ಕರ್ನಾಟಕ ತಂಡ ರಣಜಿ ಟ್ರೋಫಿಯ ಎಲೈಟ್ ಬಿ ಗ್ರುಪ್ನಲ್ಲಿ ಮಹಾರಾಷ್ಟ್ರ ವಿರುದ್ಧ ಡ್ರಾ ಸಾಧಿಸಿದೆ. ಈ ಮೂಲಕ ಮಯಾಂಕ್ ಪಡೆ ಬಿ ಗುಂಪಿನ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಕರ್ನಾಟಕ ಆಡಿದ 4 ಪಂದ್ಯಗಳಲ್ಲಿ 1 ಗೆಲುವು, 3 ಸೋಲು ಕಂಡಿದ್ದು, 14 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.
ಮಂಗಳವಾರ ಕರ್ನಾಟಕ ಎರಡನೇ ಇನಿಂಗ್ಸ್ನಲ್ಲಿ 5 ವಿಕೆಟ್ಗೆ 144 ರನ್ಗಳಿಗೆ ಆಟವನ್ನು ಮುಂದುವರಿಸಿತು. 6ನೇ ವಿಕೆಟ್ಗೆ ಮಯಾಂಕ್ ಅಗರ್ವಾಲ್ ಹಾಗೂ ಅಭಿನವ್ ಮನೋಹರ್ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಜೋಡಿ 92 ರನ್ಗಳ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ಆಧಾರವಾಯಿತು. ಈ ವೇಳೆ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ನಾಯಕ ಮಯಾಂಕ್ ಅಗರ್ವಾಲ್ 249 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಹಾಯದಿಂದ 103 ರನ್ ಬಾರಿಸಿ ಔಟ್ ಆದರು.

ಭರವಸೆಯ ಅಟಗಾರ ಅಭಿನವ್ ಮನೋಹರ್ ಸೊಗಸಾದ ಆಟದ ಪ್ರದರ್ಶನ ನೀಡಿದರು. ಇವರು 160 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್ ಸಹಾಯದಿಂದ 96 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಆಲ್ರೌಂಡರ್ ಶ್ರೇಯಸ್ ಗೋಪಾಲ್ ಅಜೇಯ 25 ರನ್ ಸಿಡಿಸಿದರು. ಅಂತಿಮವಾಗಿ ಕರ್ನಾಟಕ 8 ವಿಕೆಟ್ಗೆ 310 ರನ್ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಮಹಾರಾಷ್ಟ್ರ ಪರ ಮುಖೇಶ್ ಚೌಧರಿ 3, ವಿಕ್ಕಿ ಒಸ್ತವ್ 2 ವಿಕೆಟ್ ಪಡೆದರು. ಈ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿದ ಆಲ್ರೌಂಡರ್ ಶ್ರೇಯಸ್ ಗೋಪಾಲ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು.
ಜಮ್ಮು ಕಾಶ್ಮೀರ್ ಪ್ರಸಕ್ತ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿದೆ. ಮಂಗಳವಾರ ಇತಿಹಾಸ ಬರೆದಿರುವ ಜಮ್ಮು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಮೊದಲ ಬಾರಿಗೆ ದೆಹಲಿ ತಂಡವನ್ನು ಮಣಿಸಿದೆ. ಜಮ್ಮು ಕಾಶ್ಮೀರ್ ಮಂಗಳವಾರ ನಡೆದ ನಾಲ್ಕನೇ ದಿನದಾಟವನ್ನು 2 ವಿಕೆಟ್ಗೆ 55 ರನ್ಗಳಿಂದ ಆಟ ಮುಂದುವರಿಸಿತು. ಜಮ್ಮು ತಂಡದ ಪರ ಒಮ್ರನ್ ಇಕ್ಬಾಲ್ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು 147 ಎಸೆತಗಳಲ್ಲಿ 20 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 133 ರನ್ ಸಿಡಿಸಿ ಜಯದಲ್ಲಿ ಮಿಂಚಿದರು. ಅಂತಿಮವಾಗಿ ಜಮ್ಮು 3 ವಿಕೆಟ್ಗೆ 179 ರನ್ ಸೇರಿಸಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದೆಹಲಿ ಮೊದಲ ಇನಿಂಗ್ಸ್ನಲ್ಲಿ 211 ರನ್ ಬಾರಿಸಿದರೆ, ಜಮ್ಮು ಮೊದಲ ಇನಿಮಗ್ಸ್ನಲ್ಲಿ 310 ರನ್ ಸೇರಿಸಿತು. ಎರಡನೇ ಇನಿಂಗ್ಸ್ನಲ್ಲಿ ದೆಹಲಿ 277 ರನ್ ಕಲೆ ಹಾಕಿ ಆಲೌಟ್ ಆಯಿತು. ಈ ಗೆಲುವಿನ ಮೂಲಕ ಜಮ್ಮು ಆಡಿದ 3 ಪಂದ್ಯಗಳಲ್ಲಿ 2 ಜಯ, 1 ಡ್ರಾ ಸಾದಿಸಿದ್ದು, 15 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.