ಆರ್ಸಿಬಿಯ ಆ ಒಂದು ಸೋಲಿನ ಬಗ್ಗೆ ರಾಹುಲ್ ಇಂದಿಗೂ ನನ್ನ ಜೊತೆ ಮಾತಾಡ್ತಾರೆ: ನೋವು ಬಿಚ್ಚಿಟ್ಟ ಕೊಹ್ಲಿ

ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾದಾಗಿನಿಂದ ಇಲ್ಲಿಯವರೆಗೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಬಿಟ್ಟು ಇತರೆ ಯಾವುದೇ ಫ್ರಾಂಚೈಸಿ ಪರ ಕೂಡ ಪಂದ್ಯವನ್ನು ಆಡದೇ ಇರುವಂತಹ ಆಟಗಾರ. 2008ರಿಂದ 2012ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರನಾಗಿದ್ದ ವಿರಾಟ್ ಕೊಹ್ಲಿ 2013ರಿಂದ 2021ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿವರೆಗೆ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು. ಹೌದು, ಕಳೆದ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿದ್ದ ವಿರಾಟ್ ಕೊಹ್ಲಿ ಸ್ವಇಚ್ಛೆಯಿಂದ ನಾಯಕತ್ವವನ್ನು ತ್ಯಜಿಸಿ ಸದ್ಯ ಓರ್ವ ಆಟಗಾರನಾಗಿ ಮಾತ್ರ ಫ್ರಾಂಚೈಸಿಯಿಂದ ರಿಟೈನ್ ಆಗಿ ತಂಡದಲ್ಲಿಯೇ ಉಳಿದುಕೊಂಡಿದ್ದಾರೆ.
ಹೀಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಖಾಯಂ ಸದಸ್ಯನಾಗಿರುವ ವಿರಾಟ್ ಕೊಹ್ಲಿಗೆ ಬೆಂಗಳೂರು ತಂಡದ ಮೇಲೆ ಇರುವಂತಹ ಅಪಾರವಾದ ಪ್ರೀತಿ ಮತ್ತು ಗೌರವದ ಬಗ್ಗೆ ಹೆಚ್ಚೇನು ಬಿಡಿಸಿ ಹೇಳಬೇಕಾಗಿಲ್ಲ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಇದುವರೆಗೂ ಒಟ್ಟು 3 ಬಾರಿ ಫೈನಲ್ ಪ್ರವೇಶಿಸಿ 3 ಬಾರಿಯೂ ಕೂಡ ಟ್ರೋಫಿ ಎತ್ತಿ ಹಿಡಿಯುವಲ್ಲಿ ವಿಫಲವಾಗಿದೆ. 2016ರಲ್ಲಿಯೂ ಸಹ ಯಶಸ್ವಿಯಾಗಿ ಫೈನಲ್ ಹಂತಕ್ಕೆ ಲಗ್ಗೆ ಇಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆ ರೋಚಕ ಹಣಾಹಣಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಸೋಲುವುದರ ಮೂಲಕ ಚಾಂಪಿಯನ್ಸ್ ಆಗಿ ಹೊರ ಹೊಮ್ಮುವ ಅವಕಾಶವನ್ನು ಕೈ ತಪ್ಪಿಸಿಕೊಂಡಿತ್ತು.
ಬೆಂಗಳೂರಿನ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 208 ರನ್ ಕಲೆಹಾಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ 209 ರನ್ಗಳ ಗುರಿಯನ್ನು ನೀಡಿತ್ತು. ತವರು ನೆಲದಲ್ಲಿ ಈ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 200 ರನ್ ಕಲೆ ಹಾಕುವುದರ ಮೂಲಕ 8 ರನ್ಗಳ ಸೋಲನ್ನುಂಡು ಚಾಂಪಿಯನ್ಸ್ ಆಗಿ ಹೊರಹೊಮ್ಮುವಲ್ಲಿ ಅಂತಿಮ ಹಂತದಲ್ಲಿ ಎಡವಿತ್ತು. ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದರೂ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂತಿಮವಾಗಿ ವಿಫಲವಾದದ್ದು ಆ ತಂಡದಲ್ಲಿದ್ದ ಪ್ರತಿಯೊಬ್ಬ ಆಟಗಾರನಿಗೂ ಕೂಡ ದೊಡ್ಡ ಮಟ್ಟದ ಬೇಸರ ಮೂಡಿಸಿತ್ತು. ಈ ಸೋಲು ಅಂದು ತಂಡದ ಭಾಗವಾಗಿದ್ದ ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಇಂದಿಗೂ ಸಹ ಕಾಡುತ್ತಿದೆ. ಹೌದು, ಆ ಪಂದ್ಯದ ಸೋಲಿನ ಕುರಿತು ಕೆ ಎಲ್ ರಾಹುಲ್ ವಿರಾಟ್ ಕೊಹ್ಲಿ ಜೊತೆ ಆಗಾಗ ಮಾತನಾಡುವ ವಿಷಯವನ್ನು ಸ್ವತಃ ವಿರಾಟ್ ಕೊಹ್ಲಿ ಈ ಕೆಳಕಂಡಂತೆ ಬಿಚ್ಚಿಟ್ಟಿದ್ದಾರೆ.

