಗದ ದಾಳಿಯನ್ನು ಸಂಘಟಿಸಿದ್ದರು. ಇವರು ಗಾಯಕ್ಕೆ ತುತ್ತಾದ ಬಳಿಕ ಇವರ ಮೇಲೆ ಬಿಸಿಸಿಐ ಒಂದು ಕಣ್ಣು ನೆಟ್ಟಿತ್ತು. ಮಯಾಂಕ್ ಯಾದವ್ ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಬಿಗುವಿನ ದಾಳಿ ನಡೆಸಿದ್ದರು. ಅಲ್ಲದೆ ಐಪಿಎಲ್ ಇತಿಹಾಸದಲ್ಲಿ ಅತಿ ವೇಗದ ಬೌಲ್ ಎಸೆದ ಬೌಲರ್ಗಳ ಪಟ್ಟಿಯಲ್ಲಿ ಹೆಸರು ಪಡೆದಿದ್ದಾರೆ. ಅವರು ನಾಲ್ಕು ಪಂದ್ಯಗಳನ್ನು ಆಡಿ 7 ವಿಕೆಟ್ ಪಡೆದಿದ್ದಾರೆ. ಅಲ್ಲದೆ 14 ರನ್ ನೀಡಿ ಮೂರು ವಿಕೆಟ್ ಕಬಳಿಸಿದ್ದು, ಅವರ ಅಮೋಘ ಸಾಧನೆ ಆಗಿದೆ.

ಮಯಾಂಕ್ ಅವರ ವೇಗದ ಎಸೆತಗಳ ಬಗ್ಗೆ ದೊಡ್ಡ ಚರ್ಚೆ ನಡೆದಿತ್ತು. ಇವರು ಐಪಿಎಲ್ನಲ್ಲಿ ಗಂಟೆಗೆ 145ಕ್ಕೂ ಹೆಚ್ಚಿನ ಕಿಲೋ ಮೀಟರ್ ವೇಗದಲ್ಲಿ ಚೆಂಡನ್ನು ಎಸೆಯುತ್ತಿದ್ದರು. ಐಪಿಎಲ್ 2024 ರ ಸಮಯದಲ್ಲಿ ಗಾಯಕ್ಕೆ ತುತ್ತಾದ ಬಳಿಕ, ಮಯಾಂಕ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಬಹು ಕಾಲ ಬೆವರು ಹರಿಸಿದ್ದಾರೆ. ಮಯಾಂಕ್ ಯಾದವ್ ಇದುವರೆಗೆ ಲಿಸ್ಟ್ ಎ ನಲ್ಲಿ 17 ಪಂದ್ಯಗಳನ್ನು ಮತ್ತು ಟಿ20 ಯಲ್ಲಿ 14 ಪಂದ್ಯಗಳನ್ನು ಆಡಿದ್ದಾರೆ. ಮಯಾಂಕ್ ಲಿಸ್ಟ್-ಎ ಯಲ್ಲಿ 34 ಮತ್ತು ಟಿ20 ಯಲ್ಲಿ 19 ವಿಕೆಟ್ಗಳನ್ನು ಪಡೆದಿದ್ದಾರೆ.
ಸದ್ಯ ಭಾರತ ಹಾಗೂ ಬಾಂಗ್ಲಾದೇಶಗಳ ನಡುವಣ ಟೆಸ್ಟ್ ಸರಣಿ ನಡೆಯುತ್ತಿದೆ. ಈ ಸರಣಿ ಮುಗಿದ ಬಳಿಕ ಉಭಯ ತಂಡಗಳ ನಡುವೆ ಟಿ20 ಸರಣಿ ನಡೆಯಲಿದೆ. ಇದಾದ ಬಳಿಕ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲಿದ್ದು, ಇದಕ್ಕಾಗಿ ಇನ್ನು ತಂಡವನ್ನು ಪ್ರಕಟಿಸಿಲ್ಲ. ಈ ಸರಣಿ ಬಳಿಕ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಹು ನಿರೀಕ್ಷಿತ ಬಾರ್ಡರ್ ಗವಾಸ್ಕರ್ ಕ್ರಿಕೆಟ್ ಸರಣಿ ನಡೆಯಲಿದೆ. ಈ ಸರಣಿಗೂ ಮಯಾಂಕ್ ಯಾದವ್ ಅವರನ್ನು ಆಯ್ಕೆ ಮಾಡುವ ಸಂಭವವಿದೆ.