ಆ ಸೋಲು ಇಂದಿಗೂ ನನ್ನನ್ನು ಕಾಡುತ್ತಿದೆ
2016ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋತಿದ್ದರ ಕುರಿತು ಮಾತನಾಡಿರುವ ವಿರಾಟ್ ಕೊಹ್ಲಿ ನಮ್ಮದೇ ತವರಿನಲ್ಲಿ ಆಯೋಜನೆಯಾಗಿದ್ದ ಆ ಫೈನಲ್ ಪಂದ್ಯದಲ್ಲಿ ಸೋಲುವುದೆಂದರೆ ಹೇಗೆ ಸಾಧ್ಯ ಎಂದು ಬೇಸರ ವ್ಯಕ್ತಪಡಿಸಿದರು. ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನವನ್ನು ನೀಡುತ್ತಾ ಬಂದಿದ್ದ ನಾವು ಆ ಪಂದ್ಯದ 9 ಓವರ್ ಮುಕ್ತಾಯವಾದ ಬಳಿಕ ಯಾವುದೇ ವಿಕೆಟ್ ಕಳೆದುಕೊಳ್ಳದೇ 100 ರನ್ ಗಡಿ ದಾಟಿದ್ದೆವು ಆದರೆ ನಂತರ ಸೋಲು ಕಂಡೆವು ಎಂದು ವಿರಾಟ್ ಕೊಹ್ಲಿ ಆ ಸೋಲಿನ ಕುರಿತ ನೋವನ್ನು ಹೊರಹಾಕಿದ್ದಾರೆ.

ಕೆಎಲ್ ರಾಹುಲ್ ಇಂದಿಗೂ ಚಿಂತಿಸುತ್ತಾರೆ
ಇನ್ನೂ ಮುಂದುವರಿದು ಆ ದೊಡ್ಡ ಸೋಲಿನ ಕುರಿತು ಮಾತನಾಡಿರುವ ವಿರಾಟ್ ಕೊಹ್ಲಿ ಆ ಪಂದ್ಯದ ಹೈಲೈಟ್ಸ್ ಪ್ರಸಾರವಾದಾಗಲೆಲ್ಲಾ ಕೆಎಲ್ ರಾಹುಲ್ ಆ ಪಂದ್ಯದ ಸ್ಕ್ರೀನ್ ಶಾಟ್ ತೆಗೆದು ನನಗೆ ಕಳುಹಿಸಿ ಬೇಸರವನ್ನು ವ್ಯಕ್ತ ಪಡಿಸುತ್ತಾರೆ ಎಂಬ ವಿಷಯವನ್ನು ಬಿಚ್ಚಿಟ್ಟಿದ್ದಾರೆ. ಆ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದ ಕೆಎಲ್ ರಾಹುಲ್ ಇಂದಿಗೂ ಸಹ ಆ ಸೋಲಿನ ನೋವು ನನ್ನನ್ನು ಕಾಡುತ್ತದೆ ಎಂದು ವಿರಾಟ್ ಕೊಹ್ಲಿ ಬಳಿ ಹೇಳಿಕೊಳ್ಳುತ್ತಿರುತ್ತಾರಂತೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕೆಎಲ್ ರಾಹುಲ್ ಆ ಪಂದ್ಯದಲ್ಲಿ 9 ಎಸೆತಗಳಿಗೆ 11 ರನ್ ಬಾರಿಸುವ ಮೂಲಕ ತಂಡಕ್ಕೆ ದೊಡ್ಡ ಕೊಡುಗೆ ನೀಡುವಲ್ಲಿ ವಿಫಲರಾಗಿದ್ದರು.

ಆ ಟೂರ್ನಿಯಲ್ಲಿ ಅಬ್ಬರಿಸಿದ ವಿರಾಟ್ ಕೊಹ್ಲಿ
ಇನ್ನು ಆ ದೊಡ್ಡ ಸೋಲಿನ ಕುರಿತು ಮೆಲುಕು ಹಾಕಿರುವ ವಿರಾಟ್ ಕೊಹ್ಲಿ ಆ ಟೂರ್ನಿಯುದ್ದಕ್ಕೂ ಅಬ್ಬರಿಸಿ ಬೊಬ್ಬಿರಿದಿದ್ದರು. ಹೌದು, 2016ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೀಡಿದ ಅಮೋಘ ಪ್ರದರ್ಶನವನ್ನು ಇತರೆ ಯಾವುದೇ ಟೂರ್ನಿಯಲ್ಲಿಯೂ ಕೂಡ ಬೇರೆ ಯಾವುದೇ ಆಟಗಾರರು ನೀಡಲಾಗಿಲ್ಲ. ಆ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ 973 ರನ್ ಚಚ್ಚುವುದರ ಮೂಲಕ ಆರೆಂಜ್ ಕ್ಯಾಪ್ ವಿಜೇತರಾಗಿ ಹೊರಹೊಮ್ಮಿದರು ಹಾಗೂ ಇದು ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿಯೇ ಆವೃತ್ತಿಯೊಂದರಲ್ಲಿ ಬ್ಯಾಟ್ಸ್ಮನ್ ಗಳಿಸಿದ ಅತಿ ಹೆಚ್ಚು ರನ್ ಎಂಬ ದಾಖಲೆಯಾಗಿ ಉಳಿದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications